Saturday 17 September 2016

ಮತ್ತೆ ಬರುವೆ ......ಸೂರ್ಯ(SUN)

ಹೋಗುತಿಹುದು ಕೊನೆಯ ಪಯಣ
ನೆರೆದ ನೂರು ಜನರ ಮಧ್ಯೆ,
ಪಡೆದುಕೊಂಡು ಅಂತಿಮ ನಮನ
ನಾಲ್ಕು ಜನರ ಹೆಗಲ ಮೇಲೆ.

ಅಳುತ ಕಳುಹಿದಿರೆಂದರೆ ನೀವು
ನನಗದೆಲ್ಲಿಯ ಶಾಂತಿ ...? ನೆಮ್ಮದಿ ..?
ಹರುಷದಿ ಕಳುಹಿರಿಂದೆನ್ನನು
ಮರುಜನ್ಮವಿದ್ದರೆ ಮತ್ತೆ ಬರುವೆ.

ಉದಯಾಸ್ತಮಾನದ ನಡುವೆ
ಸುದೈವದ ಕೈಕೆಳಗೆ - ಅಂತೆ
ಬಣ್ಣ ಹಚ್ಚಿ ಪಾತ್ರ ನಿರ್ವಹಿಸಿ
ನಿಶ್ಚಿಂತನಾಗಿ ಹೊರಟಿರುವ ನಸುನಗುತ:

ತಂದೆ ಎಂದರೆ ನನಗಾದೀತು
ತೊಂದರೆ ; ಯಾಕೆಂದರೆ .....?
ನಾನಾಗಲಿಲ್ಲ ಆದರ್ಶ ತಂದೆ,
ಮತ್ತೆ ಬರುವೆ ಮಗನ ಮಗನಾಗಿ.

ಒಲವಿನೊಡಲ ಮಡದಿಯೇ
ಕ್ಷಮಿಸೆನ್ನನು ; ದಡ ಸೇರಿಸದೇ
ಭವ ಸಾಗರದ ನಡು ನೀರಿನಲ್ಲಿ
ದೂಡಿ ನಿನ್ನ ಹೊರಟು ಬಿಟ್ಟೆನು.

           - ಸತೀಶ ಉ ನಡಗಡ್ಡಿ