Friday 27 December 2019

ಹರಿವ ನದಿಯಾಗು



ನೀ ಯಾಕೆ ಇಷ್ಟೊಂದು ಮೌನಿ
ಹರಿವಿಲ್ಲದ ನದಿಯಂತೆ;
ಇದ್ದುದನಷ್ಟೇ ಇಟ್ಟುಕೊಂಡು
ಒಳಗೂ ಬಾರದೇ, ಹೊರಗೂ ಹೋಗದೇ
ಸ್ತಬ್ಧವಾಗಿ ನಿಂತಿರುವೆ:
ಮುಂಬೆಳಕು ಕಾಣುವ ಮನಸಿಲ್ಲವೇ ?

ಜವಳು ಭೂಮಿಯಲದೇನು ಬೆಳೆದೀತು ?
ಬರಿಯ ಪಾಚಿ; ಪಾಚಿಯ ಜಾರು.
ಹರಿವ ನದಿಯಾಗು ನೀನು
ಜಿಗಿವ ಝರಿಯಾಗು; ಮೀನು -
ಬಯಸುವ ಒಡಲಾಗು.

ಹೊಸ ದಿಗಂತ, ಹೊಸ ಪ್ರಪಂಚ,
ಕಾಡು-ಮೇಡಲಿ ಜಿನುಗಿ, ತಣಿಸಿ
ಸಾಗುವ ನದಿಯಾಗು ನೀ-
ಹರಿವ ನದಿಯಾಗು.

Monday 2 December 2019

ಅದೇ ಜುಬಿಲಿ ಸರ್ಕಲ್ ಟ್ರಾಫಿಕ್ ಸಿಗ್ನಲ್-ನಲ್ಲಿ ನಿಂತಾಗ

              

               ಇವತ್ತು ಆಫೀಸ್ ಕೆಲಸ ಮುಗಿಸ್ಕೊಂಡು ಬೇಗನೆ ಮನೆಗೆ  ಬರ್ತಿದ್ದೆ. ಆಫೀಸ್ ಬಿಡುವ ಮುಂಚೆ ಸಹೋದ್ಯೋಗಿಗಳು ಕಳೆದ ವಾರ ಆಗಿಹೋದ IP ಎಕ್ಸಾಮ್ಸ್ ಬಗ್ಗೆ ಚರ್ಚಿಸುತ್ತಿದ್ದರು, ಸರ್ ಕ್ಷಿಪ್ರವಾಗಿ table ಮೇಲಿನ ಫೈಲುಗಳನ್ನೆಲ್ಲ ಸಾಗಿಸಿದ ಪರಿಣಾಮ ಗತಿ ಕಾಣಿಸಬೇಕಾದುದ್ದನ್ನೆಲ್ಲ ಗತಿಗಾಣಿಸುವಷ್ಟರಲ್ಲಿ ಅನಾರೋಗ್ಯದ ಕಾರಣ ತಲೆ ಸಿಡಿಯುತ್ತಿತ್ತು ಹೋಗಿ ರೆಸ್ಟ್ ಮಾಡುವ ಎಂದುಕೊಂಡು ಅವರ ಚರ್ಚೆಯಲ್ಲಿ ತಲೆಹಾಕದೆ ಸೀದಾ ಮನೆ ಸೇರುವ ಹಂಬಲದಲ್ಲಿದ್ದೆ. ಓಲ್ಡ್ DySP ಸರ್ಕಲ್ ಹತ್ತಿರ ಟ್ರಾಫಿಕ್ ದಾಟಿಕೊಂಡು ಬರುವಾಗ ನನ್ನನ್ನು ಹಿಂಬಾಲಿಸುತ್ತಿದ್ದ ಯಾರೋ ಒಬ್ಬರು ಒಂದೇ ಸಮನೆ ಹಾರ್ನ್ ಮಾಡುತ್ತಿದ್ದರು. ಬಹುಷಃ ಸ್ಟ್ಯಾಂಡ್ ಹಾಕಿದ್ದಿರಬಹುದೆಂದು ಕಾಲಿನಿಂದ ಸ್ಟ್ಯಾಂಡ್ ಚೆಕ್ ಮಾಡಿದೆ. ಸರಿ ಇತ್ತು. ಸುಮ್ಮನೆ ಮುನ್ನಡೆದೆ, ಮತ್ತೆ ಹಾರ್ನ್ ಒಂದೇ ಸಮನೆ ಶುರುವಾಯ್ತು. ಸೈಡ್ ಬಿಟ್ಟೆ, ಓವರ್ ಟೇಕ್ ಮಾಡಿ ಮುಂದೆ ಬಂದು;

 "ಏನ್ರಿ ಎಷ್ಟು ಹಾರ್ನ್ ಕೊಟ್ಟ್ರು ನಿಲ್ಲಂಗಿಲ್ ಅಲ್ರೀ...." ಎಂದ ಲಕ್ಕಿ.
 "ಏನ್ ಸರ್ ನೀವು...." ಎಂದು ನಾನು ನಕ್ಕೆ. 
"ಅಲ್ಲೋ ಎಷ್ಟ್ ಹಾರ್ನ್ ಕೊಟ್ರು ಹಂಗs ಹೊಂಟಿಯಲ್ಲೋ..."
"ಈಗ ಸೈಡ್ ಕೊಟ್ಟಿನಲ್ ಪಾ...... ಮತ್ತ....?"
"ಒಸ್ವಾಲ್ ಹೊಂಟನಿ, ಟ್ರ್ಯಾಕ್ ಪ್ಯಾಂಟ್ ತಗೊಳ್ಳಾಕ್.."
"ಸಿಂಧೂರ ಹಾಲ್ ಒಳಗ್ ಎಕ್ಸಿಬಿಷನ್ ಐತಿ, ಅಲ್ಲೇ ನೋಡಬೇಕಿಲ್ಲ ಆಫೀಸ್ ಮುಂದ್..." 
"ಹೌದಾ.... ನೋಡಲೇ ಇಲ್ಲಲ್ ನಾ... ಚಲೋ ಅದಾವ ಏನಲ್ಲಿ..?"
"ಚಲೋ ಅವ, ಚಲೋ ಅವ...."
"ಆಯ್ತ್ ತಡಿ ಹಂಗಾರ... "
"ಹೆಂಗೂ ಬಂದs ಬಿಟ್ಟಿs, ಒಸವಾಲ್ ನೋಡ್ಕೊಂಡ್ ಹೋಗ್ ಮತ್ತ್.."
"ಓಕೆ ದೋಸ್ತ್.."
ಎಂದು ಲಕ್ಕಿನೂ ಹೋರಾಟ ನಾನೂ ಹೊರಟೆ. ನಾನು ಜುಬಿಲಿ ಸರ್ಕಲ್ ಗೆ ಬಂದೆ, ಟ್ರಾಫಿಕ್ ಸಿಗ್ನಲ್ ಇತ್ತು, ನಿಂತಿದ್ದೆ. ಎಡಗಡೆ ಜಗಜ್ಯೋತಿ ಬಸವಣ್ಣನವರ ಮೂರ್ತಿಯ ಎದುರಿಗೆ ಹುಡುಗಿಯೊಬ್ಬಳು ಹುಡುಗನನ್ನು "ಬಾರೋ ಬಾ ಬಾ..." ಎಂದು ಅವನ ಹೆಗಲ ಮೇಲೆ ಕೈ ಹಾಕಿ ಎಳೆಯುತ್ತಿದ್ದಳು. ಹುಡುಗ ಮುಜುಗರ ಪಟ್ಟುಕೊಳ್ಳುತ್ತಿದ್ದನೋ, ಹೆದರುತ್ತಿದ್ದನೋ ಗೊತ್ತಾಗಲಿಲ್ಲ. ಒಟ್ಟಿನಲ್ಲಿ ಹುಡುಗಿಯ ಜೊತೆ ಹೋಗಲು ಹಿಂದೇಟು ಹಾಕುತ್ತಿದ್ದ. ಆದರೆ ಆಕೆ ಆ ಬಾಲಕನನ್ನು ಹಾಗೆ ಕರೆಯುತ್ತಲೇ ಇದ್ದಳು.  ಹುಡುಗ ಸಂಜೆ ವಾಣಿ ಪತ್ರಿಕೆ ಮತ್ತು 2020ರ ಕ್ಯಾಲೆಂಡರ್ ಮಾರುತ್ತಿದ್ದ, ಹುಡುಗಿ ಹೆಚ್ಚು-ಕಡಿಮೆ ಕಾಲೇಜು ಓದುತ್ತಿರಬಹುದು. "ಇಷ್ಟು ಸಣ್ಣ ವಯಸ್ಸಿನಲ್ಲಿ ನೀನು ಪೇಪರ್ ಮಾರಿ..." ಅಂತೇನೋ ಸಂಭಾಷಣೆ ನಡೆದಿತ್ತು ಆ ಟ್ರಾಫಿಕ್ ಒಳಗೆ ಅವರ ಸಂಭಾಷಣೆ ಸ್ಪಷ್ಟವಾಗಿರಲಿಲ್ಲ. ಹುಡುಗನ ತಲೆ, ಕೆನ್ನೆ ನೇವರಿಸಿ ಮತನಾಡಿಸುತ್ತಿದ್ದಳು. ಹುಡುಗ ಸಂಕೋಚದಲ್ಲೇ ಉತ್ತರಿಸುತ್ತಿದ್ದ. 

"ಬಾ ನಿಂಗ್ ಡ್ರೆಸ್ ಕೊಡಸ್ತೆನಿ "
"ಬ್ಯಾಡ್ ಅಕ್ಕಾ.. ನಾ ಇವಷ್ಟ್ ಮಾರಿ ಮನಿಗಿ ಹೋಗಬೇಕು."
"ಏ ಬಾರೋ ಬಾ ಬಾ..." 

        ಇದನ್ನು ನೋಡುತ್ತಿದ್ದಂತೆಯೇ ನನ್ನ ಹೆಂಡತಿ ನನಗೆ ನಿನ್ನೆ ಹೇಳಿದ "ರೀ, ನಾಳೆ ಬರುವಾಗ ಕ್ಯಾಲೆಂಡರ್ ತಗೊಂಡ್ ಬರ್ರಿ" ಎಂದಿದ್ದು ನೆನಪಾಯಿತು. ಬೈಕ್ ಸೈಡ್ ಗೆ ತೆಗೆದುಕೊಳ್ಳುವ ತವಕದಲ್ಲಿದ್ದೆ, ಟ್ರಾಫಿಕ್ ಪೊಲೀಸ್ ಸೀಟಿ ಹಾಕಿ, ಕೈ ಮಾಡಿದ. ಹಿಂದಿನವರೆಲ್ಲ ನಾನೆಲ್ಲೋ LoC ಕ್ರಾಸ್ ಮಾಡಿದವನ ತರ 'ಕಿನ್ ಕೀ, ಪಾಂವ್ ಪಾಂವ್, ಪ್ಯಾಂವ್ ಪ್ಯಾಂವ್' ಶುರುವಿಟ್ಟರು. ಎಲ್ಲವನ್ನು ಅಷ್ಟಕ್ಕೇ ಬಿಟ್ಟು ಸರ್ಕಲ್ ಕ್ರಾಸ್ ಮಾಡಿದೆ. 

       ಮನೆಗೆ ಬರುವವರೆಗೂ ಆ ಹುಡುಗಿ, ಹುಡುಗನ ಸಂಭಾಷಣೆ ಆಕೆಯ ಆತ್ಮೀಯತೆ, ಅವನ ಸಂಕೋಚ; ಅವನ ಬಗೆಗಿನ ಅವಳ ಅಂತಃಕರಣ, ಅವನಿಗಿರಬಹುದಾದ ಜವಾಬ್ಧಾರಿಗಳು ತಲೆಯಲ್ಲಿ ಬೈಕಿನಷ್ಟೇ ವೇಗವಾಗಿ ಓಡತೊಡಗಿದವು.

Tuesday 6 August 2019

ಮಳೆ



ಮಳೆ ಮಳೆ ಮಳೆ
ಯಾಕಿಷ್ಟು ಅಳುವೆ ತಾಳೇ..
ನಿಲ್ಲದ ಈ ನಿನ್ನ ನೀರ ಧಾರೆ-
ಗೆ ಬೇಸ್ತು ಬಿದ್ದಿದೆ ಧರೆ !!

ಒತ್ತರಿಸಿ ಬಂದ ದುಃಖವನು
ಅವಡುಗಚ್ಚಿ ಹಿಡಿದರೂ ನಿಲ್ಲದೇ
ಸುರಿಯುತಿರುವೆ ಮುಗಿಲ ಮಣಿನಿ ನೀನು
ಕಣ್ಣೀರು; ಇಷ್ಟೊಂದು ದುಃಖ ಯಾಕಾಗಿದೆ ??

ಒಣ ಮೊಗದಲ್ಲಿ ಕಳೆ ರಾರಾಜಿಸಿ
ಇಳೆಯ ಒಡಲೆಲ್ಲ ನೀರ ತುಂಬಿಸಿ;
ಬಹು ವರ್ಷದಿಂದ ಬತ್ತಿದೊಡಲುಣಿಸಿ
ಸುರಿಸುವೆ ಅನಂದಬಾಷ್ಪ ಚುಂಬಿಸಿ-ಚುಂಬಿಸಿ.

  ✍ಸತೀಶ ಉ ನಡಗಡ್ಡಿ

Wednesday 10 July 2019

ಟ್ರಾಫಿಕ್ ಸಿಗ್ನಲ್ - ಪೋಸ್ಟ್ ಆಫೀಸ್


             ಮಧ್ಯಾಹ್ನ, ಆಫೀಸಿನಿಂದ ಊಟಕ್ಕೆ ಅಂತ ಬರ್ತಿದ್ದೆ. ಓಲ್ಡ್ ಎಸ್ಪಿ ಸರ್ಕಲ್ ದಾಟಿ ಬಂದು, ಪೆಟ್ರೋಲ್ ಪಂಪ್ ಹತ್ತಿರದಲ್ಲಿ ಆಗುತ್ತಿರುವ ಕಾಂಕ್ರೀಟ್ ರೋಡು ಕಾಮಗಾರಿಯನ್ನು ಕಂಡು "ಏನ್ ಡೆವೆಲಪ್ ಮಾಡ್ತಾರೋ ಏನೋ.... ಸರಿಯಾಗಿ ಡ್ರೈನೇಜ್ ವ್ಯವಸ್ಥೆ ಮಾಡಲ್ಲಾ, ಚರಂಡಿ ಸಂಪರ್ಕ ಹೋಗಿ ಕುಡಿಯೋ ನೀರಿಗೆ ಕುಡಿರ್ತದ... ಬಿಸಿಲಲ್ಲಿ ಮಾಡಿರೋ ಡ್ರೈನೇಜಗಳು ಮಳ್ಯಾಗ ನೀರು ವಾಂತಿ ಮಾಡ್ತಿರ್ತಾವ... " ಅಂತ ಏನೇನೋ ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಹೊರಟಿದ್ದೆ. ಪೀಟರ್ ಇಂಗ್ಲೆಂಡ್ ಎದುರಿಗೆ ನಿಂತಿದ್ದ ಆಟೋ ಡ್ರೈವರ್ ಒಬ್ಬಂವ 'ಗರ್ರ್ರ್ರ್...' ಅಂತ ಜುಬಲಿ ಸರ್ಕಲ್ ಕಡೆ ಆಟೋ ತಿರಿವಿದ. ಮೊದಲೇ ಸ್ವಲ್ಪ ಅವಸರದಲ್ಲಿದ್ದೆ, ಬ್ರೇಕ್ ಹಾಕಿದೆ, ಬೈಕ್ 'ಟರ್ರ್ರ್ರ್...'  ಎಂದು ಎಳೆಯಿತು. ಅವನೋ ಅವನ ಪಾಡಿಗೆ ಹೋದ. "ಆ ಇಂಡಿಕೇಟರ್ ಏನ್ ಚಂದಕ್ಕ ಇಟ್ಟರ ಅಂದ್ಕೊಂಡಿ ಏನ್ ಪಾ..... ? " ಅಂದೆ. ಅದಾಗಲೇ ಆಟೋ 10 ಅಡಿ ಮುಂದೆ ಹೋಗಿತ್ತು. 
                  ಜ್ಯೂಬಿಲಿ ಸರ್ಕಲ್ ಗೆ ಬಂದಾಗ ಸಿಗ್ನಲ್ ಇತ್ತು. ಆಟೋ ರಿಕ್ಷಾ ದಾಟಿತು. ನಾನು ಅಲ್ಲೇ ನಿಂತೆ. ಪಕ್ಕದಲ್ಲಿ ಒಂದು ಸ್ಕೂಟಿ ಬಂದು ನಿಂತಿತು. ಇಬ್ಬರು ಇದ್ದರು. ಸುಮ್ಮನೆ ಕಣ್ಣು ಹಾಯಿಸಿದೆ. 
         " ಎಲ್ಯಂತ ಹುಡುಕೂದ್ಲೇ.... " ಹಿಂದೆ ಕುಳಿತವ ಕೇಳಿದ.
         " ಇಲ್ಲಿ ಪೋಸ್ಟ್ ಆಫೀಸ್ ಎಲ್ಯವs ರೀ...?" ಮುಂದಿನವ ನನ್ನ ಕೇಳಿದ.
         " ನಿಮಗ ಯಾವ ಪೋಸ್ಟ್ ಆಫೀಸ್ ಬೇಕ....?"
         "ಯಾವ್ದಾದ್ರೂ ನಡಿತದ....?" 
         " ಈ ಕಾರ್ನೆರ್ ಒಳಗ ಹೋಗಿ, ಹಣಮಂತ ದೇವರ ಗುಡಿ ಹಿಂದ RIGHT TURN ತುಗೊಂಡ್ LEFT ಹೋದ್ರ Line Bazar ಪೋಸ್ಟ್ ಆಫೀಸ್ ಅದ. ಹಿಂಗss ಸ್ಟ್ರೆಟ್ ಹೋದ್ರ Head ಪೋಸ್ಟ್ ಆಫೀಸ್ ಸಿಗ್ತದೆ. ಅದನೂ ದಾಟಿ ಮುಂದ ಹೋದ್ರ ರೈಲ್ವೆ ಸ್ಟೇಷನ್ ಪೋಸ್ಟ್ ಆಫೀಸ್ ಬರ್ತದ. Head ಪೋಸ್ಟ್ ಆಫೀಸ್ ಇಂದ BSNL ಆಫೀಸ್ ಮೂಲಕ DC ಕಾಂಪೌಂಡ್ ಹೋದ್ರ ಕಚೇರಿ post ಆಫೀಸ್ ಅದ. ಹಂಗss ಆಲೂರ್ ವೆಂಕಟರಾವ್ ಸಭಾಭವನ ಕಡೆ ಇಂದ, KCD ಸರ್ಕಲ್ ಗೆ ಬಂದು SBM ATM ಹತ್ರ ನಿಂತ್ರ ಸಪ್ತಾಪುರ ಪೋಸ್ಟ್ ಆಫೀಸ್ ಸಿಗ್ತದೆ. ಅಲ್ಲಿಂದ ಮುಂದ ಸರ್ಕಲ್ ಗೆ ರೈಟ್ TURN ತುಗೊಂಡ್ ಹಳಿಯಾಳ ರೋಡ್ ಇಂದ ಜರ್ಮನ್ ಹಾಸ್ಪಿಟಲ್ ರೋಡ್ ಹಿಡ್ಕೊಂಡ್ ಬಂದು ಕೆನರಾ ಬ್ಯಾಂಕ್ ಎದುರಿನ ರೋಡಿಗೆ ಹೋದ್ರ ನಾರಾಯಣಪುರ ಪೋಸ್ಟ್ ಆಫೀಸ್ ಅದ. ಅಲ್ಲಿಂದ ಬಂದು TV ಟವರ್ ಸರ್ಕಲ್ ಗೆ ಲೆಫ್ಟ್ TURN ತುಗೊಂಡ್ ಗಿರಿಯಾಸ್ ದಾಟಿ ಹೋದ್ರ ಅಲ್ಲಿ K C ಪಾರ್ಕ್ ಪೋಸ್ಟ್ ಆಫೀಸ್ ಅದ. ಹಾಂಗSS ಮುಂದ ಓಲ್ಡ್ ಎಸ್ಪಿ ಸರ್ಕಲ್ ಇಂದ ಸವದತ್ತಿ ರೋಡಿಗೆ ಹೋದ್ರ M J ನಗರ ಪೋಸ್ಟ್ ಆಫೀಸ್ ಸಿಗ್ತದ. ಅಲ್ಲಿಂದ ಶಿವಾಜಿ ಸರ್ಕಲ್ ಕಡಿಂದ ಹಳೆ ಬಸ್ ಸ್ಟ್ಯಾಂಡ್ ದಾಟಿ ಸುಭಾಸ ರೋಡಿಲೆ KCC ಬ್ಯಾಂಕ್ ದಾಟಿ ಗಾಂಧಿ ಚೌಕ್ ದಾಟಿದ್ರ ಧಾರವಾಡ ಸಿಟಿ ಮತ್ತ ಮಾರ್ಕೆಟ್ ಪೋಸ್ಟ್ ಆಫೀಸ್ ಸಿಗ್ತಾವ್...... "
     "  ಸಾಕ್ ಬಿಡ ಅಣ್ಣಾ..." ಎಂದು ಗೊಂದಲಕ್ಕೀಡಾದ.
     "ಅದ್ಕ ಕೇಳಿದೆ ನಾ ಯಾವ ಪೋಸ್ಟ್ ಆಫೀಸ್ ಬೇಕ ನಿಮಗ ಅಂತ..."
    " THANKS ಅಣ್ಣಾ..."
  ಅಷ್ಟರಲ್ಲಿ ಟ್ರಾಫಿಕ್ ಪೋಲಿಸ್ ಸೀಟಿ ಹಾಕಿ ಕೈ ಮಾಡಿದ. ನನ್ನ ದಾರಿಗೆ ನಾ ಬಂದೆ. ಆದರ ಟ್ರಾಫಿಕ್ ಸಿಗ್ನಲ್ ಒಳಗ ನಿಂತ 'ಪೋಸ್ಟ್ ಆಫೀಸ್ ಎಲ್ಯವ ...?' ಅಂತ ಕೇಳಿ ತಲಿ ಒಳಗ ಟ್ರಾಫಿಕ್ ಜಾಮ್ ಮಾಡ್ಕೊಂಡ ಹೋದ್ರ ಅವರ.

                                         ✍ ಸತೀಶ ಉ ನಡಗಡ್ಡಿ

Monday 3 June 2019

ಮಾರ್ಕೆಟ್ ಕವಿತೆ




ಇಷ್ಟೊಂದು ಗಡಿಯಾರ ಇಟ್ಕೊಂಡಿರುವ
ಇವನಿಗದೆಷ್ಟು ಸಮಯವಿರಬಹುದು !!

ಇಷ್ಟೆಲ್ಲಾ ಬ್ಯಾಟರಿಗಳಿಟ್ಟುಕೊಂಡಿರುವ
ಈತನಲ್ಲಿ ಎಷ್ಟೊಂದು ಬೆಳಕಿರಬಹುದು !!!

ಸೊಳ್ಳೆಗಳ ಮ್ಯಾಟ್ ಮಾರುವ ಇವ
ಸೊಳ್ಳೆ ಸಾಮ್ರಾಜ್ಯಕ್ಕೆ ನಿಜಕ್ಕೂ ಯಮನಾಗಿರಬಹುದು !!!!
✍ ಸತೀಸಾ...



Monday 27 May 2019

ಒಂದು ಹೂವಿನ ಕಥೆಯು



ಅದೇನು ಹೊಳಪು ನಿನ್ನ ಕಣ್ಣಾಲಿಯಲಿ  ?
ಚಂದಿರನ ಊರಿಂದ ಚಂದಿರನನ್ನೆ ತಂದಂತೆ !
ನೂರು ನಕ್ಷತ್ರಗಳನ್ನೆಲ್ಲ ಒಗ್ಗೂಡಿಸಿಟ್ಟಂತೆ ;
ನುಣು ನುಣುಪು ನೋಟ ನೋಡಿ ಈ ಮನಸು
ತ್ಸುನಾಮಿಯಲಿ ಸಿಲುಕಿದಂತಾಗಿದೆ ಭಾವದಗಣಿತ ಕನಸು.

ಹಾಲಗೆನ್ನೆ , ಹವಳದುಟಿಯ ನಿನ್ನ ನಗು
ರಂಭೆ, ಊರ್ವಶಿ,ತಿಲೋತ್ತಮೆಯರನ್ನೂ ಬದಿಗಿಟ್ಟಂತೆ ;
ಬಿಗುಮಾನವೆಲ್ಲ ಬದಿಗಿಟ್ಟು ನಗು ಚೆಲ್ಲು ಮತ್ತೊಮ್ಮೆ ,
ದಿನಗಳೆದಂತೆಲ್ಲ ಬೆಳೆ ಬೆಳೆದು ನಿಂತಂತೆ
ಇದಾವ ನಗುವೂ ನಿನ್ನ ಮೊಗದಲ್ಲಿ ಸುಳಿಯದು ಮುಂದೊಮ್ಮೆ.

ಅರಳದ ಹೂ ಮೊಗ್ಗು ನೀನಿನ್ನೂ ಮಡಿಲಲಿ
ಎಳೆ ಬಿಸಿಲಿನ ಕಿರಣಕೆ ವಜ್ರಖಚಿತ ಮೇಲೆ ;
ಬಿಸಿಲೇರಿದಂತೆ ವಜ್ರ ಮಂಜಿನ ಹನಿಯೂ ಕರಗಿ
ಬಿಸಿಲ ಝಳಕ್ಕೊ , ಯಾವುದಕ್ಕೊ ಹೋಗುವುದು ಮರೆಯಾಗಿ -
ಮೊಗದಲ್ಲಿನ ನಗು, ಕಣ್ಣ ಕಾಂತಿ, ಮನದ ಆ ಮುಗ್ಧತೆ.

ಮೂರ್ನಾಲ್ಕು ದಳಗಳರಳಿದ ಹೂವು ನೀನೀಗ
ಹೋಗ ಬರುವವರೆಲ್ಲರ ನೋಟ ನಿನ್ನತ್ತ ಈಗ ;
'ಏನು ಅಂದ-ಚಂದ, ನಿನಗೆ ನೀನೇ ಸರಿಸಾಟಿ' ಎಂದು :
ನೂರಾರು ದುಂಬಿಗಳ ಚುಂಬಣ, ಎದೆಯಾಳಕೆದೆ- ಆಳಕೆ
ಬಿಸಿಲೇರಿತ್ತು ನೆತ್ತಿಯ ಮೇಲೆ , ಎದೆಯಲಿ ಭಾವ ಬುಗ್ಗೆ.

ಹೊರಳುವುದು ಹೊತ್ತು ಮೂಡನದಿ ಪಡುವಣಕೆ
ನಳನಳಿಸುವ ಹೂವ ಕಿತ್ತು, ಅರ್ಪಿಸುವುದ ನೋಡುವುದಕೆ ;
ಮಹೋತ್ತರ ಘಟ್ಟ - ಜೀವನದಲ್ಲಿ ನೀಡಿ ಒಂದು ಪಟ್ಟ :
ಬಿಸಿಲು-ನೆರಳು, ಸಿಹಿ-ಕಹಿ, ಅಗಲಿಕೆ-ಪರಾಧೀನ, ಸ್ವಂತಿಕೆ
ಕೆಳಗಿನಿಂದ ಮೇಲೇರಿದ ಚಕ್ರ ಕೆಳಗಿಳಿಯಲನಿಯಾಗುತ್ತಿದೆ.


ಯಾವ ತೋಟದ ಹೂವು ಯಾವ ದೈವದ ಮುಡಿಗೇರಿತು ?
ಹೂವಿಗೇನು ಗೊತ್ತು , ಸೃಷ್ಠಿ ಚಕ್ರದಲ್ಲಿ ಬೆಳೆದು ಬಂದಿತ್ತಷ್ಟೆ .
ಅದೇನು ಆಶ್ಚರ್ಯ ಪ್ರತಿಯೊಂದರ ಲಯಬದ್ಧತೆಯಲಿ ?

                        ✍ ಸತೀಶ ಉ ನಡಗಡ್ಡಿ 

Monday 21 January 2019

ಪೂಜ್ಯರಿಗೆ ನನ್ನ ಅಕ್ಷರ ನಮನ



ಸಾವು ಯಾರನ್ನೂ ಬಿಟ್ಟಿಲ್ಲ
ಆದರೆ, ಈ ಸಾವು ನ್ಯಾಯವಲ್ಲ.
ದೇವರನ್ನೇ ಬಿಡದ ಸಾವು
.....ಇನ್ನು ದಾನವರು ನಾವು....?
ಆದರೂ, ಈ ಸಾವು ನ್ಯಾಯವಲ್ಲ.

ಪುಣ್ಯ ಭರತ ಭೂಮಿ ಕಂಡ
ಪೂಜ್ಯ ಶ್ರೀ ಸಿದ್ದಗಂಗಾ ಈಶ-ಬ್ರಾಹ್ಮಾಂಡ,
ತ್ರಿವಿಧ ದಾಸೋಹಿ ನಡೆದೆಯಾ
ತ್ರಿಶೂಲಾಯುಧನ ಅಂಗಳಕೆ ದೇವಾ;
ಶ್ರೀ ಶಿವಕುಮಾರ ಸ್ವಾಮೀ, ನೀ ಸದಾ ಕುಮಾರ.

ಅನ್ನದ ಅಗಳು-
ನುಂಗುತ್ತಿದೆ ಉಗುಳು,
ಕಣ್ಣು ಬಿಟ್ಟೊಮ್ಮೆ ಏಳು
ಅಳುವ ಮಕ್ಕಳಿಗೆ ಸಾಂತ್ವನ ಹೇಳು
"ನಿಮ್ಮಲ್ಲಿರುವೆ; ನಗುತ, ನಲಿದಾಡುತ' ಎಂದು.

ತೆರೆದ ಹೊತ್ತಗೆಯು ಕೂತಿದೆ
ತ್ರಿಲೋಕದಜ್ಞಾನ ನೀಗಲಾರದೆ
ಲೇಖನಿಯೂ ಅಳುತಿದೆ...

               ✍ ಸೂರ್ಯ 

Wednesday 9 January 2019

ಬಾಡಿಗೆ ತಾಯ್ತನ



ಈ ಲಲಿತೆ ಎಲ್ಲರಂತಲ್ಲ
(ಅ)ಸಾಮಾನ್ಯಳೆಂದೂ ಹೇಳುವಂತಿಲ್ಲ !

ಯಾವನದೋ ಅಸೆಗಳೀಡೇರಿಕೆಗೆ
'ಮೈಲಿ'-'ಗಲ್ಲ'ಆಗಿ ನಿಂತಿಹಳು ಹೀಗೆ:

ಮತ-ಧರ್ಮದ ಕಟ್ಟಳೆಗಳ ಸುಟ್ಟಾಕೆ-
ಯ ಮೇಲೆ ಈ ಪ್ರತಿಷ್ಠೆಯ ಮೊಹರೇಕೆ ?

'ಗರ್ಭ'ವೂ ಬಾಡಿಗೆಗೆ ಸಿಗುತ್ತಿದೆ
'ಆಗರ್ಭ' ಶ್ರೀಮಂ'ತನ-ಮನ' ತಣಿದಿದೆ.

                         ✍ ಸತೀಶ ಉ ನಡಗಡ್ಡಿ