Thursday 9 April 2020

ಯುದ್ಧ ಎಂದರೆ...





ಖಡ್ಗ, ಭರ್ಚಿ, ತೋಪುಗಳ
ವರ್ಷಧಾರೆಯ ಸದ್ದಲ್ಲ;
ಕೆಮ್ಮು, ಸೀನುವುದು,
ಗಂಟಲು ಹಿಡಿದುಕೊಂಡು
ಅರಚಾಡಿ ಸಾಯುವುದನ್ನೂ
ಈ ಯುದ್ಧ ಆವರಿಸಿಕೊಂಡಿದೆ !!

ಮಿಗ್, ರಫೆಲ್,ಎಫ್-ಸಿಕ್ಸ್ಟೀನುಗಳ
ಹಾರಾಟವೇನು ಬಾಣಲಿಲ್ಲ;
ಬಾಂಬು, ಬುಲ್ಲೆಟ್ಟುಗಳು
ಹೃದಯ ಕಂಪಿಸುವ ಧ್ವನಿಯಿಲ್ಲ;
AK47-56,ಸ್ನಿಪರ್ , ಟ್ಯಾಂಕರುಗಳು
ಇಲ್ಲೆಲ್ಲಿಯೂ ಕಾಣ ಸಿಗುವುದಿಲ್ಲ.
ಆದರೆ..,
ಯುದ್ಧ ಶುರುವಾಗಿ ಜಗದಾದ್ಯಂತ
ಮರಣ ಮೃದಂಗ ಬಾರಿಸಿದೆ !!

ಗಡಿ-ಗಡಿಗಳಲ್ಲಿ ಗನ್ನು ಹೆಗಲೇರಿಸಿಕೊಂಡು
ನಿಂತವರೆಲ್ಲ ರಕ್ಷಣಾ ಸೈನಿಕರೆಂದು
ಹೇಗೆ ಹೇಳಲಿ...?

ಗುಂಡಿನೇಟಿನ ಗಾಯದಂತೆ
ಮಾಸ್ಕ್ ಧರಿಸಿ ಮುಖ ಗಾಯವಾಗಿದೆ,
ಗ್ಲೌಸ್ ಹಾಕಿ, ಹಾಕಿ ಕೈ ಸುಲಿದಿದೆ !
"ವೈದ್ಯೋ ನಾರಾಯಣ ಹರಿ.."

ಸದಾ ಸಿದ್ಧ ಖಾಕಿ ಪಡೆ
ಲಾಠಿ-ಬೂಟು-ಬಂದೂಕಿನ ನಡೆ;
ಅಗೋಚರ ವೈರಿಯಿಂದ ಅಮಾಯಕರ
ರಕ್ಷಣೆಗೆ ಕಟಿಬದ್ಧ ಲಾಠಿ- ಖಾಕಿ ಕರ.

'ಅದೆಲ್ಲಿಯೂ ಕಾಣ ಸಿಗನು ವೈರಿ,
ಹುಡುಕಿ ಹುಡುಕಿ ವಿಷ ಹಾಕುತ್ತಿರುವಿರಿ..'
ಶಸ್ತ್ರಾಸ್ತ್ರಗಳ ಹಿಡಿದು ನಡೆದಿರುವ
ನೈರ್ಮಲ್ಯ ಕಾರ್ಮಿಕ ಸೇನೆಗೆ ಮುಗಿವೆ ಕರವ.

ಗುಂಡಿನ ಸದ್ದಿಲ್ಲದ ಯುದ್ಧ ನಡೆಯುತ್ತಿದೆ !!!
ಯೋಧರಿಲ್ಲಿ - ವೈದ್ಯರು, ಪೊಲೀಸರು, ಸ್ವಚ್ಛತಾ ಕರ್ಮಿಗಳು.

ಎಲ್ಲಾ ಯುದ್ಧದ ಪರಿಣಾಮ ಮಾತ್ರ ಒಂದೇ
"ಮರಣ ಜಾತ್ರೆ..!  ಹೆಣಗಳ ಮೆರವಣಿಗೆ...!!"

  ✍ ಸತೀಶ್ ಉ ನಡಗಡ್ಡಿ

Sunday 29 March 2020

ಪ್ರವಾಸ


ಬಾನಲ್ಲಿ ಸೂರ್ಯ ಮುಳುಗುತ್ತಿದ್ದಂತೆ ನಮ್ಮೊಳಗೊಂದು ಸೂರ್ಯೋದಯ ಆರಂಭವಾಗಿತ್ತು. ಆ ಸೂರ್ಯೋದಯದ ಖುಷಿಗಿಂತ ನಮಗೆ ನಮ್ಮಲ್ಲಿ ಅರಿವು-ಮರುವು ಜಾಸ್ತಿಯಾಗಿತ್ತು.
ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಬ್ಯಾಗಿನೊಳಗೆ ಹಾಕಿ ಜಿಪ್ ಎಳೆದು, ಆ ಕಡೆಯಿಂದ ಈ ಕಡೆಯಿಂದ ಬಂದು ಮತ್ತೆ ಜಿಪ್ ತೆಗೆದು "ಮತ್ತ ಏನಾರ ಬಿಟ್ಟೆನಾ ?" ಎಂದು ಮನದಲ್ಲೇ ಪ್ರಶ್ನಿಸಿಕೊಳ್ಳುತ್ತ ಮೀಸೆಯೊಳಗೆ ನಕ್ಕು, ಶಿಸೆಯೊಳಗಿನ ನೀರು ಗುಟುಕಿಸುವಷ್ಟರಲ್ಲಿ ಸಮಯ 5-10 ಆಗಿತ್ತು. ನಮ್ಮ BCM ಹಾಸ್ಟೆಲ್ ಬಸ್ ಹಿಂತಿರುಗಿ ಹೊರಟಿತು ಎನ್ನುವಷ್ಟರಲ್ಲಿ ಓಡಿ ಓಡಿ ಹೋಗಿ ಯಾವುದೇ ಆಯಾಸವಿಲ್ಲದೇ ಬಸ್ ಹಿಡಿದುಕೊಂಡೆವು. ಯಾಕೆ ನಮಗೆ ಆಯಾಸವಾಗಿರಲಿಲ್ಲ ಎಂದರೆ ನಾವು ಹೊರಟಿದ್ದು ತೀರ್ಥಯಾತ್ರೆಗಲ್ಲ "ಶೈಕ್ಷಣಿಕ ಪ್ರವಾಸ" ಕ್ಕೆ. ಪ್ರವಾಸದ ಗುಂಗಿನಲ್ಲಿ ಇಂಥಹ ಆಯಾಸವೂ ನಿರಾಯಸವೇ.

7 ಗಂಟೆಗೆ DIET ಎಂಬ ದೇಗುಲ ತಲುಪಿದೆವು. ಅಲ್ಲಿದ್ದ ಗೆಳೆಯರ ಬಳಗವೂ ನಮ್ಮಷ್ಟೇ ಕಾತುರದಿಂದ ಕಾಯುತ್ತಿದ್ದರು. ಎಲ್ಲರೂ 8.30ಕ್ಕೆ ಊಟ ಮುಗಿಯುತ್ತಿದ್ದಂತೆ KSRTC ಬಸ್ 'ಪಾಂವ್ ಪಾಂವ್...' ಎಂದು ಸದ್ದು ಮಾಡಿತು. "ಎಲ್ಲರೊಳಗೊಂದಾಗು ಮಂಕುತಿಮ್ಮ " ಎಂಬ ಕವಿ ಡಿವಿಜಿಯವರ ಮಾತಿನಂತೆ ನಾನು "ಶಂಭೋ ಶಂಕರ " ಎಂದು ಪ್ರವಾಸದ ತೇರನ್ನು ಹತ್ತಿದೆ.

ನಾವು 44 ಜನ ಮತ್ತು ನಮ್ಮೊಂದಿಗೆ ನಮ್ಮ ಹಿರಿಯರು 6 ಜನ ಹಾಗೂ 3 ಜನ ಉಪನ್ಯಾಸಕರು, ಇಬ್ಬರು ಉಪನ್ಯಾಸಕಿಯರು ಮತ್ತು ಒಬ್ಬ ಬಸ್ ಚಾಲಕ, ಒಟ್ಟು 56 ಜನ. ಸರಿಯಾಗಿ ರಾತ್ರಿ 9 ಗಂಟೆಗೆ ವರ್ಗ ಶಿಕ್ಷಕರಾದ ಶ್ರೀ A N ಪ್ಯಾಟಿಯವರು ಮತ್ತು PSDE ವಿಭಾಗದ ಮುಖ್ಯಸ್ಥರಾದ ಶ್ರೀ M N ದಂಡಿನ ಗುರುಗಳು ಶುಭ ಹಾರೈಸಿದರು.

ಮೊದ ಮೊದಲು ಎಲ್ಲರೂ ಸುಮ್ಮನೆ ಕುಳಿತಿದ್ದೆವು ಆದರೂ ನಮ್ಮ-ನಮ್ಮಲ್ಲೇ ಮಿತಿ ಇರಲಿಲ್ಲ. ಬೆಳಗವಿಯಿಂದ ಕಿತ್ತೂರು ದಾಟಿಕೊಂಡು 55 ಕಿಮೀ. ದೂರ 'ಭಾರತ್ ಪ್ಯಾಲೇಸ್' ಧಾಬಾ ಗೆ ಬಸ್ ನಿಂತಿತು. ಇಚ್ಛಿಸಿದವರು ಚಾ ಕುಡಿದರೆ, ಮಿಕ್ಕವರು ಟ್ಯಾಂಕ್ ಖಾಲಿ ಮಾಡಿದರು. 10 ನಿಮಿಷದ ವಿರಾಮ ಮುಗಿದು ಮತ್ತೆ ಪಯಣ ಆರಂಭವಾಯ್ತು. ಎಲ್ಲರೂ ಮಲಗಿದ್ದರು, ಕೆಲವೊಬ್ಬರು ಎಚ್ಚರವಿದ್ದರು.

ಬೆಳಗಿನ 4 ಗಂಟೆಗೆ ಬಸ್ ಕಡೂರು ಬಸ್ ನಿಲ್ದಾಣದಲ್ಲಿ ನಿಂತಿತ್ತು. ಎಲ್ಲರೂ ಇಳಿದು ಅಲೋಇಯೇ ನಿತ್ಯ ಕರ್ಮಾಚರಣೆಗಳನ್ನು ಮುಗಿಸುವಷ್ಟರಲ್ಲಿ 7 ಗಂಟೆ ಆಗಿತ್ತು. ತಡಮಾಡದೇ ಮೈಸೂರಿನತ್ತ ಹೊರಟೆವು. ಈ ಕಡೂರಿಗೆ ಬರುವಷ್ಟರಲ್ಲಿ ಹಲವು ಘಾಟ್ ಗಳನ್ನು ದಾಟಿದ್ದೆವು, ಆ ಕಗ್ಗತ್ತಲಲ್ಲಿ ನೋಡದಿದ್ದರೂ ದೇಹ ಅನುಭವಿಸಿತ್ತು. ಮುಂದೆಲ್ಲ ಹಸಿರು ಹಬ್ಬ ತಳಿರು ತೋರಣದಂತೆ, ಸಲಾಗಿ ನಿಂತ ಮರಗಳು, ಚಕ್ಕೆ-ಚಕ್ಕೆ ಗದ್ದೆಗಳು, ಬೆಟ್ಟ-ಗುಡ್ಡಗಳು, ಹೊಸ ಪ್ರದೇಶ, ಜನರ ವಿಭಿನ್ನ ಮಾತಿನ ಶೈಲಿ. ನೋಡಿ ಮೋಜು ಮಾಡಲು ಹಣ ಕೋಡಬೇಕೇ? ಇಲ್ಲ.

ಹೊತ್ತು ಏರುವುದರಲ್ಲಿ ಮೈಸೂರಿನ DIET ಕಾಲೇಜಿನಲ್ಲಿದ್ದೆವು. ಎಲ್ಲರೂ ತಮ್ಮ ತಮ್ಮ ಬ್ಯಾಗುಗಳನ್ನು ತೆಗೆದುಕೊಂಡು ರೂಮಿಗೆ ಹೋಗಿ ''ಫ್ರೆಶ್ ಆಗಾಕ್ ಅರ್ಧ ತಾಸು...." ಗುರುಗಳಿಂದ ಸಮಯ ದೊರಕಿತು. ಅದರಂತೆ ಎಲ್ಲರೂ ಫ್ರೆಶ್ ಆಗಿ, ತಾಯಿ ಚಾಮುಂದಿಯ ದರ್ಶನಕ್ಕೆ ಹೋದೆವು. ಬಸ್ ಬೆಟ್ಟವನ್ನು ಹತ್ತುತ್ತಿದ್ದಂತೆ ಎಲ್ಲರೂ ಮೈಸೂರಿನ ಉದ್ದಗಲ ನೋಡಿ ಸಂತಸ ಪಟ್ಟೆವು. 12 ಗಂಟೆಗೆ ಬಸ್ ದೇವಸ್ಥಾನ ತಲುಪಿತು.

" ಮೇಲೆ ಸೂರ್ಯನ ಬಿರು-ಬಿರು ಬಿಸಿಲು,
ಕೆಳಗೆ ಚುರು-ಚುರು ಟಾರ್ ರೋಡ್
ಮೈಗೆಲ್ಲ ಬಿಸಿಲ ಧಗೆಯಂತೆ
ಎದೆಯಲ್ಲಿ ಗೆಳತಿಯ ನೆನಪಿನ ಹಾಗೆ..."

ಹೀಗೆ ಮಂಜುಗಡ್ಡೆಯ ಮೇಲೆ ನಡೆದವರಂತೆ ನಾನೂ ಹೊರಟಿದ್ದೆ. ಉಳಿದವರು ನೆರಳು, ತಂಪು ಮರಳಿನ ಆಸರೆ ಪಡೆದರು ನಂತರ ಸರದಿ ಸಾಲಿನಲ್ಲಿ ನಿಂತು , ದೇವಿಯ ದರ್ಶನ ಪಡೆದು, ಫೋಟೋ ಗೆ ಪೋಸ್ ನೀಡಿ, ಸ್ವಲ್ಪ ಸಮಯ ಅಲ್ಲಿಯೇ ಕಳೆದು ಬಸ್ಸಿನತ್ತ ಹೆಜ್ಜೆ ಹಾಕಿ, ನಂದಿಶನನ್ನು ಭೇಟಿ ಮಾಡಿದೆವು. ಅಲ್ಲಿಂದ ನೇರವಾಗಿ ಪ್ರಾಣಿ ಸಂಗ್ರಹಾಲಯಕ್ಕೆ ಪ್ರಾಣಿಗಳ ಹಿಂಡು ಹೊರಟು, ಪ್ರವೇಶ ಪಡೆದು ಅವನ್ನು ನೋಡಿ ನಾವು, ನಮ್ಮನ್ನು ನೋಡಿ ಅವು ಹರ್ಷವಾಯಿತು.

ಬಿಸಿಲ ಬೇಗೆಗೆ ಬಾಯಿ, ಗಂಟಲು ಒಣಗಿ, ಸಿಕ್ಕ ನೀರಿಗೆ ಹೋರಾಡಿ "ಏನಗಲಿ ಮುಂದೆ ಸಾಗು ನೀ...." ಎಂದು ನಡೆದೆವು. ಬಿಳಿ ರಂಗಿನ ಮಯೂರಿ, ಬಣ್ಣ ಬಣ್ಣದ ಗಿಳಿ, ಗುಬ್ಬಿ, ಕಾಡು ಕೋಳಿ, ಜಿಂಕೆ, ಜಿರಾಫೆ, ಹುಲಿ, ಸಿಂಹ, ತೋಳ, ಕರಡಿ, ಕಾಡ್ಹಂದಿ , ಕಾಡು ಪಾಪ, ಮಂಗ, ಗೋರಿಲ್ಲ ಚಿಂಪಾಂಜೀ, ಹಾವು-ಹೆಬ್ಬಾವು, ಮೊಸಳೆ, ಅಮೆ, ಕಪ್ಪೆ ಒಂದೋ ಎರಡೋ ನಮ್ಮನ್ನೂ ಸೇರಿ ತರ ತರದ ಪ್ರಾಣಿಗಳಿದ್ದವು, ಸಮಯ 3 ಗಂಟೆ ಆಗಿತ್ತು.

ಮಧ್ಯಾಹ್ನದ ಅಲ್ಪಾಹಾರ ಮುಗಿಸಿ, ಅರಸರ ಮನೆ ಅರಮನೆಯಲ್ಲಿ ಆಳರಸರಂತೆ ಪ್ರವೇಶಿಸಿದೆವು; ರಾಜನಿಗೆ ರಾಣಿ ಇರಲಿಲ್ಲ, ರಾಣಿಗೆ ರಾಜ ಇರಲಿಲ್ಲ.

ಬಾಗಿಲುಗಳೆಲ್ಲ ಗಂಧದ ಮರದ ಬಳಕೆ, ಗೋಡೆಗಳಿಗೆಲ್ಲ ಚಿತ್ರ ವಿನ್ಯಾಸ: ಅದು ಬರಿಯ ಅರಮನೆಯಲ್ಲ ಅಗಣಿತ ಅಳಿಸಲಾಗದ ಕಲೆಗಳ ಅಗರದ ಮನೆ. ಅರಸರ ದಿನ ಬಳಕೆಯ ವಸ್ತುಗಳು, ಯುದ್ಧೋಪಕರಣಗಳು, ಆಟಿಕೆಗಳು, ಅತ್ಯಪರೂಪದ ವಸ್ತುಗಳಿದ್ದವು. ಸಮಯ 5 ಗಂಟೆಯಾಗಿದ್ದು ಗೊತ್ತಾಗಿ ತಟ್ಟನೆ ಬಸ್ಸನ್ನೇರಿ ಹೊರಟೆವು. ಎಲ್ಲಿಗೆ ? ಸರ್ M ವಿಶ್ವೇಶ್ವರಯ್ಯನವರ ಅತ್ಯದ್ಭುತ ತಂತ್ರಗರಿಕೆಯ ಕಟ್ಟಡ ನೋಡಲು.

KRS. ಅಂದ್ರೆ, ಕೃಷ್ಣ ರಾಜ ಸಾಗರ. ಇದನ್ನು ಕನ್ನಡದ ಜೀವನದಿ ಎಂದೂ, ದಕ್ಷಿಣ ಭಾರತದ ಗಂಗಾ ನದಿ ಎಂದೂ ಕರೆಯಲ್ಪಡುವ ಕಾವೇರಿ ನದಿಗೆ ಕಟ್ಟಲಾಗಿದೆ. 6 ಗಂಟೆಗೆ KRS ತಲುಪಿದೆವು, ದಿನವಿಡೀ ನಡೆದು ಆಯಾಸವಾದರೂ ಓಡೋಡಿ ನುಗ್ಗಿ, ತಂಪು ಪಾನೀಯ ಜಗ್ಗಿ ಹೋಗುವಷ್ಟರಲ್ಲಿ ಸಮಯ 7 ಗಂಟೆ ಆಗಿತ್ತು.

ಕಾರಂಜಿಯ ನೃತ್ಯ ವೀಕ್ಷಣೆಗಾಗಿ ಕಾತುರದಿಂದ ಕಾಯ್ದಿದ್ದ ನಮಗೆ ದಿಕ್ಕು ತೋಚದಂತಾಗಿ ನೀರ ನೃತ್ಯ ಸ್ಥಳದತ್ತ ಕಲ್ಕಿತ್ತೆವು. ಮೊದಲೇ ಸ್ಥಳ ಪರಿಚಯವಿದ್ದ ನಾವು (ನಾನು, ದಳವಾಯಿ, ಬೊಮ್ಮಣ್ಣವರ್, ಕೋಟಿ) ನಮ್ಮೊಂದಿಗೆ ಕೆಲವರನ್ನು ಎಳೆದುಕೊಂಡು ಕಾಲಿಗೆ ಕೀ ಕೊಟ್ಟು ಓಡಲಾರಂಭಿಸಿದೆವು. ಆ ಜನ ಜಂಗುಳಿಯಲ್ಲಿ ನುಸುಳಿಕೊಂಡು ಹರ ಸಾಹಸ ಮಾಡಿ ಹೋದೆವಾದರೂ ಸಮಯ ಮೀರಿತ್ತು, ಕೊನೆಯ ಹಾಡಿನ ನೃತ್ಯ ನೋಡಿ ಮೃತ್ಯುವಿನ ಕದ ತಟ್ಟುವಂತೆ ಓಡಿದ ನಮಗೆ ಸಾಕಾಗಿತ್ತು. ಸಾಯುವವರ ಬಾಯಿಗೆ ಹನಿ ನೀರು ಸಿಕ್ಕಂತೆ ಒಂದೇ ಒಂದು ಹಾಡಿನ ನೃತ್ಯ ನೋಡಿದೆವು "ವಂದೇ ಮಾತರಂ" ಹಾಡು. ನಮ್ಮ ನಿಮ್ಮೆಲ್ಲರ ಏಕತೆಯ ಜಾಡು ಇದೇ ಅಲ್ಲವೇ ? ಎಲ್ಲರೂ ಒಟ್ಟುಗೂಡಿ ಬಸ್ಸಿನತ್ತ ನಡೆದೆವು, ಇಚ್ಛಿಸದವರು ಇಷ್ಟದ ಖಾದ್ಯವನ್ನು ತಿಂದರು. ಪಯಣ ಮೈಸ್ಯುರು DIET ಕಡೆ ಹೊರಟಿತು. ಸಮಯ ಸರಿಯಾಗಿ 10 ಗಂಟೆ ಆಗಿತ್ತು. KRS ಇಂದ DIET ಗೆ ಬಂದ ಸಮಯ ಹೇಗೆ ಜಾರಿತು ಎಂದು ತಿಳಿಯಲಿಲ್ಲ ಯಾಕೆಂದರೆ, ಜೋಕ್ ಹೇಳುವುದು, ಹಾಡು ಹಾಡುವುದು, ಡಾನ್ಸ್ ಮತ್ತು ನಟಿಸುವುದು ಹುಗೆ ವಿವಿಧ ಚಟುವಟಿಕೆಗಳೊಂದಿಗೆ ಎಲ್ಲರೂ ಎಲ್ಲರನ್ನೂ ನಗಿಸುತ್ತ ನಗುತ್ತ ಮನರಂಜಿಸಿದೆವು. ಗುಡಿಗೆ ಬಂದು ಕೈ ಕಾಲು ಮುಖ ತೊಳೆದು, ಬಿಸಿ ಊಟ ಸ್ವಾಹಾ ಮಾಡಿ ಸಣ್ಣಗೆ ಸುದ್ಧಿಯಿಲ್ಲದೆ ನಿದ್ದೆಯ ಕಡಲಲ್ಲಿ ಜಾರಿದೆವು.

ಮರುದಿನ ಮುಂಜಾಯ 5.30ಕ್ಕೆ ಎದ್ದು, ಎಲ್ಲ ಮಾಡಬೇಕಾದ ಕೆಲಸಗಳನ್ನು ಮಾಡಿ, 7.30ಕ್ಕೆ ಶ್ರೀ ರಂಗಪಟ್ಟಣಕ್ಕೆ ಹೊರಟೆವು. ದರಿಯಾ ದೌಲತ್ ಅರಮನೆಯನ್ನು ದರ್ಬಾರಿನಲ್ಲಿ ನೋಡದಿದ್ದರೂ, ದಾರಿಯಲ್ಲೇ ನೋಡಿ, ರಂಗನಾಥ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ, ದರ್ಶನ ಪಡೆದು, ರಂಗನ ಜೊತೆ ಫೋಟೋ ತೆಗೆಸಿಕೊಳ್ಳಲು ಹೋಗಿ ಅರ್ಚಕನಿಂದ ಬೈಸಿಕೊಂಡು ಹೊರ ಬಂದು, ಶ್ರವಣ ಬೆಳಗೊಳದತ್ತ ನಡೆದೆವು.

ಬಸ್ಸಿನಲ್ಲಿ ಸಮಯ ಕಳೆಯಲು ಏನು ಮಾಡುವುದೆಂದು ತಿಳಿಯದೆ ಕಂಗಾಲಾಗಿ ಹಿಂದಿನ ದಿನದ ನಟನೆ, ಅಂತ್ಯಕ್ಷರಿ ನೆನಪಾಗಿ ಚುಟುಕು ಹಾಡುಗಳೊಂದಿಗೆ ಯಡಿಯೂರಪ್ಪನವರ ಸರಕಾರಕ್ಕೆ ವಿರೋಧ ಪಕ್ಷಗಳು ಹೆಣಗುವಂತೆ ಗೆಲ್ಲಲ್ಲು ನಾವು ಹುಡುಗ-ಹುಡುಗಿಯರು ಒಬ್ಬರ ಮೇಲೊಬ್ಬರಂತೆ, ಯಾರಿಗೆ ಯಾರು ಕಡಿಮೆ ಇಲ್ಲದಂತೆ ಸ್ಪರ್ಧಿಸಿದರೂ ಆಡಳಿತದ ಚುಕ್ಕಾಣಿಯನ್ನು ಸಮರ್ಥವಾಗಿ ನಿಭಾಯಿಸಲು ನಮಗಾಗದೆಂದು ಸ್ತ್ರೀಯರು ಗೆಲುವಿನ ಸೋಪಾನ ನಮಗೆ ಬಿಟ್ಟು ಪಯಣ ಸಾಗಿತು.

ಕಡಿದಾದ ಬೆಟ್ಟ-ಗುಡ್ಡಗಳ ಮಧ್ಯೆ
ಚಿಕ್ಕ-ಪುಟ್ಟ ಹಾಡುಗಳೊಂದಿಗೆ
ಅಲ್ಲಲ್ಲಿ ತಿಳಿಹಾಸ್ಯದಿಂದ ಎಲ್ಲರನ್ನೂ 
ಸುಳಿಸುತ್ತುವ ನಗೆ.

ರೋಡಿನ ದುರವಸ್ಥೆಯಿಂದ ಹಿಂಬದಿಯಲ್ಲಿ ಕುಳಿತ ಪಾಪಿಗಳ ಗೊಳಿನ ಬಗೆ, ನಮ್ಮ ಅತಿಯಾದ ಸಂತೋಷಕ್ಕೆ ಮಿತವಾಗಿ ಹೊಗೆ ಹಾಕಿತ್ತು. "ದೋಣಿ ಸಾಗಲಿ ಮುಂದೆ ಹೋಗಲಿ" ಎಂಬ ಕವಿ ವಾಣಿಯಂತೆ ಶ್ರವಣಬೆಳಗೊಳ ತಲುಪಿದೆವು.

ಆ ಬೃಹತ್ ಕಲ್ಬೆಟ್ಟ ಏರುವಷ್ಟರಲ್ಲಿ ಅರ್ಧ ಜನರು ಅರ್ಧಕ್ಕೆ "ಉಸ್...." ಎಂದು ನಿಟ್ಟುಸಿರು ಬಿಟ್ಟು, ಟೊಂಕಕ್ಕೆ ಕೈ ಇಟ್ಟು ಸೂರ್ಯನತ್ತ ದಿಟ್ಟಿಸಿ ನೋಡತೊಡಗಿದರು. ನಾವಂತೂ ನಮ್ಮದೇ ಕಿತಾಪತಿಯೊಂದಿಗೆ ಮೇಲೆ ಹೋಗಿ ಫೋಟೋ ಪೋಸ್ ಕಪಿಚೇಷ್ಟೆಯಲ್ಲಿ ತೊಡಗಿದ್ದೆವು.

ಮುಂದಾದವನೆ ನಾಯಕ
ಹಿಂದುಳಿದ ಹಿಂಬಾಲಕ
ಬರುತ್ತಿತ್ತು ಹೈಬ್ರಿಡ್ ಪೀಳಿಗೆ.

ಗೊಮ್ಮಟೇಶನ ಭವ್ಯ ಮೂರ್ತಿಗೊಂದು ಚಿಕ್ಕದಾಗಿ ನಮಿಸಿ, ಹೊರ ಬರುವಷ್ಟರಲ್ಲಿ ನಮ್ಮ ಸ್ತ್ರೀ ಸಮೂಹ ಶಾಸನ ಕಲ್ಲುಗೆಳೆದುರು ಕುಳಿತು ಬರೆಯುತ್ತಿದ್ದರು, ಏನೆಂದು ನಮಗೂ ತಿಳಿಯಲಿಲ್ಲ, " Go ahead" ಎಂದು ಹಾರೈಸಿದೆವು. ಮುಂದೊಮ್ಮೆ ನಮಗೂ ಸಹಾಯಕ್ಕೆ ಬರಬಹುದಲ್ಲವೇ ಅವರ ಈ ಪ್ರಯತ್ನ ! ಕೆಳಗಿಳಿದು ಬರುವಾಗ ಇಬ್ಬರು ವಿದೇಶಿ ಪ್ರವಾಸಿಗರು ಸಿಕ್ಕರು, ಅವರೊಂದುಗೆ ಫೋಟೋ ತೆಗೆಸಿಕೊಂಡು ಕೆಲ ಪ್ರಶ್ನೆಗಳನ್ನು ಕೇಳಿ 'ಗೊಳ್..' ಎಂದು ನಕ್ಕು ಕಲ್ಲು ಮೆಟ್ಟಿಲುಗಳನ್ನಿಳಿದೆವು. ಬಾಯಾರಿಕೆ ಆಗಿ ನೀರಿನ ದಾಹಕ್ಕೆ ಎಲ್ಲೇ ಇಲ್ಲದಂತಾಯಿತು ಒಲ್ಲೆ ಈ ಜೀವನ ಎನ್ನುತ್ತ ನೀರಿಗಾಗಿ ಸಾಲಲ್ಲಿ ನಿಂತು, ನೀರು ಕುಡಿದು,  ಹೋಟೆಲ್ ಒಳ ನುಗ್ಗಿ ತಿಂಡಿ ತಿಂದು ಎಲ್ಲರೂ ಬಸ್ ಹತ್ತಿರ ಬಂದರು. ನಾನು ಮತ್ತು ನನ್ನ ನಾಲ್ಕು ಜನ ಸ್ನೇಹಿತರು ಎಳೆನಿರು ಕುಡಿದು "ಬೇಡ" ಎಂದರು ಕೇಳದೆ ಎಳೆ ಕೊಬ್ಬರಿ ತಿನ್ನಿಸಿದರು. ತಿಂದೆ. ಮುಂದೆ ಇಂದೇ ನನಗೆ ಸ್ವಲ್ಪ ತೊಂದರೆ ಮಾಡಿತು.

ಹಾಸನ ಜಿಲ್ಲೆಯ ಹಳೇಬೀಡಿನ ಕಡೆಗೆ ಅದೇ ಮನರಂಜನೆಯೊಂದಿಗೆ ಪಯಣ ಸಾಗಿತು. ಅಲ್ಲಿ ಹೋಗಿ ಅಲ್ಲಿನ ಶಿಲ್ಪ ಕಲೆಗೆ ತಬ್ಬಿಬ್ಬಾಗಿ, ಬಾಯಿ ಬಿಟ್ಟುಕೊಂಡು ನೋಡುತ್ತಾ ತಿರುಗಡಿದೆವು. ಅಲ್ಲೆಯೇ ಅನ್ನ ದಾಸೋಹ ಇದ್ದಿದ್ದರಿಂದ ಊಟ ಮುಗಿಸಿಕೊಂಡು ಬೇಲೂರಿನ ಕಡೆಗೆ ನಡೆದೆವು. ಈಗ ಈಲ್ಲರಲ್ಲೂ ಕುತೂಹಲ. ಏನೋ ಒಂದು ಮನದಲ್ಲಿ ಗೋಣಗುವಿಕೆ. ಶೀಲಾ ಬಾಲಿಕೆಯರ ವೈಯಾರದ ಶಿಲ್ಲಗಳನ್ನು ನೀಡಬೇಕೆಂದು. ಸಲಹೆಗಾರನೊಬ್ಬನ ಸಹಾಯದೊಂದಿಗೆ ಪ್ರತಿ ಪ್ರತಿಮೆಯ ಮಾಹಿತಿ ಮಹಾತ್ಮೆ ಮಾಡಿದೆವು. ಫೋಟೋ ಪೋಸ್ ಕಾಪಿ ಚೇಷ್ಟೆ ಎಲ್ಲೆಲ್ಲಿಯೂ ನಿಲ್ಲುವ ಮಾತೇ ಇಲ್ಲ ಎಂಬುದು ತಿಳಿದಿರಿ.

ಎಲ್ಲ ಮುಗಿದು ಬಸ್ಸಿನಲ್ಲಿ ಬಂದು ಕುಳಿತು ಧರ್ಮಸ್ಥಳದ ಕಡೆಗೆ ನಡೆದೆವು. ಬಸ್ ಹೊರಟಿತು ಆದರೆ ಇಬ್ಬರು ಸ್ನೇಹಿತರು ( ಚೇತನ್ ಮತ್ತು ಯಲ್ಲಪ್ಪ) ಬಸ್ಸಿನಲ್ಲಿ ಇರಲಿಲ್ಲ. ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಸ್ವಲ್ಪ ದೂರ ಹೋದ ನಂತರ ಅವರು ಮೊಬೈಲ್ ಮೂಲಕ ನಮ್ಮನ್ನು ಸಂಪರ್ಕಿಸಿದಾಗ ಡ್ರೈವರ್ ಬ್ರೇಕ್ ಹಾಕಿದ ಅವರು ಬರುವವರೆಗೂ ಗುರುಗಳ ಮಂತ್ರ ಪಟನೆ ಶುರುವಾಯಿತು. ಬಂದ ಮೇಲೆ ಸದ್ದಿಲ್ಲದೆ ಪಯಣ ಸಾಗಿತು.

ಬಸ್ ವೇಗವಾಗಿ ರಸ್ತೆಯನ್ನು ನುಂಗುತ್ತಿದ್ದಂತೆಲ್ಲ ದಟ್ಟಡವಿಯಲ್ಲಿ ತಿರುವು-ಮುರುವುಗನ್ನು ದಾಟುತ್ತಿದ್ದೆವು. ಕಿಕ್ಕಿರಿದು ನಿಂತ ಬೆಟ್ಟಗಳು ಮುಗಿಳಿಗೆ ಮುತ್ತಿಕ್ಕುವಂತಿದ್ದವು. ಪ್ರಕೃತಿಯ ಈ ವೈಭವ ನೋಡುವ ನಮಗೆ ಸಂತೋಷದ ಎಲ್ಲೆ ಮೀರಿ ಸ್ವರ್ಗಕ್ಕೆ ಒಂದೇ ಗೇಣು ಎಂಬಂತೆ ನಲಿದೆವು. ಬಸ್ ಬೆಟ್ಟವನ್ನು ತಿರುವು-ಮುರುವು ಬಳಸಿ ಹತ್ತಿತ್ತಿದ್ದರೆ ಹಿಂದಿನ ಸೀಟಿನಲ್ಲಿ ಕುಳಿತವರು ಆಕಡೆ ಈಕಡೆ ಜೋಲಿ ಆಡಿ, ಮಿತಿ ಮೀರಿ ತಡೆಯಲಾಗದೆ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಅಂತವರಲ್ಲಿ ಮೊದಲಿಗ ನಾನು. ನನ್ನ ನಂತರ ಏಳೆಂಟು ಜನ ನನ್ನನ್ನು ಹಿಂಬಾಲಿಸಿದರು.

ನನ್ನನ್ನು ನಾನು ತುಂಬಾ ಬೈದುಕೊಂಡೆ. ಯಾಕೆಂದರೆ ಪ್ರಕೃತಿಯ ಅತ್ಯಮೂಲ್ಯ ಸೌಂದರ್ಯವನ್ನು ನೋಡಲು ನನ್ನ ವಾಂತಿಯು ಕಣ್ಣಿಗೆ ಬಟ್ಟೆ ಕಟ್ಟಿತು. ಹೀಗಾಗಲು ಬೇಲೂರಿನಲ್ಲಿ ತಿಂದ ಆಹಾರ ಮತ್ತು ಎಳೆ ಕೊಬ್ಬರಿ ಕಾರಣ. ನಮ್ಮ ಪರಿಸ್ಥಿತಿ ನೋಡಲಾಗದೆ ಮರುಗಿದ ಚಾಲಕ ಘಾಟ್ ಪ್ರದೇಶದ ಕಾರಣ ಎಲ್ಲೂ ನಿಲ್ಲಿಸದೆ ಚಲಿಸಿ ಸ್ವಲ್ಪ ದೂರ ಹೊದ ಮೇಲೆ ನಿಲ್ಲಿಸಿದ. ಮಾತ್ರೆ ತೆಗೆದುಕೊಂಡೆವು ಸ್ವಲ್ಪ ವಿಶ್ರಾಂತಿಯ ನಂತರ ಪ್ರಯಾಣ ಬೆಳೆಸಿ ಸಂಜೆಯ 7.30ಕ್ಕೆ ಧರ್ಮಸ್ಥಳ ತಲುಪಿದೆವು. ಲಾಡ್ಜ್ ಮಾಡಿ, ಲಗೇಜ್ ಎಲ್ಲಾ ರೂಮಿನಲ್ಲಿಟ್ಟು, ಫ್ರೆಶ್ ಆಗಿ ಊಟಕ್ಕೆ ಎಲ್ಲರೂ ದೇವಸ್ಥಾನಕ್ಕೆ ಹೋದರು. ಆದರೆ ನಾನು ಮತ್ತು ಚೇತನ್ ರೂಮಿನಲ್ಲೇ ಉಳಿದೆವು ಯಾಕೆಂದರೆ ಅತಿಯಾಗಿ ವಾಂತಿ ಮಾಡಿಕೊಂಡಿದ್ದರಿಂದ ನಮ್ಮಲ್ಲಿ ತ್ರಾಣ ನಿಶಕ್ತಗೊಂಡಿತ್ತು. ಅವರೆಲ್ಲ ಊಟ ಮಾಡಿ ಬರುವಾಗ ನಮಗೆ ಫ್ರೂಟಿ ತಂದು ಕೊಟ್ಟರು ಅದನ್ನಷ್ಟೇ ಕುಡಿದು ಮಲಗಿದೆವು.

ಮರುದಿನ ಬೆಳಗಿನ 5 ಗಂಟೆಗೆ ಎದ್ದು, ನಿತ್ಯ ಕರ್ಮಾದಿಗಳನ್ನು ಮುಗಿಸಿ, ಮಂಜುನಾಥನ ದರ್ಶನಕ್ಕಾಗಿ ಸಾಲಲ್ಲಿ ನಿಂತು , ದೇವರಿಗೊಂದು ಕೋರಿಕೆ ಸಲ್ಲಿಸಿ "ಆ ಅರ್ಜಿಯನ್ನು ರಿಜೆಕ್ಟ್ ಮಾಡಿದಿರಪ್ಪಾ.." ಎಂದು ಕೇಳಿಕೊಂಡು ಹೊರ ಬಂದೆ. 10 ಗಂಟೆಗೆ ಮಂಜೂಷ ವಸ್ತು ಸಂಗ್ರಹಲಯಕ್ಕೆ ಪ್ರವೇಶ ಪಡೆದು ಹಿಂದೆಂದೂ ಕಂಡು ಕೇಳರಿಯದ ಭಿನ್ನ-ವಿಭಿನ್ನ ವಸ್ತುಗಳನ್ನು ವೀಕ್ಷಿಸಿದೆವು. ಇಲ್ಲಿ ನನ್ನ ಮನ ಸೆಳೆದ ವಸ್ತುವೆಂದರೆ, ಆನೆ ದಂತದಲ್ಲಿ ಕೆತ್ತಿದ 8 ಇಂಚು ಎತ್ತರದ ಗಣೇಶ ವಿಗ್ರಹ. ಮತ್ತು, ಅದರ ಸುತ್ತಣ ಕಲಾಕೃತಿ ವರ್ಣಾತೀತವಾಗಿತ್ತು. ಕಲೆಗಾರನ ತಾಳ್ಮೆ ಮೆಚ್ಚುವಂತದ್ದು, ಅಷ್ಟು ಸೂಕ್ಷ್ಮ ಕೆತ್ತನೆಯೇ ಅದು. ಅಲ್ಲೇ ಪಕ್ಕದಲ್ಲಿದ್ದ ಕಾರ್ ಮ್ಯೂಸಿಯಂ ಗೆ ಹೋಗಿ ತರ-ತರದ ಕಾರುಗಳನ್ನು ನೋಡಿ ಹೊರಬಂದ ಕೆಲ ಹಸಿದವರು ಧರ್ಮಸ್ಥಳದ ಪ್ರಸಾದಕ್ಕೆ ಮೊರೆ ಹೋದರು. ನಾನು ಅಜೀತ್, ಶಿವರುದ್ರ, ಸಿದ್ದು, ಬಸ್ಸಿನಲ್ಲೇ ಕುಳಿತೆವು.

ಎಲ್ಲರೂ ಬಂದ ನಂತರ ಮಣಿಪಾಲ್ ಗೆ ಹೊರಟೆವು. ಅಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಆಟೋನೋಮಿ ಮ್ಯೂಸಿಯಂ ಗೆ ಹೋಗಿ ಮಾನವ ಶರೀರದ ಒಳ-ಹೊರ ಅಂಗಗಳ ನೀಳ-ಅಡ್ಡ ಸೀಳಿಕೆ ಸಂಗ್ರಹ ವೀಕ್ಷಿಸಿ " ಏನೇನಿದೆ ಈ ದೇಹದಲ್ಲಿ... ಈ ಜೀವನದಲ್ಲಿ..." ಎಂದು ಹೇಳಿಕೊಳ್ಳುತ್ತ ಬಸ್ಸನ್ನೇರಿದೆವು. ಸಮಯ 2ರ ಆಸುಪಾಸಿತ್ತು, 3ರ ಹೊತ್ತಿಗೆ ಮಲ್ಪೆಗೆ ಹೋಗಿ ಸಮುದ್ರದ ಉಪ್ಪು ನೀರಿನಲ್ಲಿ ಬೆಪ್ಪರಂತೆ ಜಿಗಿದಾಡಿ, ಕುಣಿದು-ಕುಪ್ಪಳಿಸಿದೆವು.

ತೀರಕ್ಕೆ ರಭಸದಿಂದ ಬರುವ
ತೆರೆ-ತೊರೆಗಳಂತೆ ನಿನ್ನ
ನೆನಪನ್ನು ಹೆಕ್ಕಿ ತಂದು ಮನಸ್ಸು
ಎದೆಯಾಚೆ ಹಾಕುತ್ತಿದೆ ಹುಡುಗಿ.

ಅಲ್ಲಿಂದ ಸಂಜೆಯ 5 ಗಂಟೆಗೆ ಉಡುಪಿಯ ಶ್ರೀ ಕೃಷ್ಣನ ಸನ್ನಿಧಾನಕೆಜೆ ಬಂದೆವು. ಯಾರೂ ತಡ ಮಾಡದೇ ನೆರವೇರುತ್ತಿದ್ದ ಪೂಜೆಯಲ್ಲಿ ಪಾಲ್ಗೊಂಡೆವು. ಅಲ್ಲಿನ ಬಿಸಿಲ ಝಳಕ್ಕೆ ಮತ್ಯೋಮ್ಮೆ ಸ್ನಾನವಾಗಿತ್ತು. ಪೂಜೆ ಮುಗಿಸಿ ಹೊರ ಬಂದು ತಂಗುವುದರ ಬಗ್ಗೆ ಚರ್ಚಿಸಿ 7.30ಕ್ಕೆ ಕೊಲ್ಲೂರಿನ ಕಡೆಗೆ ಪಯಣ ಆರಂಭಿಸಿದೆವು.

ಬಸ್ಸಿನಲ್ ಹಾಡುತ್ತ, ನಗಿಸುತ್ತ, ನಟಿಸುತ್ತ ಮನರಂಜನೆ ಸಾಗಿತ್ತು.

ಇಲ್ಲಿ ನಾನು ಮತ್ತು ಮಹಾಕೂಟೇಶ ಬಬ್ರುವಾಹನ ಚಿತ್ರದ 'ಏನು ಪಾರ್ಥ....' ನಟನೆ ಮೂಲಕ ರಂಜಿಸಿದೆವು. ರಾತ್ರಿಯ 11ಕ್ಕೆ ಕೊಲ್ಲೂರು ತಲುಪಿ ಲಾಡ್ಜ್ ಆಶ್ರಯ ಪಡೆದುಕೊಂಡೆವು.

ಬೆಳಿಗ್ಗೆ 4.30ಕ್ಕೆ ಎದ್ದು ಮುಗಿಸಬೇಕಾದ ಕೆಲಸಗಳನ್ನೆಲ್ಲ ಮುಗಿಸಿ ತಾಯಿ ಮುಕಾಂಬಿಕೆಯ ದರ್ಶನಕ್ಕೆ ಹೊರಡುವ ಸಮಯಕ್ಕೆ ಈಶ್ವರ್ ಪಾಟೀಲ್ ತೀವ್ರ ಹೊಟ್ಟೆ ನೋವಿನಿಂದ ನರಳಲಾರಂಭಿಸಿದ.  ಒಂದಷ್ಟು ಜನ ದರ್ಶನಕ್ಕೆ ಹೋದರೆ ಮತ್ತೆ ಒಂದಷ್ಟು ಜನ ಆಸ್ಪತ್ರೆಗೆ ಹೋದೆವು. ನಂತರ ಮುರುಡೇಶ್ವರಕ್ಕೆ ಪಯಣ ಬೆಳೆಸಿದೆವು. ಶಿವನ ಭವ್ಯ ಪ್ರತಿಮೆಯನ್ನು ಕಣ್ಣೆದುರಿಗೆ ಮನಸ್ಸು ತಂದುಕೊಂಡಿತಾದರು ಅದರ ಅಪ್ರತಿಮ ಚೆಲುವನ್ನು ಸವಿಯಲು ಅಲ್ಲಿಗೆ ಹೋಗುವವರೆಗೆ ಕಾಯಲೇ ಬೇಕಿತ್ತು.

ಬಸ್ಸಿನಿಂದ ಇಳಿದ ತಕ್ಷಣ ಎಲ್ಲರೂ ದಿಢೀರ್ ಶಿವನತ್ತ ನಡೆದರು. ತಿರುಗಾಡಿ ಸ್ಥಳದ ಅಂದ-ಚಂದವನ್ನು ಸವಿದು ಹೊಟ್ಟೆಗಿಷ್ಟು ಹಿಟ್ಟು ಹಾಕಿಕೊಂಡು ಗಟ್ಟಿಯಾಗಿ ಸಮುದ್ರಕ್ಕಿಳಿಯುವ ಎಂದು ಯೋಜಿಸಿದೆವು. ಈ ನಮ್ಮ ಯೋಜನೆ ಸುನಾಮಿಗೆ ಸಿಕ್ಕ ಬೇನಾಮಿ ಮಿನಿನಂತೆ ಆಯಿತು. ಯಾಕೆಂದರೆ, ನಮ್ಮ 56 ವಾನರ ಸೈನ್ಯಕ್ಕೆ ಯಾವೊಬ್ಬ ಹೋಟೆಲ್ ನವನೂ ಅಡುಗೆ ಮಾಡಿ ಹಾಕಲು ಮುಂದೆ ಬರದಾದ. ಕೊನೆಗೊಬ್ಬ ಕೋಟಿಗೊಬ್ಬ ಎಂಬಂತೆ ಒಪ್ಪಿದ ಆದರೆ " ಹೋಟೆಲ್ ಇಲ್ಲಿಂದ ಸ್ವಲ್ಪ ದೂರ ಉಂಟು ಬಸ್ಸಲ್ಲಿ ಹೋಗಿ " ಎಂದು ಬಿಟ್ಟಿ ಸಲಹೆ ಕೊಟ್ಟ, ನಾವು ಸ್ವಲ್ಪ ದೂರ ಅಲ್ಲವೇ ಹಾಗಾಗಿ ಕಾಲ್ನಡಿಗೆಯಲ್ಲಿ ಹೊರಟೆವು. ನಮ್ಮ ಎಣಿಕೆಯಂತೆ ಅದು ಸ್ವಲ್ಪ ದೂರದಲ್ಲಿರಲಿಲ್ಲ, ಸ್ವಲ್ಪ ದೂರವೇ ಇತ್ತು. ಹೆಜ್ಜೆಗಳನ್ನು ಎಷ್ಟು ಕಿತ್ತಿಟ್ಟರು ಬಡ್ಡಿ ಮಗನ  'ಕಾಮತ್ ಹೋಟೆಲ್' ಮಾತ್ರ ಕಾಣದು. ನಡೆದು ನಡೆದು ಹೋದಂತೆ ಹುಡುಗಿಯರು ಉಪಹಾರ ಮುಗಿಸಿ "ಮತ್ತೆ 3 ಕಿಮೀ. ನಡೆದು ಬೀಚ್ ಗೆ ಬರಬೇಕಾ ..?" ಎಂದು ಉದ್ಘಾರಿಸಿದರು. ಈ ಉದ್ಘಾರದಲ್ಲೇ ಬೀಚಿನಲ್ಲಿ ಮಾಡಬೇಕಾದ ಮೋಜು ಮಾಸ್ತಿ ಕರಗಿ ಹೋಗಿತ್ತು.

ಕಡೆಗೆ ತಮ್ಮಣ್ಣವರ ಸರ್ ಈ 'ಬೀಚ್ ಮೋಜಿಗೆ ಬೆಂಕಿ ಬಿತ್ತು..' ಎಂದು ರಿಕ್ಷಾ ಮಾಡಿ ಡ್ರೈವರನನ್ನು ಕಳಿಸಿ ಬಸ್ ತರ ಹೇಳಿದರು. ಹೀಗೆ ಮಧ್ಯಾಹ್ನದ 12 ರ ಉರಿ ಬಿಸಿಲಿನಲ್ಲಿ ಮುರುಡೇಶ್ವರದಿಂದ  ಇಡಗುಂಜಿ ಗಣೇಶನತ್ತ ಪಯಣ ಮತ್ತದೇ ಮೋಜು ಮಸ್ತಿ ಮಡುಗತ್ತಿತ್ತು. ಒಂದು ಗಂಟೆಯ ಅಂತರದಲ್ಲಿ ಇಡಗುಂಜಿ ತಲುಪಿ ದರ್ಶನ ಮುಗಿಸ್ಕೊಂಡು ಗೋಕರ್ಣದ ಕಡೆ " ಗೋವಿಂದಾ... ಗೋ.... ವಿಂದ" ಎಂದೆವು.

ಸಂಜೆಯ 5 ಗಂಟೆಗೆ ಗೋಕರ್ಣಕ್ಕೆ ಕಾಲಿಟ್ಟು ಆತ್ಮಲಿಂಗ ಸ್ಪರ್ಶಿಸಿ ಹಿರ ಬಂದು ಬೀಚ್ ಕಡೆಗೆ ನಡೆದೆವು.

 ಬೀಚಿನಲ್ಲಿ ಮನಸು ಬಿಚ್ಚಿ,
ಬೆಚ್ಚಗಿನ ಭಾವಗಳ ಬಾಚಿ,
ಹೃದಯದಾಳದ ಮಾತುಗಳ ದೋಚಿ, 
ಚುಟುಕು ಹನಿಗವನಗಳ ಗೀಚಿದೆ.

ತಿರುಗುವಷ್ಟರಲ್ಲಿ ಎಲ್ಲರೂ ಸಲಾಗಿ ಕುಳಿತು ಸೂರ್ಯನ ಸಾವನ್ನು ಎದುರು ನೋಡುತ್ತಿದ್ದರು. ಅಳಿದುಳಿದ ಚಕ್ಕುಲಿ, ಚೂಡಾ ಲಾಡುಗಳಷ್ಟೇ ಸಿಕ್ಕವು. ಅವನ್ನೇ ತಿನ್ನುತ್ತಾ ನಾನು ಸೂರ್ಯ ಸಾವನ್ನು ನೀಡಲು ಸನ್ನದ್ಧನಾಗಿ ಕುಳಿತೆ.

ಅತಿಯಾದ ಮೋಡ ಕವಿದ ವಾತಾವರಣ ಇದ್ದ ಕಾರಣ ಎಲ್ಲರಿಗೂ ನಿರಾಶೆಯಾಯಿತು. ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ ನಮ್ಮ ಆಸೆಯೂ ಆಯಿತು. ಸ್ವಲ್ಪ ಸಮಯದ ನಂತರ ಬಸ್ ಕಡೆಗೆ ಬಂದು 8 ಗಂಟೆಗೆ ಊಟ ಮುಗಿಸ್ಕೊಂಡು 9 ಗಂಟೆಗೆ ತವರೂರಿನ ಕಡೆ ಮುಖ ಮಾಡಿದೆವು. ಈಗಂತೂ ಎಲ್ಲೆ ಇಲ್ಲದ ಮಲ್ಲರಂತೆ ರಂಜಿಸಿದೆವು. ಅಂದು ರಾತ್ರಿಯ ಪಯಣದಲ್ಲಿ ಗಮನ ಸೆಳೆದ ವ್ಯಕ್ತಿ ಸಿದ್ದು ಪುಠಾಣಿ, ನಾನು, ಅಜೀತ್, ಮಹಾಕೂಟೇಶ. ಸಿದ್ದುವಿನ ಕೊಳಲ ನಾದ ಕಿವಿಗೆ ಇಂಪು ಕೊಡುವ ಬದಲು ಪಾಪ್ ಗಾಯನದ ಕದ ತಟ್ಟಿತ್ತು. ಮುಂಗಾರು ಮಳೆ ದೃಶ್ಯಾವಳಿಗಳ ನಟನೆ (ರಾಜು ಕುಂಬಾರ) ಭಾರಿ ಇತ್ತು. ಸುಮಾರು 12 ಗಂಟೆ ಆಗುರಬಹುದು ಬಹಳಷ್ಟು ಜನ ನಿದ್ದೆ ಮಾಡಿದ ಕಾರಣ "ಪ್ರೇಕ್ಷಕರಿಲ್ಲದೆ ಪ್ರದರ್ಶನ ಹೇಗೆ ಮಾಡುವುದು ...?" ಎಂದು ನಾವು ನಿದ್ರಾ ದೇವಿಯ ಮಡಿಲು ಸೇರಿದೆವು. ಬೆಳಿಗ್ಗೆ 4.30ಕ್ಕೆ ನಮ್ಮ ಸಾಮ್ರಾಜ್ಯ "DIET ಮಣ್ಣೂರ" ತಲುಪಿದೆವು. 6 ಗಂಟೆಯವರೆಗೆ ಅಲ್ಲೇ ಇದ್ದು ನಂತರ ತಮ್ಮ ತಮ್ಮ ಮನೆಗ ಕಡೆಗೆ ಸಾಗಿದೆವು.

Saturday 28 March 2020

ಐದು ಕಲ್ಲು

                    


ಸಂಖ್ಯೆ ಐದು ಹಿಂದೂ ಸಂಸ್ಕೃತಿಯಲ್ಲಿ ಒಂದು ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ. ಏನಾದರೂ ಪೂಜಿಸುವಾಗ ಐದು ಬೊಟ್ಟು ಕುಂಕುಮ , ಭಂಡಾರ ಇಡುವುದು  ಸಾಮಾನ್ಯ . ಭಾರತದಲ್ಲಿ , ಅದೂ ಗ್ರಾಮೀಣ ಪ್ರದೇಶದಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಐದು ಸಣ್ಣ ಕಲ್ಲುಗಳನ್ನು ಪೂಜಿಸುವ  ವಾಡಿಕೆಯಿದೆ. ಈ ಐದು ಹಿಂದೂ ಸಂಸ್ಕೃತಿಯಲ್ಲಿ ಯಾಕಿಷ್ಟು ವೈಶಿಷ್ಟ್ಯ ಪಡೆದಿದೆ ಎಂದರೆ;

ಆಕಾಶ, ವಾಯು, ಅಗ್ನಿ, ನೀರು, ಭೂಮಿ ಎಂಬ ಪಂಚಭೂತ;
ಸತ್ಯ, ಧರ್ಮ, ನ್ಯಾಯ, ಪ್ರೀತಿ, ಸಂಯಮ ಎಂಬ ಪಂಚತತ್ವಗಳು; 
ಚಿನ್ನ, ಬೆಳ್ಳಿ, ಟ್ರ, ಕಬ್ಬಿನ, ಹಿತ್ತಾಳೆ ಎಂಬ ಪಂಚಲೋಹ;
ಕಣ್ಣು, ಕಿವಿ, ಮೂಗು, ಬಾಯಿ, ಚರ್ಮ ಎಂಬ ಪಂಚ ಇಂದ್ರಿಯಗಳು  ಇತ್ಯಾದಿ ಇತ್ಯಾದಿ ಪ್ರತಿನಿಧಿಸುತ್ತವೆ.

ಮಹಾಭಾರತದಲ್ಲಿ ಭಗವಾನ್ ಶ್ರೀಕೃಷ್ಣ ಐದು ಹರಳುಗಳನ್ನು ಎರಡು ಬಾರಿ ಉಪಯೋಗಿಸಿದ್ದಾನೆ. 

ಒಂದು;
ಕೌರವ ಸೇನೆ ದ್ರುಪದ ರಾಜನ ಜೊತೆ ಸೋತ ನಂತರ ಪಾಂಡು ಪುತ್ರರು ದ್ರುಪದ ರಾಜನ ಮೇಲೆ ದಾಳಿ ಮಾಡಿ, ಅರ್ಜುನನು ದ್ರುಪದ ರಾಜನು  ರಚಿಸಿದ ಚಕ್ರವ್ಯೂಹ ಭೇಧಿಸಿ, ದ್ರುಪದನ ಎದುರು ಬಿಲ್ಲು ಹೂಡಿದಾಗ ತನ್ನ ವಿಶಿಷ್ಟ ಶಕ್ತಿಯಿಂದ ದ್ರುಪದ ರಾಜನು ತನ್ನನ್ನು ತಾನು ಐದು ಜನ ದ್ರುಪದರನ್ನಾಗಿಸಿ   ವಿಭಜಿಸಿಕೊಂಡು ಅರ್ಜುನನಲ್ಲಿ ದ್ವಂದ್ವ ಉಂಟು ಮಾಡುತ್ತಾನೆ. ಆಗ ಅಚಾನಕ್ ಆಗಿ ಅರ್ಜುನನ ಬಳಿ ಇದ್ದ, ಕೆಲ ದಿನಗಳ ಹಿಂದೆ ಶ್ರೀಕೃಷ ಸುಭದ್ರೆಯ ಮೂಲಕ ಅರ್ಜುನನಿಗೆ ತಲುಪಿಸಿದ ಐದು ಹರಳುಗಳು ಭೂಮಿಯ ಮೇಲೆ ಬೀಳುತ್ತವೆ. ಆ ಹರಲುಗಳ ಮೇಲೆ ಎರೆಡೆರಡು ಬೇರೆ ಬೇರೆ ದಿಕ್ಕಿನತ್ತ ಮುಖ ಮಾಡಿರುವ ಚುಕ್ಕಿಗಳಿರುತ್ತವೆ. ಈ ಸಂಕೇತಗಳ ಆಧಾರದ ಮೇಲೆ ಅರ್ಜುನನು ನಿಜವಾದ ದ್ರುಪದ ರಾಜ ಯಾರೆಂದು ಪತ್ತೆಮಾಡಿ ಬಂಧಿಸುತ್ತಾನೆ.

ಎರಡು, ಪಾಂಡು ಪುತ್ರರು ದ್ರೌಪದಿಯನ್ನೊಳಗೊಂಡು ಇಂದ್ರಪ್ರಸ್ಥದಲ್ಲಿ ಹೊಸ ನಗರ ನಿರ್ಮಿಸಿ ವಾಸವಿರುವಾಗ ಶ್ರೀ ಕೃಷ್ಣನು ದ್ರೌಪದಿಗೆ ಅದೇ ಐದು ಹರಳುಗಳನ್ನು ನೀಡಿ ಧರ್ಮದ ಪಥದಲ್ಲಿ, ಸತ್ಯವನ್ನು ಬಿಡದೇ, ನ್ಯಾಯಯುತವಾಗಿ, ಪ್ರೀತಿಯಿಂದ, ಎಲ್ಲವನ್ನೂ ಸಂಯಮದಿಂದ ಕಾಪಾಡಿಕೊಂಡು ಪಾಂಡು ಪುತ್ರರ ಜೊತೆಗೆ ಸಂಸಾರ ನಡೆಸುವ ಕುರಿತು ಮಾರ್ಗದರ್ಶನ ಮಾಡುತ್ತಾನೆ.

ಕುರುಕ್ಷೇತ್ರ ಯುದ್ಧದಲ್ಲಿ ಅದೇ ಐದು ಹರಳುಗಳನ್ನು ಅರ್ಜುನ ಮತ್ತು ಸುಭದ್ರೆಯ ಮಗ ಅಭಿಮನ್ಯುವಿನ ತೋಳಿಗೆ ದ್ರೌಪದಿ ಕಟ್ಟಿ, 'ಈ ಐದು ಹರಳುಗಳು ನಿನ್ನ ಕೈಯಲ್ಲಿರುವವರೆಗೆ ನಿನಗೆ ಪಾಂಡುಪುತ್ರರ ರಕ್ಷಣೆ ಇರುತ್ತದೆ.' ಎಂದು ಹೇಳಿರುತ್ತಾಳೆ. ಕುರುಕ್ಷೇತ್ರ ಯುದ್ಧದ ಒಂದು ದಿನ ಅಭಿಮನ್ಯು ಯುದ್ಧಕ್ಕೆ ಹೊರಡುತ್ತಿರುವಾಗ ಆ ಹರಳಿನ ಕಟ್ಟು ಕಳಚಿ ಬೀಳುತ್ತದೆ. ಅದು ಕೃಷ್ಣನಿಗೆ ತಿಳಿಯುತ್ತದೆಯಾದರೂ ಏನೂ ಮಾಡದೇ ಪಾರ್ಥ ಸಾರಥಿಯಾಗಿ ಯುದ್ಧಕ್ಕೆ ಹೋಗುತ್ತಾರೆ. 

ಅಂದಿನ ಯುದ್ಧದಲ್ಲಿ, ಕೌರವ ಸೇನೆ ಹಿಂದಿನ ದಿನ ಅಭಿಮನ್ಯುವಿನ ದಾಳಿಯಿಂದ ತತ್ತರಿಸಿ ಹೋಗಿರುತ್ತದೆ. ಹಾಗಾಗಿ, ಅಭಿಮನ್ಯುನನ್ನು ವಧಿಸುವುದು ಕೌರವರ ಅಂದಿನ ಎಲ್ಲ ವ್ಯೂಹಗಳ ಏಕಮಾತ್ರ ಉದ್ದೇಶವಾಗಿರುತ್ತದೆ. ಶಕುನಿಯ ಕಪಟತನದಿಂದ ಅರ್ಜುನನನ್ನು ಅಭಿಮನ್ಯುವಿನಿಂದ ದೂರಾತಿ ದೂರ ಸರಿಸಿ, ಚಕ್ರವ್ಯೂಹ ರಚಿಸಿ ಕೌರವರು ಅಭಿಮನ್ಯುನನ್ನು ವಧಿಸುತ್ತಾರೆ. 

ಕೃಷ್ಣನಿಗೆ ಅಭಿಮನ್ಯುವಿನ ಸಾವು ನಿಶ್ಚಿತ ಎಂದು ತಿಳಿದಿದ್ದರೂ, ಅಭಿಮನ್ಯು ತನ್ನ ಸ್ವಂತ ತಂಗಿಯ ಮಗನೇ ಆಗಿದ್ದರೂ ಅವನನ್ನು ಉಳಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಕೃಷ್ಣ ಮಾಡುವುದಿಲ್ಲ. ಇಡೀ ಸೃಷ್ಟಿಯೇ ನಾರಾಯಣನ ಕೈಯಲ್ಲಿರುವಾಗ ಅಭಿಮನ್ಯುವನ್ನು ಉಳಿಸಿಕೊಳ್ಳುವುದು ಕೃಷ್ಣನಿಗೆ ದೊಡ್ಡ ಕೆಲಸವೇನಾಗಿರಲಿಲ್ಲ. ಆದರೆ, ಕೃಷ್ಣನ ಯೋಜನೆ ಸೃಷ್ಠಿಯ ಜನನ-ಮರಣಗಳ ಚಕ್ರದಿಂದ ಹೊರತು ಪಡಿಸಿ ವಿಶಿಷ್ಠ ಶಕ್ತಿಗಳ ಮೂಲಕ ಜನ್ಮ ಪಡೆದವರ ಮೂಲಕ ಧರ್ಮ ಸ್ಥಾಪನೆ ಮಾಡುವುದಿತ್ತು. 

ಇದೇ ಕಾರಣಕ್ಕಾಗಿ ಕೃಷ್ಣನು, ದುರ್ವಾಸ ಮುನಿಯು ನೀಡಿದ ಮಂತ್ರ ವರದ ಮೂಲಕ ಕುಂತಿದೇವಿ ಪಾಂಡು ರಾಜನೊಂದಿಗೆ ಸಂಪರ್ಕಕ್ಕೆ ಬರದೇ ಮಂತ್ರ ಪಠಣೆಯ ಮೂಲಕ ಯಮನಿಂದ ಯುಧಿಷ್ಠಿರನನ್ನು, ವಾಯುವಿನಿಂದ ಭೀಮನನ್ನು, ಇಂದ್ರನಿಂದ ಅರ್ಜುನನನ್ನು, ಅಶ್ವಿನಿ ದೇವತೆಗಳಿಂದ ನಕುಲ-ಸಹದೇವ (ಮಾದ್ರಿಗೆ) ರನ್ನು ಪಡೆದಿರುತ್ತಾಳೆ. ಹಾಗಾಗಿ, ಈ ಪಾಂಡು ಪುತ್ರರನ್ನು ಕೃಷ್ಣ ಧರ್ಮ ಸ್ಥಾಪನೆಗೆ ಆಯ್ದುಕೊಳ್ಳುತ್ತಾನೆ.

ದ್ರೌಪದಿ; 
ದ್ರುಪದ ರಾಜ ಮತ್ತು ದ್ರೋಣರು ಗುರು ಭಾರದ್ವಾಜರ ಆಶ್ರಮದಲ್ಲಿ ಜ್ಞಾನಾರ್ಜನೆ ಮಾಡುವಾಗ ದ್ರೋಣ ಬಡವನಿರುತ್ತನೆ. ಮತ್ತು ದ್ರುಪದನು ರಾಜ ಇರುತ್ತಾನೆ. ದ್ರುಪದನು ದ್ರೋಣರಿಗೆ ಅವಮಾನ ಮಾಡಿದ್ದಕ್ಕೆ ದ್ರೋಣ ಕೊಲ್ಲಲು ಸಮರ್ಥ ಗಂಡು ಸಂತಾನ ಬೇಕು ಎಂದು ಸಾವಿರಾರು ಮುನಿಗಳ ಹತ್ತಿರ ಬೇಡಿಕೊಂಡರು ಅದು ನೆರವೇರುವುದಿಲ್ಲ. ಆಗ 3 ಮುನಿಗಳು ಯಜ್ಞ ನಡೆಸಿಕೊಡಲು ಒಪ್ಪಿಕೊಂಡು ಒಂದು ಕರರು ಹಾಕುತ್ತಾರೆ. ಈ ಯಜ್ಞದ ನಂತರ ನಿನಗೆ ಗಂಡು ಸಂತಾನ ಸಿಗುತ್ತದೆ. ಜೊತೆಗೆ ಒಂದು ಹೆಣ್ಣು ಸಂತನವು ಇದೆ ಅದನ್ನು ನೀನು ಪಡೆಯಲೇಬೇಕು. ಯಜ್ಞ ಫಲವಾಗಿ ಯಜ್ಞಕುಂಡದಿಂದ ಗಂಡು ಮಗು ದೃಷ್ಠ್ಯದ್ಯುಮ್ನ ಬರುತ್ತಾನೆ. ದ್ರುಪದ ರಾಜ ಗಂಡು ಸಂತಾನ ಒಂದೇ ಸಾಕೆಂದು ಯಜ್ಞ ತ್ಯಜಿಸಿ ಹೋಗುತ್ತಾನೆ. ಆಗ ಮುನಿಗಳು ಎಷ್ಟು ಬೇಡಿಕೊಂಡರು ದ್ರುಪದ ರಾಜ ಅವರನ್ನು ನಿಂದಿಸಿ ಹೋಗಲು ಸಿದ್ಧನಾಗುತ್ತಾನೆ ಆಗ ಯಜ್ಞದಲ್ಲಿ ಬೆಂಕಿ ಜ್ವಾಲೆ ಹೆಚ್ಚಾಗಿ ಆಕಾಶಕ್ಕೆ ಮುಟ್ಟುತ್ತದೆ. ಈ ಘೋರತೆಯನ್ನು ಕಂಡು ದ್ರುಪದ ರಾಜ ಒಂದು ವಿಚಿತ್ರ ಕೋರಿಕೆಯ ಮೂಲಕ ಯಜ್ಞನಿರತನಗುತ್ತಾನೆ. ಏನೆಂದರೆ ಬರುವ ಸ್ತ್ರೀ ಸಂತಾನ ಹೇಗಿರಬೇಕು ಎಂದರೆ ಅವಳಿಗೆ ಯಾರಿಗೂ ಬರದಂತ ಕಷ್ಟಗಳು ಬರಬೇಕು, ಎಲ್ಲರಿಂದಲೂ ಹಿಯಾಳಿಕೆ, ತಾತ್ಸಾರ, ಆಗಬೇಕು. ಇಷ್ಟಾದರೂ ಅವಳು ಯಾರನ್ನು ದ್ವೇಷಿಸಬಾರದು ಅಂತ ಸ್ತ್ರೀ ಸಂತಾನ ಕೊಡು ಎಂದು ಕೇಳಿ ಯಜ್ಞದಲ್ಲಿ ಪಾಲ್ಗೊಳ್ಳುತ್ತಾನ. ಇದರ ಫಲವೇ ಯಜ್ಞಾಸೇನಿ. ಯಜ್ಞಾಸೇನಿ  ಎಂಬುದು ದ್ರೌಪದಿಯ ಇನ್ನೊಂದು ಹೆಸರು.

ಪಾಂಡುಪುತ್ರರು ಮತ್ತು ದ್ರೌಪದಿಯು ಜನನ-ಮರಣದ ಚಕ್ರದಲ್ಲಿ ಬಂದವರಲ್ಲವಾದ್ದರಿಂದ ಕೃಷ್ಣ ಭಾಗವನಾನು ಇವರ ಮೂಲಕ ಧರ್ಮ ಸ್ಥಾಪಿಸುವನು.


ಇದರಲ್ಲೇನಾದರೂ ತಪ್ಪುಗಳಿದ್ದರೆ, ತಿದ್ದಿಕೊಳ್ಳುವ ಮನಸ್ಸಿದೆ. ತಪ್ಪಿದ್ದರೆ ತಿಳಿಸಿ.

Saturday 14 March 2020

ವಿಭಿನ್ನ ವಾಸ್ತವ


          ಊರಿಗೆ ಹೋಗುವುದಿತ್ತು, ಹಾಗಾಗಿ, ಬೆಳಿಗ್ಗೆ ಬೇಗ ಎಂದರೂ 6.30ಕ್ಕೆ ಎದ್ದು ಸ್ನಾನ ಮಾಡಿ, ಹೊಸಯಲ್ಲಾಪುರ್ BRTS ಬಸ್ ಸ್ಟಾಪ್ ಒಳಗೆ 201B ಸಲುವಾಗಿ 15 ನಿಮಿಷಗಳ ಕಾಲಹರಣವಾಗಿ ಹೊಸ ಬಸ್ ಸ್ಟ್ಯಾಂಡ್ ಗೆ ಬಂದು ಬೆಳಗಾವಿಗೆ ಹೋಗುವ ತಡೆರಹಿತ ಬಸ್ಸಲ್ಲಿ ಕುಳಿತೆ. ಕಂಡಕ್ಟರ್ ಬಂದು ಟಿಕೆಟ್ ಕೊಟ್ಟ, 'ನೂರು ರೂಪಾಯಿಗೆ ಟಿಕೆಟ್ ಜೊತೆ 10 ಹಿಂತಿರುಗಿಸುವರು' ಎಂದೇ ನಾನು ನಂಬಿದ್ದೆ. ಆದರೆ, ಬಸ್ ಪ್ರಯಾಣ ದರಗಳಲ್ಲಿ ಏರಿಕೆಯಾಗಿ 100ಕೆ 100 ಲೆಕ್ಕ ಪಕ್ಕಾ ಮಾಡಿದ್ದರು. 

           ಬಸ್ ಹೊರಗೆ ಬಂದು ರೆಸಿಡೆನ್ಸಿ ಲಿಕ್ಕರ್ ಎದುರಿಗೆ, ಎಲ್ಲರ ಟಿಕೆಟ್ ಪಡೆದ ಬಗ್ಗೆ ದೃಢಪಡಿಸಿಕೊಳ್ಳಲು ನಿಂತಿತ್ತು. ಒಂದಿಬ್ಬರು ಹೋಗುತ್ತಿರುವ ಬಸ್ಸಿಗೆ ಓಡಿ ಬಂದು, ಹತ್ತಿ, ಸಾಹಸ ಮೆರೆದವರಿಗೆ ಕಂಡಕ್ಟರ್ ಕಾಸಿಗೆ ಪ್ರತಿಯಾಗಿ ಟಿಕೆಟ್ ಕೊಡಲು ಬಂದ. ನನ್ನ ದೃಷ್ಠಿ ಕಿಡಕಿಯಿಂದ ಹೊರ ಹೋಯಿತು. ರೆಸಿಡೆನ್ಸಿ ಲಿಕ್ಕರ್, ಬಾರ್ ರೆಸಿಡೆನ್ಸಿ ಏನೋ ಮುಚ್ಚಿತ್ತು ಆದರೆ ಅದರ ಮುಂದೆ ಕುಳಿತ ಮುಪ್ಪಾವಸ್ಥೆಗೆ ಕಾಲಿಡುತ್ತಿದ್ದ ಇಬ್ಬರು ಕುಳಿತಿದ್ದರು. ಕೈ ಯಲ್ಲಿ ದೊಡ್ಡ ಬಾಟಲಿ, "ಯಾವ ಬ್ರಾಂಡ್ ಇರಬಹುದು " ಎಂದು ದಿಟ್ಟಿಸಿ ನೋಡಿದೆ "ಒರಿಜಿನಲ್ ಚಾಯ್ಸ್... ಬೆಳಿಗ್ಗೆ ಬೆಳಿಗ್ಗೆ...!!" ನೋಡೋಕೆ ಅಜ್ಜ ಹಂಗೇನೂ ಚಹರೆ ಇರದಿದ್ದರೂ ಬೆಳಿಗ್ಗೆ ಬೆಳಿಗ್ಗೆ ಕೈಯಲ್ಲಿ ಒರಿಜಿನಲ್ ಚಾಯ್ಸ್ ನೋಡಿ "ವಯಸ್ಸಾದ್ರೂ ಅಜ್ಜ ಬ್ರಾಂಡ್ ಎನ್ ಬಿಟ್ಟಿಲ್ಲ.." ಎಂದು ಯೋಚನೆ ಬರುವಷ್ಟರಲ್ಲಿ ಕೋರೋನ  ನೆನಪಾಗಿ, "ನೆರೆ-ಹೊರೆಯ ಕಿಡಿಗೇಡಿ ಹುಡುಗರರಾದ್ರೂ  ಔಷಧ ಅಂಗಡಿಗಳೆಲ್ಲ ಬಂದ್ ಆಗ್ಯಾವ್, ಎಲ್ಯು ಸ್ಟಾಕ್ ಇಲ್ಲ ಅಂತ ಏನೇನೋ ಹೇಳಿ ಅಜ್ಜನ ಬ್ರೈನ್ ವಾಷ್ ಮಾಡಿರಬಹುದು, ಅದಕ್ಕೆ ಅಜ್ಜ ಬೆಳಿಗ್ಗೆ ಬೆಳಿಗ್ಗೆ ಸ್ಯಾನಿಟೈಜೆರ್ ತಗೊಂಡ್ ಹೋಗ್ತಿರಬಹುದು " ಎನಿಸಿತು. 

          ಇದೆಲ್ಲ ವಿಚಾರ ಮಾಡುತ್ತಲೇ ಒಂದೆರಡು ಫೋಟೋ ಕ್ಲಿಕ್ಕಿಸಿಕೊಂಡೆ ಅದು ಅಜ್ಜನ ಗಮನಕ್ಕೆ ಬಂದು ನಗೆ ಬೀರಿದ, ನಾನೂ ಪ್ರತಿಕ್ರಿಯಿಸಿದೆ. ಅಷ್ಟೊತ್ತಿಗಾಗಲೇ ಬಸ್ ಡ್ರೈವರ್ ಸೆಲ್ಫ್ ಸ್ಟಾರ್ಟ್ ಒತ್ತಿ, ಎಕ್ಸಿಲೇಟರ್ ಕೊಡುವುದರಲ್ಲಿದ್ದ; ಅಜ್ಜನ ಮೊಮ್ಮಗ ಇರಬಹುದು, ಬಂದು " ಏಯ್ ಯಜ್ಜ ನೀರ್ ಕೊಡೋ ಕುಡ್ಯಾಕ್" ಎಂದ. ಬಸ್ ಮುಂದೆ ಬಂದಿದ್ದರೂ ಎದ್ದು ನಿಂತು ತಿರುಗಿ ನೋಡಿ ಖಚಿತಪಡಿಸಿಕೊಂಡೆ. ಆ ಬಾಟಲಿ ಒಳಗಿದ್ದದ್ದು "ನೀರು" ಎಂದು. 

               "ಎಷ್ಟೋ ಸಲ ಈ ಜಗತ್ತು ನಮಗೆ ಅದು ಇರುವ ವಾಸ್ತವಕ್ಕಿಂತ ವಿಭಿನ್ನವಾಗಿ ಕಾಣುತ್ತದೆ. ಆ ಆಧಾರದ ಮೇಲೆ ನಾವು ಅಲ್ಲಿಯ ಸುತ್ತಣವನ್ನೂ, ಪ್ರಚಲಿತ ವಿದ್ಯಮಾನಗಳನ್ನು ಪರಿಗಣಿಸಿ ನಮ್ಮದೇ ಆದ ಒಂದು ನಿರ್ಧಾರಕ್ಕೆ ಬಂದು ಬಿಡುತ್ತೇವೆ. ಆದರೆ ಅದು ನಮ್ಮ ಗ್ರಹಿಕೆಗಿಂತ ಬೇರೆಯೇ ಆಗಿರುತ್ತದೆ."