Friday, 11 December 2015

ಮತ್ತೆ ಬರುವೆ



ಹೋಗುತಿಹದು ಕೊನೆಯ ಪಯಣ
ನೆರೆದ ನೂರು ಜನರ ಮಧ್ಯೆ
ಪಡೆದುಕೊಂಡು ಅಂತಿಮ ನಮನ
ನಾಲ್ಕು ಜನರ ಹೆಗಲ ಮೇಲೆ

ಅಳುತ ಕಳುಹಿದಿರೆಂದರೆ ನೀವು
ನನಗದೆಲ್ಲಿಯ ಶಾಂತಿ ? ನೆಮ್ಮದಿ ?
ಹರುಷದಿಂದ ಕಳುಹಿರಿಂದೆನ್ನನು
ಮರುಜನ್ಮವಿದ್ದರೆ ಮತ್ತೆ ಬರುವೆ.

ಉದಯಾಸ್ತಮಾನದ ನಡುವೆ
ಸುದೈವದ ಕೈ ಕೆಳಗೆ- ಅಂತೆ
ಬಣ್ಣ ಹಚ್ಚಿ, ಪಾತ್ರ ನಿರ್ವಹಿಸಿ
ನಿಶ್ಚಿಂತನಾಗಿ ಹೊರಟಿರುವೆ ನಸುನಗುತ.

ತಂದೆ ಎಂದರೆ ನನಗಾದೀತು
ತೊಂದರೆ; ಯಾಕೆಂದರೆ...
ನಾನಾಗಲಿಲ್ಲ ಆದರ್ಶ ತಂದೆ.
ಮತ್ತೆ ಬರುವೆ ಮಗನ ಮಗನಾಗಿ.

ಒಲವಿನೊಡಲ ಮಡದಿಯೆ
ಕ್ಷಮಿಸು ನನ್ನ; ದಡ ಸೇರಿಸದೇ
ಭವ ಸಾಗರದ ನಡು ನೀರಿನಲ್ಲಿ
ದೂಡಿ ನಿನ್ನ ಹೊರಟು ಬಿಟ್ಟೆನು.
                  - ಸತೀಶ ಉ ನಡಗಡ್ಡಿ

Thursday, 10 December 2015

ಒಂದು ಸಂಜೆಯಲಿ



ನಸುಗೆಂಪು ಹದಿಯಾಗಸ
ಎಷ್ಟು ನೋಡಿದರೂ ಆಗದಾಯಾಸ.
ನವಿರಾಗಿ ಬೀಸುವ ತಂಗಾಳಿ,
ಮಿಗ-ಕಗಗಳ ನಾದ ಕೇಳಿ
ನಿಸರ್ಗ ದೇವಿಗೊಂದು ನಮನ
ಸಲ್ಲಿಸಿದೆ ಹೃತ್ಪೂರ್ವವಾಗಿ ಮನ.

ಊರ ಕೆರೆಯಿಂದ ಮನೆಯೆಡೆಗೆ
ಹಸು,ಎಮ್ಮೆ,ಕುರಿ ಕಾಯ್ವ ಬೀ(ವೀ)ರನ ನಡಿಗೆ
ಅದೇಕೊ ರುಮಾಲೆಳೆವ ನಾಯಿ
ಉಧ್ಗರಿಸಿ ಬಿಟ್ಟ. ’ತಗೊಂಡ್ ಸಾಯಿ’
ಖೇತಗಳಿಂದ ಮರಳು
ರೈತನ ಹೆಜ್ಜೆ ಹೆಜ್ಜೆಗೆ ಮಡದಿಯ ಜೀವ.

ಹುಟ್ಟಿದ ಹನ್ನೆರಡು ಗಂಟೆಗೆ
ಸಾಯಲನಿಯಾದ ಸರಿಹೊತ್ತಿಗೆ.
ಯಾರನೂ ಕೇಳದೆ ಹೇಳದೆ;
ನೋಡು ಕಾಲ ಚಕ್ರ ತಿರುಗುತಿದೆ.
ಅದರೊಂದಿಗೆ ಸಾಗಬೇಕೆಲ್ಲ
ನಿನಗಾಗಿ ಅದು ಕಾಯುವುದಿಲ್ಲ.ತಿಳಿದಿಕೊ.
                   - ಸತೀಶ ಉ ನಡಗಡ್ಡಿ

ನನ್ನ ಜನರು




ನಿಮಗೇನು ಗೊತ್ತು
ನನ್ನ ಜನರ ಬಗ್ಗೆ..?
ಅವರೇನು ಅಸಾಮಾನ್ಯರಲ್ಲ.
ಶೂರರು, ವೀರರು,
ಕಡು ವೈರಿಗಳು;
ಅವರವರೊಳಗೆ ಆಗದವರು

ದೊಡ್ಡವರು, ಚಿಕ್ಕವರು
ಯಾರೊಬ್ಬರೂ ಎಲ್ಲಿಯೂ
ಯಾರೊಂದಿಗೂ ಹೊಂದಿಕೊಳ್ಳದ
ಹುಂಬರು ನನ್ನ ಜನರು.
ಆಡಂಬರದ್ದು ಅವರ ಮನ:
ಅವರಿಗವರೆ ಸರಿಸಮಾನರು....

ತಾಳ್ಮೆ ಇಲ್ಲದಂತಹ
ತರಾತುರಿಯವರು
ಇಲ್ಲವೇ, ಸೋಂಬೇರಿಗಳು.
ಮಾತಿನೊಳಗೆ ....
ಅವರೆ ಮಲ್ಲರು,
ಎಲ್ಲವನೂ ಬಲ್ಲ ಮೈಗಳ್ಳರು.

ಸಾರ್ವಜನಿಕ ಸ್ಥಳ- ಅವರ ಕಕ್ಕಸದ ಮನೆ.
ಮೂತ್ರ ವಿಸರ್ಜನೆ- ಚರಂಡಿ ಕಾಂಪೌಂಡು.
ಕಸದ ತೊಟ್ಟಿಯೋ ? ಅವರೆಸೆದ ಸ್ಥಳವೆಂದುಕೊ.

ಮಕ್ಕಳು,ಪಾಲಕರು,ವೃದ್ಧರು ಅಲ್ಲ. ಎಲ್ಲರೂ
ಪದೇ ಪದೇ ಹೇಳಬೇಕೇನು ?
ಸಿಡುಕರು, ಕೆಡುಕರು ಅಷ್ಟೆ ಅಲ್ಲ; ಕುಡುಕರು.
ಎಲ್ಲವೂ ಅವರಲುಂಟು ಗೊತ್ತೆ ?

- ಸತೀಶ ಉ ನಡಗಡ್ಡಿ

ಜಗದ ಸೂಜಿಗ



ಮರ ಚಿಗುರಿದೆ ಮರ
ನಮ್ಮನೆ ಎದುರಿನ ಮಾಮರ.
ಹಸುರ್ಗೆಂಪು ಚಿಗುರೆಲೆ
ಮಂಜಿನಿಬ್ಬನಿಯ ನೀರೆಲೆ,
ಓಣಿಯ ಹಕ್ಕಿ-ಪಿಕ್ಕಿಗಳಿಗೆಲ್ಲ
ಇದೆ ತವರು ಮನೆ; ಯಾರೂ ಪ್ರಶ್ನಿಸಿಲ್ಲ.

ಮೂಡಣದಿ ರವಿ ಮೂಡುತಲಿ
ನಸುಕಿನ ಚಳಿಯಲಿ ನಾದ ಚಿಲಿಪಿಲಿ,
ಮಲಗಿದ ಸೋಂಬೇರಿಯ ಕಿವಿಯಲಿ
ನಿದ್ದೆ ಕದಡಿದವನಾದ ವಿಲಿವಿಲಿ !
ಅದೆಷ್ಟೊಂದು ಭಿನ್ನ ಈ ಸೃಷ್ಠಿಯಲಿ..?

ಅಭಿವೃದ್ಧಿಯತ್ತ ನುಗ್ಗಿದ ಜಗ
ಸಂಶೋಧನೆಗಳ ಸಮರ ಸೂಜಿಗ
ಜಗದಗಲ ಮುಗಿಲಗಲಕ್ಕೂ ಈಗ
ಹೊಸತು ಹೊಸತೆಂಬುದರ ಸೋಗ
ಅಪ್ಪನ ಮೇಲಿನವ ಈ ಮಗ
ಮುರಿಯುತಿಹವು ಅವೆಷ್ಟೊ ಬಾಳನೊಗ.
                                   - ಸತೀಶ ಉ ನಡಗಡ್ಡಿ

Tuesday, 8 December 2015

ಸೃಷ್ಠಿ ಸಮತೋಲನ

          ಈ ಜಗತ್ ಸೃಷ್ಠಿಯಲಿ ಒಂದು ಬೆಳೆಯಬೇಕೆಂದರೆ ಒಂದು ಬಲಿಯಾಗಲೇಬೇಕು. ಅದೇ ಈ ಸೃಷ್ಠಿಯಲಿ ಅಡಗಿರುವ ನಿಗೂಢ. ಇಡೀ ಪ್ರಕೃತಿಯೇ ಒಂದು ತರದ ರಣಾಂಗಣ. ಹಕ್ಕಿ ತನ್ನ ಕರುಳ ಕುಡಿಯ ಹಸಿವಡಗಿಸಲು ಅಲ್ಲೆಲ್ಲೋ ಎಲೆಯಿಂದೆಲೆಗೆ ಜಿಗಿವ, ದುಂಬಿಯಿಂದ ದುಂಬಿಗೆ ಮಕರಂದ ಹೀರುವ ಪತಂಗವೊಂದನ್ನು ಬೇಟೆಯಾಡಿದೆ. ಹಕ್ಕಿಗೆ ಆಹಾರ ದೊರೆತ ಆನಂದ;  ಉಂಡ ಜೀವಕ್ಕೆ ಪರಮಾನಂದ. ತಾಯಿಯ ಕಾಳಜಿ, ಪ್ರೀತಿ, ಶ್ರಮ ಅಮೋಘ  ಅನನ್ಯ. ಆದರೆ ಪತಂಗ......... ? ಪತಂಗ, ಅದೂ ಸಹ ಅದರ ಕರುಳ ಕುಡಿಗಾಗಿಯೋ ಇಲ್ಲ ಮಕರಂದ ಹೀರುವ ನೆಪದಲ್ಲಿ ಪರೋಕ್ಷ ಸಂತಾನೋತ್ಪತ್ತಿಯ ವಾಹಕವಾಗಿಯೋ ಸೃಷ್ಠಿಯಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿತ್ತು. ಪಾಪ "ಅಮ್ಮ ಬರುತ್ತಾಳೆ ಹೊಟ್ಟೆಗೇನನ್ನೋ ತರುತ್ತಾಳೆ" ಎಂದು ದಾರಿ ಕಾಯುತ್ತ ಪತಂಗದ ಮಕ್ಕಳೂ ಸಹ ಕಾಯುತ್ತಿರಬಹುದಲ್ಲ .....? 

                   ಕೆದಕುತ್ತ ಹೋದಂತೆ ಕುಪ್ಪೆ ಕುಪ್ಪೆ ಸಿಗತ್ತೆ ಈ ನಿಗೂಢ ಸೃಷ್ಠಿಯಲ್ಲಿ. ಪ್ರಕೃತಿ ತನ್ನ ಸಮತೋಲನ ಕಾಯ್ದುಕೊಳ್ಳುವುದು ಅದೆಷ್ಟು ಚಂದ. ಅದಕ್ಕೆ ಇರಬೇಕು ಜಗತ್ತು ಇಷ್ಟು ಸುಂದರವಾಗಿರುವುದು. ಪತಂಗದ ಅಶಾ ಗೋಪುರದ  ಸಮಾಧಿಯ ಮೇಲೆ ಹಕ್ಕಿಯ ಆನಂದದ ಮಹಲು ಕಳೆಗಟ್ಟಿ ನಳನಳಿಸುತ್ತಿರುವುದು. ಹಕ್ಕಿಗಳ ಆನಂದವನ್ನಷ್ಟೇ ಕಂಡು ಹುಬ್ಬೆರಿಸಿದರೆ ಪತಂಗದ ತ್ಯಾಗಕ್ಕೆ ಶಬಾಷಗಿರಿ ಕೊಡೋದು ಬೇಡ್ವಾ,, ?
ಎಲ್ಲವೂ ನಿನ್ನಲ್ಲೇ  ಇದೆ ಮನುಜ. ಒಳಿತು ನಿನ್ನಲ್ಲೇ  ಕೆಡುಕು ನಿನ್ನಲ್ಲೇ .

    -ಸತೀಶ ಉ ನಡಗಡ್ಡಿ