Thursday 5 October 2017

ನಾವು ಆಚರಿಸುವ ಮೊಹರಂ



ನಮ್ಮ ಊರಿನಲ್ಲಿ ಪ್ರತೀ ವರ್ಷ ಆಚರಿಸುವ ಈ ಹಬ್ಬದ ಬಗ್ಗೆ ಒಂದಿಷ್ಟು ಹೇಳಲೇಬೇಕೆನಿಸಿತು.

ಆ ಊರಲ್ಲಿ ಈ ಹಬ್ಬದ ಆಚರಣೆಯ ಪದ್ಧತಿ 18ನೇ ಶತಮಾನದಿಂದಲೂ ಬೆಳೆದು ಬಂದಿದೆ. ಶಹಾಬಂದರ ಊರಿನ ಪಶ್ಚಿಮಕ್ಕೆ ಇರುವ ಚಿಕ್ಕಲದಿನ್ನಿ ಗ್ರಾಮದ ಗುಡದಪ್ಪನಾಯಕ ಎಂಬ ಪಾಳೇಗಾರನು  ಚಿಕ್ಕಲದಿನ್ನಿಯನ್ನೊಳಗೊಂಡು ಶಹಾಬಂದರ, ಇಸ್ಲಾಂಪೂರ, ಬೀರನಹೊಳಿ, ಜಾರಕಿಹೊಳಿ, ಅರಳಿಕಟ್ಟಿ, ಬಸ್ಸಾಪುರ, ಹಗೆದಾಳ, ರಂಗದಹೊಳಿ, ಗುತ್ತಿ, ಪನಗುತ್ತಿ, ರಾಜಕಟ್ಟಿ, ಯಲ್ಲಾಪುರ, ಗೆಜಪತಿ, ಗುಟಗುದ್ದಿ ಹಳ್ಳಿಗಳನ್ನು ಅಳುತ್ತಿದ್ದನು. ಹೀಗಿದ್ದಾಗ ಒಂದು ದಿನ ರಾತ್ರಿಯಲ್ಲಿ ಐವರು ಮುಸಲ್ಮಾನ ಸಂತರು ಒಟ್ಟು ಮೂರು ಊರುಗಳಲ್ಲಿ ಮೂರು ಮಸೀದಿಗಳನ್ನು ನಿರ್ಮಿಸಿದರು (ಮಸೀದಿ ನಿರ್ಮಾಣದ ಕುರಿತಾಗಿ ನಾನು ಚಿಕ್ಕಂದಿನಲ್ಲಿ ನನ್ನ ಅಜ್ಜನ ಬಾಯಿಂದ ಕೇಳಿದ್ದು, ಅದರಲ್ಲಿ ಎಷ್ಟು ನಿಜ ಎಷ್ಟು ಸುಳ್ಳು ಎಂಬುದು ನನಗೆ ತಿಳಿದಿಲ್ಲ; ಬಹುಶ ಈ ಊರಿನ ಒಂದೊಂದು ಸ್ಥಳಕ್ಕೂ ಒಂದೊಂದು ಕಥೆ ಹೇಳಿದ್ದ ಅಜ್ಜ ಈಗ ಇಲ್ಲ ಎನ್ನುವುದು ಎಷ್ಟು ದಿಟವೋ ಆ ಕಥೆಗಳ ಅಸ್ತಿತ್ವವೂ ಅಷ್ಟೇ ದಿಟವಿರಬಹುದು.)

ಮೊದಲೆರಡು ಮಸೀದಿಗಳನ್ನು ಬೇರೆಯಲ್ಲೋ ಯಾವುದೊ ಊರ ಹೆಸರನ್ನು ಅಜ್ಜನ ಬಾಯಿಂದ ಕೇಳಿದ ನೆನಪು, ಆದರೆ ಈಗ ಹೊಳೆಯುತ್ತಿಲ್ಲ. ಇರಲಿ. ಮೂರನೇ ಈ ಊರಿಗೆ ಬಂದು ಮಸೀದಿ ಕಟ್ಟಿ ಮುಗಿಸುವಷ್ಟರಲ್ಲಿ ಬೆಳಗಿನ 5ಗಂಟೆ ಆಗಿತ್ತಂತೆ. ಆ ಹೊತ್ತಿಗೆ ಹೆಂಗಸೊಬ್ಬಳ ಬಳೆಯ ಸದ್ದಾಗಿ ಆ ಐವರು ಮುಸಲ್ಮಾನ ಸಂತರು ಅಲ್ಲಿಯೇ ಮಾಯವಾದರಂತೆ. ಮಸೀದಿಯನ್ನು ಕಟ್ಟಲು ಬೇಕಾದ ಕಲ್ಲುಗಳು ಭೂಮಿಯಿಂದ ತಾನಾಗೇ ಎದ್ದು ಉರುಳಿಕೊಂಡು ಮಸೀದಿ ಕಟ್ಟಡದ ಜಾಗದಲ್ಲಿ ಬರುತ್ತಿದ್ದವಂತೆ( ಇತ್ತೀಚಿನ 6-7 ವರ್ಷಗಳಲ್ಲಿ ಕಟ್ಟಲಾದ ಉರ್ದು ಪ್ರಾಥಮಿಕ ಶಾಲೆಯ ಅವರಣವೆಲ್ಲ ಅರೆ ಮೇಲೆದ್ದ ಬಂಡೆಗಳಿಂದ ಮತ್ತು ತಗ್ಗುಗಳಿಂದ ಕೂಡಿತ್ತು). ಹೆಂಗಸಿನ ಬಳೆಯ ಸದ್ದಾದ ಕೂಡಲೇ ಸಂತರು ಮಾಯವಾದರು, ಭೂಮಿಯಿಂದ ಎದ್ದು ಬರುತ್ತಿದ್ದ ಕಲ್ಲುಗಳೂ ಅಲ್ಲಲ್ಲೇ ನಿಂತವಂತೆ, ದೊಡ್ಡ ದೊಡ್ಡ ಬಂಡೆಗಲ್ಲುಗಳು ಅರೆಹೂತಿದ್ದ ಅವಸ್ಥೆಯಲ್ಲಿ, ಉರುಳಿಕೊಂಡು ಬಂದು ನಿಂತ ಗುಂಡುಗಲ್ಲುಗಳನ್ನೂ ಕಂಡ ಮೇಲೆ ನನಗೆ ಇದು ನಿಜವೇ ಎನಿಸಿದೆ.

ಹೀಗೆ ನಿರ್ಮಾಣವಾದ ಮಸೀದಿಗೆ ಮುಸಲ್ಮಾನ ಪದ್ದತಿಯ ಪ್ರಕಾರವಾಗಿ ಪೂಜೆ, ಸಂಪ್ರದಾಯ ನಡೆಸುವ ಇಚ್ಛೆಯಿಂದ ಪಾಳೇಗಾರ ಗುಡದಪ್ಪನಾಯಕರು ಬಿಜಾಪುರದಿಂದ ಮುಲ್ಲಾಗಳನ್ನು ಕರೆದುಕೊಂಡು ಬಂದು, ಆ ಮಸೀದಿಯ ಸುತ್ತಲಿನ ಒಂದಷ್ಟು ಭೂಮಿಯನ್ನು ಆ ಮೌಲ್ವಿಗಳಿಗೆ ನೀಡಿ ಅವರ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟರಂತೆ. ಅಲ್ಲಿಯೇ ಬಂದ ಸಾಬರು (ಮುಲ್ಲಾ) ಮನೆ ಕಟ್ಟಿಕೊಂಡು ಅಲ್ಲಿಯ ಜನರೊಂದಿಗೆ ಜೀವಿಸತೊಡಗಿದರು. ಹೀಗಾಗಿ ಬರುಬರುತ್ತಾ ಆ ಊರ ಜನರು 'ಸಾಬರುರು ಬಂದರು'.....'ಸಾಬರು ಬಂದರು'... 'ಸಾಬರು ಬಂದ ಊರು' ಎಂಬುದೇ ಮುಂದೆ "ಶಹಾಬಂದರ"ಎಂದು ಮಾರ್ಪಾಡಾಗಿರುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ. ಅಂದಿನಿಂದ ಇತ್ತೀಚಿನವರೆಗೆ ಶಹಾಬಂದರದಲ್ಲಿ ನಾನು ಹಿಂದೂ, ನೀನು ಮುಸ್ಲಿಮನೆಂಬ ಭೇದ-ಭಾವ ಮಾಡದೇ ಐಕ್ಯತೆಯಿಂದ ಆಚರಿಸುತ್ತ ಬಂದಿರುವರು.

ಐದು ದಿನದ ಈ ಹಬ್ಬ ಒಂದರಿಂದ ಮೂರನೇ ದಿನದವರೆಗೆ ಮಂದವಾಗಿರುತ್ತದೆ. ಪ್ರತಿದಿನ ಇಬ್ಬರಂತೆ ಹುಲಿಯಂತೆ ಮೈಗೆಲ್ಲ ಬಣ್ಣ ಬಳಿದುಕೊಂಡು ಹಸಿದ ಹುಲಿಯ ತೆರೆದ ಬಾಯಿಯ ಮುಖವಾಡ ಹಾಕಿರುತ್ತಾರೆ; ಮೊದಲ ಎರಡು ದಿನ ಅಕ್ಕ-ಪಕ್ಕದ ಊರಿಗೆ ಹೋಗಿ ಹುಲಿಗಳು ಕುಣಿದು ಬರುತ್ತವೆ ಮತ್ತು ಮೂರು ಹಾಗೂ ನಾಲ್ಕನೆಯ ದಿನ ಇಬ್ಬಿಬ್ಬರು ಇಡೀ ಊರಿನ ಮನೆ ಮನೆಯ ಮುಂದೆ ಹುಲಿ ವೇಷ ಹಾಕಿ ಕುಣಿಯುತ್ತಾರೆ, ನಾಲ್ಕನೆಯ ದಿನ ಸಾಯಂಕಾಲ ಹರಕೆ ಕಟ್ಟಿಕೊಂಡವರು ಕೊಡ್ಡ(ಮರದ ದಿಮ್ಮೆ)ಗಳನ್ನು ಎತ್ತುಗಳಿಗೆ ಭರ್ಜರಿ ಸಿಂಗಾರ ಮಾಡಿ ಬಸ್ ಸ್ಟ್ಯಾಂಡಿನಿಂದ ಮಸೀದಿಯವರೆಗೆ ಕುಣಿದಾಡುತ್ತ, ಪಟಾಕಿ ಸಿಡಿಸುತ್ತ ಎಳೆದು ತಂದು ಹಾಕುತ್ತಾರೆ, ಅದೇ ದಿನದ ರಾತ್ರಿಯಿಡೀ ಮಸೀದಿಯ ಮುಂದೆ ತೋಡಲಾದ ಹೊಂಡಕ್ಕೆ ಹಾಕಿ ಸುಡುತ್ತಾರೆ. ಐದನೆಯ ದಿನ ಮಾತ್ರ ನಾಲ್ಕು ಜನ ಹುಲಿಯ ವೇಷ ಹಾಕಿರುತ್ತಾರೆ: ನಮ್ಮ ಅಜ್ಜನ ಕಾಲದಲ್ಲಿ ರಾಕ್ಷಸ, ಕುದುರೆ, ಕರಡಿಯ ವೇಷವನ್ನೂ ಹಾಕುತ್ತಿದ್ದರಂತೆ; ಆ ವೇಷಗಳ ಮುಖವಾಡವನ್ನು ನಾನೂ ನೋಡಿದ್ದುಂಟು.  ಹುಲಿ ವೇಷದ ಕುಣಿತಕ್ಕೆ ಬಾರಿಸುವ ತಾಶೆ(ತಮಟೆ) ದಿದ್ದನಂಗ್ ದಿದ್ದನಂಗ್ ದಿದ್ದನಂಗ್ ದಿದ್ದನಂಗ್ ಮತ್ತು ರಪ್ಪರ್ರ್ರ್ರ್ ರಪ್ಪರ್ರ್ರ್ ರಪ್ಪರ್ರ್ರ್ರ ರಪ್ಪರ್ರ್ರ್ರ್, ಡೊಳ್ಳಿನ ದುಂಬ ದುಂಬ್ ದುಂಬಕ್ ದುಂಬ ದುಂಬ್ ದುಂಬಕ್, ದುಂಬ ದುಂಬ್ ದುಂಬಕ್ ದುಂಬ ದುಂಬ್ ದುಂಬಕ್ ಬಡಿತದ ಜೊತೆ ಶಹನಾಯಿಯ ಪಿಪಿ ಪಿಪಿ ಪಿಪಿಪಿ.... ಪಿಪಿ ಪಿಪಿ ಪಿಪಿಪಿ.. ಪಿಪಿ ಪಿಪಿ ಪಿಪಿಪಿಪಿ ಪಿಪಿ ಮತ್ತು ಪಿಯಿಯಿ ಪಿಯಿಯಿ ಪಿಯಿಯಿ ವಾದನದ ಜೊತೆಗೆ ಹುಲಿ ವೇಷಧರಿಗಳ ಸೊಂಟಕ್ಕೆ ಕಟ್ಟಿದ ಗೆಜ್ಜೆ ಸದ್ದು ಅಲ್ಲಿಯ ಯುವಕರ ಮೈಯಲ್ಲಿ ಹುಲಿಯನ್ನು ಸೇರಿಸಿ ಹುಚ್ಚೆದ್ದು ಕುಣಿಯುವಂತೆ ಮಾಡುತ್ತವೆ. ಆದರೆ ಕೆಲ ದಿನಗಳ ಹಿಂದೆ, ತುಂಬಾ ಓದಿಕೊಂಡವರಂತೆ ! ಏನೇನೋ ಸುದ್ದಿ ಎಬ್ಬಿಸಿದ್ದಾರೆಂಬ ಮಾತು ಕಿವಿಗೆ ಬಿತ್ತು !!!! ಹುಬ್ಬುಗಳು ಮೇಲೇರಿ, ಕಿವಿ ನಿಮಿರಿದವು!!!!!!!!!
                      ✍ ಸತೀಶ ಉ ನಡಗಡ್ಡಿ

#Huliraaya #ಹುಲಿರಾಯ #ಹುಲಿ_ಹುಲಿ_ಹೆಬ್ಬುಲಿ

Saturday 26 August 2017

ಮನಸು ಅಂತೈತಿ


ಹಾಡಬೇಕ ಅಂತೈತಿ ಮನಸು - ಪದ
ಹಾಡಬೇಕ ಅಂತೈತಿ ll ಪ ll

ನಿಂತ ಜನಾ ನಿಂತಲ್ಲೇ,
ಕುಂತ ಜನಾ ಕುಂತಲ್ಲೆ
ಮೈ ಮರತ ಕೇಳು ಹಾಂಗ ll ಪ ll

ಕೈ ಬೆರಳಷ್ಟೂ ಹಾತೊರಿತಾವ
ಕೊಳಲಿನ ಮ್ಯಾಲ ಕುಣದಾಡಾಕ
ತುಟಿಗಿ ತುಟಿಗೂಡಿ ಹುಡುಕತೈತಿ
ಕೊಳಲನೂದಾಕ ಉಸರ ನಿಲ್ಲೂ ತನಕ
ಊದಬೇಕ ಅಂತೈತಿ ಮನಸು-ಕೊಳಲು

ತಕಿಟ ಧೀಮ್ ಧೀಮ್ ಧೀಮ್
ತರಕಿಟ ಧೋಮ್ ಧೋಮ್ ಧೋಮ್
ಧೋಮ್ ತಕಿಟ ಧೀಮ್ ತಕಿಟ 
ತರಕಿಟ ತರಕಿಟ ತಕ ಧೋಮ್
ಬಾರಸಬೇಕ ಅಂತಾವ ಅಂಗೈ - ತಬಲಾ

ಒಮ್ಮಿ ಹಾಡಬೇಕ ಅಂತೈತಿ
ಇನ್ನೊಮ್ಮಿ ಊದಬೇಕ ಅಂತೈತಿ
ಮತ್ತೊಮ್ಮಿ ಬಾರಸಬೇಕ ಅಂತೈತಿ
ಒಮ್ಮೊಮ್ಮಿ ಉಸರs ನಿಲ್ಲಸಬೇಕ 
ಅಂತೈತಿ
ಇದ ಎಂಥಾ ಮನಸ ಐತಿ !!!

✍ ಸತೀಶ ಉ ನಡಗಡ್ಡಿ

Thursday 24 August 2017

ಮೇಲಧಿಕಾರಿಗಳ ಗಮನಕ್ಕೆ

         
 ಸುಮ್ಮನೆ ಕೂರಲಾಗದೆ ತಲೆ- ಕೆರೆದುಕೊಂಡು ಬರೆಯಬೇಕೆಂದೆನಿಸಿತು ನಿಮಗೊಂದು ಪತ್ರ. 
 'ನಮ್ಮೂರು ಕೇರಿಯ ಗಲ್ಲಿ ಗಲ್ಲಿಯೊಳಗಿನ ರಸ್ತೆಗಳು ಕೆಟ್ಟುಹೋಗಿವೆ.
 ಅಲ್ಲ,... ರಸ್ತೆಗಳನ್ನು ಕೆಡಿಸಿ ಬಿಟ್ಟಿದ್ದಾರೆ; ನೀರಾವರಿ ಸರಬರಾಜು ಇಲಾಖೆಯವರು- ಮನೆ ಮನೆಗೂ ನಲ್ಲಿ ಸೌಕರ್ಯ ಒದಗಿಸುವಾಗ. 
 ಅವರೇ ರಸ್ತೆಯನ್ನು ಕೆಡಿಸಿದರೆಂದು ನಾ ಹೇಗೆ ಅರೋಪಿಸಲಿ..? ಇಲ್ಲ. 
ನಿಜವಾಗಿ ರಸ್ತೆ ಕೆಡಿಸಿದವರು, ಕೇಬಲ್ ಕನೆಕ್ಷನ್ ಕೊಡುವ ಕಂಪನಿಯವರು ಮನೆ ಮನೆಗೂ ಗ್ಯಾಸ್ ಕನೆಕ್ಷನ್ ಕಾಂಟ್ರಾಕ್ಟ್ ತೆಗೆದುಕೊಂಡವರು ಎಂದೆನಿಸಿದರೂ, 
ಕೊನೆಗೆ ತಪ್ಪಿತಸ್ತರೆಂದು ಕಂಡಿದ್ದು ರಸ್ತೆ ದುರಸ್ತಿ ಕಾಮಗಾರಿಗೆ ಸಹಿ ಹಾಕುವ ಅಧಿಕಾರಿಗಳೇ. 

 ಆಶ್ಚರ್ಯಪಡಬೇಡಿ 
ನಾನು ಮಾಡುವ ಆರೋಪಕ್ಕೆ ನನ್ನದೇ ಸಮಜಾಯಿಷಿ ಕೇಳಿ ನೋಡಿ. 
 ನೀರು ಸರಬರಾಜು ಮಾಡುವವರಿಗೆ- 
"ಕೆದರಿದ ರಸ್ತೆಗೆ ಡಾಂಬರು ಹಾಕಿ" ಎಂದೇ, 
ಅದಕ್ಕೆ "ಪೈಪ್ ಲೈನ್ ಎಳೆಯಲು ಮಾತ್ರ ಹಣ ಬಂದಿದೆ" ಎಂಬುತ್ತರ ಬಂತು. 
"ಹೌದು ಬಿಡಪ್ಪಾ, ಎಳೆಯಲು ಮಾತ್ರ ಬಂದ ಹಣದಲ್ಲಿ, ನೀನೊಂದಿಷ್ಟು ಎಳೆದುಕೊಂಡು ಉಳಿದಿದ್ದರಲ್ಲಿ ಕೆಲಸ ಚನ್ನಾಗಿ ಮುಗಿಸಿದ್ದೀಯ" ಎಂದುಕೊಂಡೆ. 

 ಹುಚ್ಚ ನಾನು ಸುಮ್ಮನೆ ಕೂರಲಿಲ್ಲ, ಕೇಬಲ್ ಗ್ಯಾಸ್ ಕನೆಕ್ಷನ್ ಕಂಪನಿಗೆ- 
"ಕೆದರಿದ ರಸ್ತೆಗೆ ಡಾಂಬರು ಹಾಕಿ" ಎಂದೇ, 
ಅದಕ್ಕವರು, "ರಸ್ತೆ ದುರಸ್ತಿ ಮಾಡುವವರು ಬಂದಾಗ ಸರಿಯಾಗತ್ತೆ ಬಿಡಿ" ಎಂದರು. 

 ಹೀಗೆ ಒಬ್ಬರ ಮೇಲೊಬ್ಬರು ಹಾಕಿ, ಕೈ ತೊಳೆದುಕೊಳ್ಳುವುದು ಬೇಡ ಮೇಲಧಿಕಾರಿಗಳೇ, 
ಒಂದಾದ ಮೇಲೆ ಒಂದು ಯೋಜನೆಗೆ ಅನುಮೋದನೆ ಕೊಡುವ ಬದಲು ಪೂರ್ವ-ಯೋಜನೆ ರೂಪಿಸಿ, ಏಕಕಾಲಕ್ಕೆ ಯೋಜನೆ- 
ಗಳನ್ನು ಜಾರಿಗೊಳಿಸಿದರೆ ರಸ್ತೆಯಾದ ಮೇಲೆ 
ನೀರು ಸರಬರಾಜಿಗೆ, ನೀರು ಸರಬರಾಜಿನ ಕೆಲಸ ಮುಗಿದ ಮೇಲೆ 
ಕಂಟ್ರಾಕ್ಟರ್ ಗುತ್ತಿಗೆ ನೀಡಿ, 
ಈ "ಅಡೋಣು ಬಾ ಕೆಡಿಸೋಣು ಬಾ" ಮಾಡುತ್ತ ಕೂರುವುದು ಮಕ್ಕಳಾಟ. 
         
                                            ✍ ಸತೀಶ ಉ ನಡಗಡ್ಡಿ


Saturday 3 June 2017

ದಲಿತ !!?

'ದಲಿತ ದಲಿತ' ಎಂದು
ನಮ್ಮನ್ನು ಮತ್ತಷ್ಟು 
ಮತಾಂಧರನ್ನಾಗಿ ಮಾಡಿ ;
ಇನ್ನೂ ಅದೆಷ್ಟು ದಿನ 
ನಮ್ಮನ್ನು ಅಶಕ್ತರನ್ನಾಗಿಸುವಿರಿ ?
ಹುರುಪು ತುಂಬಿ, 
ನಾವೂ ಮಾನವರೆಂಬ ಸ್ವಾಭಿಮಾನ
ಬಡಿದೆಬ್ಬಿಸಲು ಬರದೇ ನಿಮಗೆ ?

ನಮ್ಮಲ್ಲೂ ಶಕ್ತಿ ಇದೆ
ಛಲವಿದೆ, ಚಾರಿತ್ರ್ಯವಿದೆ,
ಅದಮ್ಯ ಅಭಿಮಾನದ ಕೆಚ್ಚು
ಎದೆಯೊಳಗೆ ಜ್ವಾಲಾಮುಖಿಯಾಗಿ
ಉರಿಯುತ್ತಿದೆ ಹಗಲಿರುಳು -
ಮತ್ತೆ ನಮ್ಮನ್ನು "ದಲಿತ"ರೆಂದು
ಹಿಯ್ಯಾಳಿಸಬೇಡಿ..

'ದಲಿತ' ಎಂದರೆ ಯಾರು ?
ದೌರ್ಜನ್ಯಕ್ಕೆ ಒಳಗಾದವನೆ ?
ದೌರ್ಜನ್ಯ ; ಯಾವ ದೌರ್ಜನ್ಯ ?
ಯಾರಿಂದ ದೌರ್ಜನ್ಯ ?

ಹೊಸದೊಂದು ವ್ಯಾಖ್ಯಾನ 
ನೀಡಬೇಕಿದೆ ನಮಗಿನ್ನು :
'ದಲಿತ' ಎಂಬುದಕೆ.

✍ ಸತೀಶ ಉ ನಡಗಡ್ಡಿ

Sunday 14 May 2017

ಗರ್ಭದೊಳಗಿನ ಸ್ವರ್ಗ



ನನಗೊಂದೆ ಜನ್ಮ ಸಾಲದಮ್ಮ
ನಿನ್ನ ಋಣವ ನಾನು ತೀರಿಸಲು;
ಕನ್ನಡಮ್ಮನ ಪದಪುಂಜ ಸಾಲದಮ್ಮ
ನಿನ್ನ ಗುಣಗಾನ ಮಾಡಿ ಹಾಡಲು.

ಅನ್ನಂತ ನೋವುಗಳನುಂಡು
ಸಾಂತ್ವನದ ಸೋಲನುಂಡು ..
ಮೆಟ್ಟಿ ನಿಂತೆ ನೀ ನೋವಿನ ಗಂಟು !
ಈ ಜಗದಲ್ಲಿ ನೀನಿಲ್ಲದೇ ಏನುಂಟು ?

ನನಗೆ ಯಾವ ದೇವರಿಲ್ಲ,
ನೀನೇ ಇರುವಾಗ ಯಾಕೆ ಅವೆಲ್ಲ ?
ನವಮಾಸ ಹೊತ್ತು ತಿರುಗೆದೆಯಲ್ಲ,
ಆ ದೇವರಾರೂ ನಿನಗೆ ಸರಿಸಾಟಿಯಲ್ಲ.

ನಿನ್ನ ಗರ್ಭದ ಒಳಗಿನ ಸ್ವರ್ಗ
ಆಗರ್ಭ ಶ್ರೀಮಂತನಾದರೂ ಶೂನ್ಯ.
ನಿನ್ನ ಪ್ರೀತಿ-ಮಮತೆಯಲಿಲ್ಲ ವರ್ಗ
ಅಮ್ಮ, ಅವ್ವ, ತಾಯಿ - ನೀ ಅನನ್ಯ.
                                                 ✍ ಸತೀಶ ಉ ನಡಗಡ್ಡಿ.

Friday 28 April 2017

ಮೋಹಿ ಕವಿ.



ಪಕ್ಕಪಕ್ಕದಲಿ ಕುಳಿತು
ಈ ಜಗವನ್ನೆ ಮರೆತು !
ಮಾತಿಗೆ ಮಾತು ಸಾಗಿತಲ್ಲ
ಕೈ ಬೆರಳುಗಳು ಹೆಣೆದವಲ್ಲ.

ಬಣ್ಣ ಬಳಿದ ಕಾಲುಬೆರಳು
ಏನೋ ಬಯಸಿದಂತಿವೆ,
ಮೂಗ ಮೇಲಿನ ರತ್ನದ ಹರಳು
ಅದನ್ನೇ ಪುನರುಚ್ಛರಿಸಿದೆ ಹೂವೆ.

ಸ್ಪರ್ಶಕ್ಕೆ ಹಾತೊರೆದ ಮನಕೆ
ಅಪ್ಪನ್ನು ನೀಡಿದ ಮೇನಕೆ ;
ಕಪ್ಪನ್ನು ಕೇಳಿ, ದೃಷ್ಠಿ ನೆಟ್ಟು
ಸುಮ್ಮನೆ ತೋರುವೆ ಸಿಟ್ಟು.

ಹೇಳದೆ ಕೇಳದೆ ಬಿಗಿದಪ್ಪಿ
"ಹೂಂ.."ಗುಟ್ಟುತಿರುವ ನಲ್ಲೆ :
ನಿನ್ನ ತೋಳಹಾರವ ನನಗೊಪ್ಪಿ-
ಸಿ ಮೂಗಿಗೆ ಮೂಗನುಜ್ಜುವೆಯಲ್ಲೆ.

ನಿನ್ನ ದೃಷ್ಟಿಗೆ ದೃಷ್ಟಿಗೊಟ್ಟು
ನಾ ತಿಳಿದ ಮನದಾಳ ಎಷ್ಟು ?
ಒತ್ತಿ ಬಂದಾಸೆಯ ತೋರದಿರಲೇ ,
ತುಟಿಯ ಮುದ್ರೆಯನೊತ್ತೆ ಬಿಡಲೇ ?

ಮತ್ತೆ "ಹೂಂ" ಗುಟ್ಟುವೆ
ನಾನೂ "ಹೂಂ" ಗುಟ್ಟುವೆ
"ಊಹುಂ" ಎಂದು ನೀ ಕುಳಿತೆ
ಮುಗಿಸಿ ಬಿಟ್ಟೆನು ನಾ ಕವಿತೆ.
   ✍ ಸತೀಶ ಉ ನಡಗಡ್ಡಿ

Tuesday 7 March 2017

ಅವಳೆಂದರೆ.....

ಬೆಳ್ಳಂಬೆಳಿಗ್ಗೆ ಎದ್ದು ಅಂಗಳದ ಕಸ ಗುಡಿಸಿ,
ಹೊಸ್ತಿಲಿಗೆ ನೀರು ಚುಮುಕಿಸಿ,
ತುಳಸಿ ಕಟ್ಟೆಗೆ ಪೂಜಿಸಿ,
ಪಾಕ ಕೋಣೆಯೊಳಗಿನ
ಸ್ಟೋವ್-ಪಾತ್ರೆ , ಅಕ್ಕಿ-ಬೇಳೆ,
ಸಕ್ಕರೆ-ಉಪ್ಪು-ಖಾರ-ಹುಳಿ-
ಗಳ ಗೆಳತಿಯಲ್ಲ.
ಅವಳೆಂದರೆ ,
ಹೊತ್ತು ಹೊತ್ತಿನ ತುತ್ತು ತುತ್ತು ಅನ್ನಕ್ಕೂ
ಅಮೃತವನ್ನೆ ಬೆರೆಸಿ, ಉಣಿಸಿ, ಬೆಳೆಸುವ
ಶಕ್ತಿ ದೇವತೆ.

ಅವಳೆಂದರೆ.....
ಹಿತ್ತಲ ಕಡೆಯ ಮೂರು
ಕಲ್ಲುಗಳ ಮೇಲೆ ನೀರು
ಹಂಡೆಯನಿಟ್ಟು , ಸೌದೆಯ ತುರುಕಿ,
ಸೀಮೆ ಎಣ್ಣೆ ಸುರಿದು , ಕಡ್ಡಿ ಗೀರಿ,
ಉರಿದು ಕೆಂಡವಾಗಿ, ಆರಿ ಬೂದಿಯಾಗಿ,
ಷರ್ಟು-ಪ್ಯಾಂಟು-ಟೈ-ಕರ್ಚೀಪು
ಗಳ ಕಸೂತಿ ಕೆಲಸದವಳಲ್ಲ.
ಅವಳೆಂದರೆ ,
ಅನು ದಿನದ  ಆನಂದ ಸಂತೋಷವೂ
ತನ್ನದೆಂದೆ ಭಾವಿಸಿ, ಲಟಿಕೆ ತೆಗೆವ
ತಾಯಿ-ಮಡದಿ-ಪುತ್ರಿ- ದೈವ.

ಅವಳೆಂದರೆ......
ಕತ್ತಲ ಕೋಣೆಯ ನಾಲ್ಕು ಗೋಡೆಗಳ ಮಧ್ಯ
ನಗ್ನಳಾಗಿ, ತುಟಿಗೆ ತುಟಿಯಿಕ್ಕಿ , ಬಾಹುಗಳೊಳಗೆ ಬಂಧಿಯಾಗಿ,
ಮಾಂಸ ಮುದ್ದೆಯ "ಮೈ-ದಾನ" ಮಾಡಿಕೊಟ್ಟು
ಹಾಸಿಗೆ-ದಿಂಬು-ಹೊದಿಕೆಗಳ ಜೊತೆಗೂಡಿ,
ತಾರಕಕ್ಕೇರಿಸಿ, ಸ್ವರ್ಗಕ್ಕೆ ಆಹ್ವಾನಿಸಿ,
ಕಾಮ ತೃಷೆ ನೀಗುವ ಬೊಂಬೆಯಲ್ಲ.
ಅವಳೆಂದರೆ ,
ಅವಳೇ,.... ಹೌದು ಅವಳೇ
ಸ್ತ್ರೀ  ಸ್ತ್ರೀ  ಸ್ತ್ರೀ  ಸ್ತ್ರೀ
ಪ್ರತೀ ಹುಟ್ಟಿನ ಮೂಲ
ಸೃಷ್ಠಿಯ ಮೂಲ - ಸೃಷ್ಠಿ ದೇವತೆ.
                        ✍ ಸತೀಶ ಉ ನಡಗಡ್ಡಿ

Thursday 16 February 2017

ಸಿಹಿ ಜೇನು


ಬಾ ನೋಡೋಣ ಜೊತೆಯಾಗಿ
ಹೂ, ಬಣದ ಪಾತರಗಿ-
ತ್ತಿಯ: ಕಣ್ಣು ಚಂದ, ಬಣ್ಣ ಚಂದ ;
ಹೂ ಪಾತರಗಿತ್ತಿಗಳೊಳಗೆಲ್ಲ ನೀ ಚಂದ.

ನಿನ್ನ ಕೆನ್ನೆಗೆ ಮುತ್ತಿಟ್ಟ ಈ ತುಟಿ
ನಿತ್ಯವೂ ಆ ಜೇನನೆ ಮೀಟಿ-
ಮನ ಹೂ ಬಣದಲ್ಲೆಲ್ಲ ನಿನ್ನೆ ನಿಲ್ಲಿಸಿ,
ತಬ್ಬಿ ನಿಂದಿಹೆನು ಬಣವೆ ನೀನೆಂದು ಭಾವಿಸಿ.

ಕಣ್ಣು ಮುಚ್ಚಿ ಸವಿದ ಮೊದಲ
ಜೇನ ಸಿಹಿಯನುಭವಿಸಿದ ತೊದಲ-
ಕ್ಷಣ, ಮರೆಯಬೇಕೆ ಸಹಜವಾಗಿ !
ಇರಲಿ ಸಾಯುವರೆಗೆ ನೆನೆದಾಗಲೂ ಹೊಸದಾಗಿ.

ಕಣ್ಣೊನಗಿ ಬತ್ತಿ ಹೋದರೂನು
ಆ ನಿನ್ನ ಮುದ್ದು ಮುಖದ ಬಿಂಬವನು-
ಮರೆತೀತೆ !!? ಹೇಳು ಓ ಹುಡುಗಿ;
ಬರುವೆ ಅದೆಂದು ನನಗೆ ವಧುವಾಗಿ ?

   ✍ ಸತೀಶ ನಡಗಡ್ಡಿ

Sunday 8 January 2017

ಇದೇನು ನಿನ್ನ ಆವಸ್ಥೆ ?



ಇದೇನು ನಿನ್ನ ಅವಸ್ಥೆ...?
ತಂತಿ ಬೇಲಿಯ ಗಡಿಯಾವುದೊಂದನ್ನೋ
ದಾಟಿ ಓಡಿ ಹೋಗುತ್ತಿರುವೆ,
ಕಾಲ ಮೇಲೆಲ್ಲಾ ಗಾಯ-ರಕ್ತ ;
ಅದಾವ ಗೂಢಾರಣ್ಯವ ಸಾಗಿ ಬಂದಿರುವೆ ?
ಹೇಳು ಏನಾಯ್ತು ಓ ಹೆಣ್ಣೆ.

ಮೈಮೇಲೆ ತುಂಡು ಬಟ್ಟೆಯೂ ಇಲ್ಲ
ಮೈ ತುಂಬ ಬರಿ ಗೀರು ಗಾಯಗಳಿವೆಯಲ್ಲ !!
ಸಿಗರೆಟಿನಿಂದ ಸುಟ್ಟ ಗಾಯ,
ಚಾಕುವಿನಿಂದ ತಿವಿದ ಗಾಯ,
ನಾಲಗೆ ತುಟಿ ಹರಿದ ಗಾಯ,
ತೊಟ್ಟಿಕ್ಕುತಿದೆ ರಕ್ತ ಪ್ರತಿ ಗಾಯದಿಂದ !
ಕೆದರಿಕೊಂದಿದೆ ತಲೆಗೂದಲೆಲ್ಲ.

ನೀ ಬರುತ್ತಿರುವುದು ದಾರಿಯಲ್ಲ ,
ಕಾಲು ದಾರಿಯಂತೂ ಅಲ್ಲವೇ ಅಲ್ಲ:
ಒಡೆದು ಬಿದ್ದ ಹೆಂಡದ ಬಾಟಲಿ ರಾಶಿಯಲ್ಲಿ
ನೋವಿನ ಅರಿವಿಲ್ಲದೇ ಓಡುತ್ತಿರುವೆ !!
ಹೆಜ್ಜೆಯುದ್ದಕ್ಕೂ ದಾರಿಯಲಿ ರಕ್ತ, ರಕ್ತ, ರಕ್ತ !!!

ಮುಖವೂ ಕಾಣದು ಬಿರುಗಾಳಿಯಾಕ್ರೋಶಕೆ 
ತಲೆಗೂದಲು ಹರಿದು ಹಾರುತ್ತಿವೆ
ನೋಡಬೇಕೆಂದರೆ ನಿನ್ನ ಮುಖ -ಅಸ್ಪಷ್ಠ.

ಅಯ್ಯೋ...!!?
ನನಗರಿವಾಯಿತು ನಿನ್ನ ಸ್ಥಿತಿ.
ನಗ್ನವಾದ ನಿನ್ನ ಅವಸ್ಥೆ
ಭಗ್ನವಾದ ಬೇಲೂರ ಶಿಲ್ಪದಂತಿದೆ.
ವಿಘ್ನ. !!!!!
ನಿನಗೊದಗಿದ ವಿಘ್ನದ ಅರಿವಾಯಿತು.
ಅತ್ಯಾಚಾರಕ್ಕೆ ಬಲಿಯಾಗಿ,
'ಹೋದರೆ ಹಾಯಿತದು; ಜೀವವಾದರೂ ಉಳಿಯಲಿ' 
ಎಂದು ಓಡುತ್ತಿರುವೆ, ಓಡುತ್ತಿರುವೆ.

ನಿರ್ಜನ ಪ್ರದೇಶದಲ್ಲಿ ಅದಾರಿಗೆ
ಆಹಾರವಾಗಿ ಹೋದೆ ಕುಸುಮವೇ ?
ಬೀಸಿ ಬರುವ ಬಿರುಗಾಳಿಯಲೊಂದು
ತರಗೆಲೆ ನಿನ್ನ ಅಂಗ ಮುಚ್ಚಿದೆ.

ಮರದ ತರಗೆಲೆ, ತೊಗಟೆಯಿಂದ
ಮೈಯ ಮುಚ್ಚಿಕೊಂಡಿದ್ದೆ
ಶತ ಶತಮಾನಗಳ ಹಿಂದೆ ;
ಶತಮಾನಗಳೆಲ್ಲ ಗತಿಸಿದ ಮೇಲೆ
ಮೈ ಮುಚ್ಚಿದ್ದು ಮತ್ತದೇ ತರಗೆಲೆ :
'ಮಣ್ಣಿನಿಂದ ಮಣ್ಣಿಗೆ'ನುವಂತೆ
'ತರಗೆಳೆಯಿಂದ ತರಗೆಲೆ' - ಇಂತೆ.

ತರಗೆಲೆಯನು ಬಿಟ್ಟು, ತೊಗಟೆಯನು ತೊಟ್ಟೆ
ತೊಗಟೆಯನು ಬಿಟ್ಟು, ಲಂಗ ಸೀರೆಯನುಟ್ಟೆ
ಲಂಗ ಸೀರೆಯನೂ ಬಿಟ್ಟು ಚೂಡಿಯ ತೊಟ್ಟೆ :
ಪ್ಯಾಂಟ್, ಟಿ-ಶರ್ಟ್ ನು ಹಾಕಿ ನೀ ಕೆಟ್ಟೆ.
ತರ ತರದ ಬಟ್ಟೆ- ಅದೆಂಥಾ ಮಾರುಕಟ್ಟೆ !!!!

ದಿಟ್ಟೆ, ನಿಜವಾಗಲೂ ನೀನು ದಿಟ್ಟೆ
ಬೇಕಾದ ಸ್ವಾತಂತ್ರ್ಯವನೆಲ್ಲ ಪಡೆದುಕೊಂಡೆ ಬಿಟ್ಟೆ
'ನಾನೂ ಪುರುಷ ಸಮಾನಳೆಂದು ಸಮಾಜದಲ್ಲಿ
ನಿನ್ನ ನೀನೇ ತೆರೆದುಕೊಂಡು ಬಿಟ್ಟೆ..... 
ಸರ್ವವ್ಯಾಪಿಯಾಗಿ ಪ್ರವೇಶಿಸಿದೆ,
ಬೆಳೆದೆ, ಬೆಳೆಸಿದೆ,ಬೆಳಗಿಸಿದೆ,
ಜಗತ್ತನ್ನೇ  ಅಭಿವೃದ್ಧಿಯತ್ತ ಕೊಂಡೊಯ್ದೆ.

ಅದರೂ.... ..
ಎಲ್ಲೋ ಒಂದು ಕಡೆ ಎಡವಿ
'ನಿನಗೆ ನೀನೇ ಸಂಚು'-
ತಂದುಕೊಂಡಂತೆ ಎನಿಸುತಿದೆ. 
                ✍ ಸತೀಶ ಉ ನಡಗಡ್ಡಿ 

Saturday 7 January 2017

ಎರಡು ದಿನ, ಎರಡೇ ಜೀವ- IV

 

" ನೀರು ಕಾಯಿಸಿ ಆಗಿದೆ
ಬೇಗ ಎದ್ದು ಸ್ನಾನ ಮಾಡಿ"
ಮಾತು ಕಿವಿಗೆ ಬಿದ್ದೊಡನೆ
ಮುನಿಸಿಕೊಂಡೆ ಹೋಗಿ ಮುಂದೆ ನಿಂತೆ.

ಆಗ ತಾನೇ ಅರಳಿದ ಮೂಗ್ಗಿಗೆ
ಬೆಂಕಿಯ ಝಳ ಸೋಕಿದಂತಾಗಿ ;
ಹೆದರಿ ನಿಂತು ಕೇಳಿದಳು ಮೆಲ್ಲಗೆ
"ಯಾಕೆ ನಿಂತಿರಿ ಹೀಗೆ ಕೆಂಡವಾಗಿ?"

"ನೆನಪಿಲ್ಲವೇ ಸದಾ ನಿಮ್ಮೊಂದಿಗಿರುತ್ತೇನೆಂದು
ಅಗ್ನಿ ಸಾಕ್ಷಿಯಾಗಿ ತುಳಿದ ಸಪ್ತಪದಿ ?"
"ಹೂಂ, ಇದೆ......"
"ಮತ್ತೇಕೆ ಒಬ್ಬಳೆ ಸ್ನಾನ ಮಾಡಿದೆ..?"

ನನ್ನೊಳಗಿನ 'ಕೆಂಡ' ಹೇಗೋ
ಅವಳಿಗೆ ವರ್ಗವಾಯಿತು !!!
ಎತ್ತಿಯೇ ಬಿಟ್ಟಳು ಲಟ್ಟಣಿಗೆ
ಓಡಿ ಬಿಟ್ಟೆನು ಸ್ನಾನದ ಕೋಣೆಗೆ.
                                                ✍ ಸತೀಶ ಉ ನಡಗಡ್ಡಿ

Tuesday 3 January 2017

ಎರಡು ದಿನ, ಎರಡೇ ಜೀವ III


ಏನೂ ಮಾಡಲು ತಿಳಿಯದ ನಾನು
ಅದೊಂದೆ ಧ್ಯಾನದಲ್ಲಿ ಮುಳುಗಿ,
ನಿನ್ನ ಸುತ್ತಲೇ ಸುತ್ತುತ್ತಿರುವೆ
ಬೋಂದಿ ಲಾಡುಗೆ ಹಠ ಹಿಡಿದ ಮಗುವಾಗಿ.

ಕಿವಿಯ ಹಿಡಿದೆಳೆದು ನೀ ನನ್ನ
ಬೇರಿನ್ನಾವುದೋ ಕೆಲಸ ವಹಿಸಿದರೆ;
"ಇಲ್ಲಿ ಕೇಳು ಚಿನ್ನ........."
ಎಂದು ಮೋಹದ ಬಾಣ ಹೂಡುವೆ ನೀರೆ.

ಹೊತ್ತು ಮುಳುಗಿತು,
ಸಂಜೆಯೂ ಆಯಿತು:
ಬೆನ್ನ ಹಿಂದೆ ನಿಂತು ಹೇಳುವೆ
"ಇನ್ನೂ ರಾತ್ರಿಯಾಗಲಿಲ್ಲವೆ ?"

ನಿನ್ನ ಭುಜದ ಮೇಲೆ ನನ್ನ ಮುಖ
ಸಕ್ಕರೆ ಡಬ್ಬದ ಸ್ಪೂನು ಡಬ್ಬದ ಸಖ !
ಮುಚ್ಚಿದ ಕಣ್ಣು ತೆರೆಯುತ್ತ ಸಣ್ಣಗೆ
ಮುತ್ತನಿಟ್ಟೆ ನೀ ನನ್ನ ಹಣೆಗೆ.
                                                       ✍ ಸತೀಶ ಉ ನಡಗಡ್ಡಿ