Friday, 23 December 2016

ಜಲಪಾತ



ಕೈ-ಕೈ ಹಿಡಿದುಕೊಂಡ ಜೋಡಿ ಜೀವಗಳು
ತೇಲಿ, ತಣ್ಣೀರಿನಲ್ಲಿ ತಣಿಯುತಿವೆ ಬಿಸಿ ಭಾವಗಳು
"ಯಾವ ಗುರುತು ಪ್ರೀತಿಗೆ
ನೀ ನೀಡುವೆ ನನಗೆ ?"
ಎನ್ನುವ ನಲ್ಲೆಯ ಮಾತಿಗೆ
ಇಟ್ಟು ನುಡಿವನು ಮೂತಿಗೆ
ಬಿಸಿ ಮುತ್ತನೊಂದು ಆಸೆಗೆ
"ಇದೆ ನನ್ನ ಗುರುತು ನಿನಗೆ - ಪ್ರೀತಿಗೆ."

ಅಬ್ಬಾ, ಅದೇನು ಹಬ್ಬ ಈ ಜೋಡಿಗೆ !!
ಒಬ್ಬರನೊಬ್ಬರು ಬಿಟ್ಟಿರಲಾರದ ಬೆಸುಗೆ.
ಹುಟ್ಟಿದ್ದು, ಬೆಳೆದದ್ದು, ಕಾಡಿದ್ದು,
ಬೇಡಿದ್ದು, ಪಡೆದದ್ದು, ನೀಡಿದ್ದು.
"ಇಷ್ಟೇ ಏನು?" ಎಂದಿದ್ದು;
ಮತ್ತೇನೋ ಹೊಸದನ್ನು ಕೇಳಿದ್ದು.

ಉಟ್ಟ ಬಟ್ಟೆ ನೆನೆದು ಹಸಿಯಾದಾಗ
'ಬಾ ತೀಡು, ತಂಡವು' ಎಂದಾಹ್ವಾನಿಸುವ ಭಾವ ಯಾಗ
ಇಲ್ಲಿ ನಲ್ಲನ ಮಾತೇ ನಲ್ಲೆಗೆ ಶ್ರೇಷ್ಠ :
ಉಕ್ಕಿ ಬರುವ ಪ್ರೀತಿಯ ಹಿಂದಿನ ಅಸೆ,
"ನನಗಾಗಿ ಅಲ್ಲ, ನಿನಗಾಗಿ ಸ್ವಲ್ಪ ತೀರಿಸೆ"
ಎನ್ನುವ ನಲ್ಲಗೆ, ನಲ್ಲೆಯ ಮೌನವೇ ಶಿಷ್ಠ.

"ಬಾ ಬಯಸುತಿದೆ ಮನ ಇಂದು ನಿನ್ನ"
'ಎಂದು ಕರೆವನು ಅದೆಷ್ಟು ಚಂದ ನನ್ನ'
ನಾಚಿ ನೀರಾಗಿಹಾಳು ನೀರೆ
ಮರೆತು ನಿಂತಿಗಳು ಜಾರಿದ ಸೀರೆ
ಕಾಡಿಸಿ, ಪೀಡಿಸಿ, ಬೇಡಿಸಿ ಮೈ ದಣಿದಿರೆ
"ಬೇಡ ಹೋಗೆ.." ಎಂದು ಸಿಡುಕಿದಾಗ ಮೊರೆ
"ಕ್ಷಮಿಸಿ ಬಾ" ಎಂದು ಕರೆವಳು ಬೀರಿ ನೋಟ ವಾರೆ
                                   ✍ ಸತೀಶ ಉ ನಡಗಡ್ಡಿ.

Sunday, 11 December 2016

ಮತ್ತೆ ಸಿಕ್ಕಳು


ಭೂಮಿ ಗುಂಡಗಿದೆ
ಸಿಗದೇ ಮತ್ತೆಲ್ಲಿ ಹೋಗಿಯಾಳು,
ಇಂದಲ್ಲ ನಾಳೆ ನನ್ನ ಕಣ್ಣಿಗೆ
ಬೀಳಲಾರಳೇ.....?
ಎಂದುಕೊಂಡು ಕಾದಿದ್ದ ದಿನ
ಅಂತೂ ಇಂದು ಬಂದೆ ಬಿಟ್ಟಿತಲ್ಲೆ ಹುಡುಗಿ.

ಕಂಡು ಗಾಭರಿ-
ಗೊಂಡು ನಿಂತಿರುವೆ ನೋಡಿ ನನ್ನ;
ಹೊಸ ಲಂಗ, ರವಿಕೆ ತೊಟ್ಟು
ಬಂದ ಚಲುವೆ ಹೊಗಳ ಬೇಕಿದೆ ನಿನ್ನ:
ನಿಂತು ಕೇಳು  "ಒಲ್ಲೆ" ಎನುವುದ ಬಿಟ್ಟು
ಒಂದರಗಳಿಗೆ ಅಷ್ಟೇ ಚಿನ್ನ.

ಗಾಳೀಲಿ ತೇಲಾಡುವ ಮುಂಗುರುಳು
ಕತ್ತಿನ ಸುತ್ತ ಬಳಸಿ,
ಎದೆಯ ಮೇಲೆ ಚಾಚಿದ ಕೇಶ ರಾಶಿ;
ವಾಹ್ ಸುಂದರಿ...
ರಸದುಟಿ, ಕಾಮಾಕ್ಷಿ,
ಕೈಲಿ ಐದೈದೆ ಬಳೆಗಳ ನಾದ.

ಅದಾವ ಜನ್ಮದಲ್ಲಿ ಮಾಡಿದ
 ಪುಣ್ಯವೋ ಏನೋ
ಆ ನಿನ್ನ ಕೊರಳ ಮಣಿಯದು...?
ಎದೆಯ ಐಸಿರಿಯ ಮೇಲ್ಮೆರುಗೂ ಅದೇ.

ಇಳಿಬಿದ್ದ ಲಂಗವನ್ನೆತ್ತಿ ಹಿಡಿದು
ಹೊಕ್ಕಳ ಹೂ, ಬಳುಕೊ ಬಳ್ಳಿ
ನಡುವ ಮುಚ್ಚಿ ಅರ್ಧ,
ನೆರಿಗೆ ಹಾಕುತ್ತಿರುವೆ ಕೈ ಬೆರಳಿಗೆ.

ಉಡುಗಿಕೊಂಡು ಬರುತಿದೆ
ಮುಂದೆ ಮುಂದೆ ನೀ ಹೋದಂತೆ
ಹಿಂದೆ ಹಿಂದೆಯೇ ಲಂಗ;
ಚೇತೋಹಾರಿ ಈ ಹೃದಯದ
ತರ ತರದ ರಸ ಭಾವಗಳನ್ನೆಲ್ಲ
ಸುಮ್ಮನೆ ಕಾಲಡಿಯಲಿ !!
ತಾತ್ಸಾರವೇ ಇಲ್ಲ ಈ ಭಾವಗಳಿಗೆ,
ಗೆಜ್ಜೆಯಾ 'ಜಲ್ ಜಲ್' ಸದ್ದಿರಲು ಮಧುರವಾಗಿ
ಮತ್ತೇನೂ ಬೇಡ ಸಾಕೆಂದಿವೆ ಭಾವ.

ಅಂತೂ 'ತಟ್ಟನೆ' ನಿಂತು,
'ಗರಕ್' ನೆ ತಿರುಗಿ,
'ಕಿಸಕ್'ನೆ ನಕ್ಕೆ ಬಿಟ್ಟಳು ಹುಡುಗಿ.
ಎಲವೋ ಬ್ರಹ್ಮ ..... ನೋಡಿಲ್ಲಿ,
"ಹೆಣ್ಣಿಗಂದ(ಧ)ವನು ಕೊಟ್ಟೆ,
ಗಂಡಿಗಾ(ಆ)ಸೆಯನು ಇಟ್ಟೆ"
ನಿನಗೆ ಆಟ. ಆದರೆ,
ನನ(ಮ)ಗೆ ಸಂಕಟ.
                             ✍ ಸತೀಶ ಉ ನಡಗಡ್ಡಿ

Thursday, 8 December 2016

"!?"



ನಾನೇನು ? ನೀನೇನು ?
ಅವನೇನು ? ಇವನೇನು ?
ಎಲ್ಲರೂ ಇಲ್ಲಿ ಅವರೇ.

ನಾನೂ ತಪ್ಪೇ, ನೀನೂ ತಪ್ಪೇ,
ಅವನೂ ತಪ್ಪೇ, ಇವನೂ ತಪ್ಪೇ,
ಎಲ್ಲರೂ ಇಲ್ಲಿ ತಪ್ಪಿತಸ್ಥರೆ.

ಮಾಡುವುದು ತಪ್ಪು,
ಆಡುವುದು ತಪ್ಪು,
ಮಾಡಿದವರನ್ನು ಕಂಡು 
ಆಡುವುವರದೂ ತಪ್ಪು;
ಮಾಡಿದ್ದನ್ನು ಕಂಡು
ಆಡಿದವರು ಆಡಿದರೆಂದು 
ಮಾಡಿದವರಿಗೆ ಹೇಳಿದವರಂತೂ
ಮಹಾನ್ ಘಾತುಕರೆ ಸರಿ.

ಅವರು ಮಾಡಿದರು,
ಇವರು ಆಡಿದರು,
ಇವನ್ಯಾವನೋ ಅದನ್ನು
ಅವರಿಗೆ ಹೇಳಿದ !!!
ಯಾವನೋ ಹೇಳಿದವನು
ಇಬ್ಬರಿಗೂ ಹಿತೈಷಿ: ಆದರೆ-
ಅವರೂ, ಇವರೂ ಈಗ ..?
ಬದ್ಧ ವೈರಿಗಳು. !!!!!!

ಅವರ್ಯಾಕೆ ಮಾಡಿದರು ?
ಅದು ಅವರ ತೆವಲು.
ಇವರ್ಯಾಕೆ ಆಡಿಕೊಂಡರು ?
ಅದು ಇವರ ತೆವಲು.
ಇವನ್ಯಾವನೋ ಮಧ್ಯವರ್ತಿ ಯಾಕಾದ ?
ಅದೇ ಅವನ ಜೀವನ. !!!!
     ✍ sun

Saturday, 17 September 2016

ಮತ್ತೆ ಬರುವೆ ......ಸೂರ್ಯ(SUN)

ಹೋಗುತಿಹುದು ಕೊನೆಯ ಪಯಣ
ನೆರೆದ ನೂರು ಜನರ ಮಧ್ಯೆ,
ಪಡೆದುಕೊಂಡು ಅಂತಿಮ ನಮನ
ನಾಲ್ಕು ಜನರ ಹೆಗಲ ಮೇಲೆ.

ಅಳುತ ಕಳುಹಿದಿರೆಂದರೆ ನೀವು
ನನಗದೆಲ್ಲಿಯ ಶಾಂತಿ ...? ನೆಮ್ಮದಿ ..?
ಹರುಷದಿ ಕಳುಹಿರಿಂದೆನ್ನನು
ಮರುಜನ್ಮವಿದ್ದರೆ ಮತ್ತೆ ಬರುವೆ.

ಉದಯಾಸ್ತಮಾನದ ನಡುವೆ
ಸುದೈವದ ಕೈಕೆಳಗೆ - ಅಂತೆ
ಬಣ್ಣ ಹಚ್ಚಿ ಪಾತ್ರ ನಿರ್ವಹಿಸಿ
ನಿಶ್ಚಿಂತನಾಗಿ ಹೊರಟಿರುವ ನಸುನಗುತ:

ತಂದೆ ಎಂದರೆ ನನಗಾದೀತು
ತೊಂದರೆ ; ಯಾಕೆಂದರೆ .....?
ನಾನಾಗಲಿಲ್ಲ ಆದರ್ಶ ತಂದೆ,
ಮತ್ತೆ ಬರುವೆ ಮಗನ ಮಗನಾಗಿ.

ಒಲವಿನೊಡಲ ಮಡದಿಯೇ
ಕ್ಷಮಿಸೆನ್ನನು ; ದಡ ಸೇರಿಸದೇ
ಭವ ಸಾಗರದ ನಡು ನೀರಿನಲ್ಲಿ
ದೂಡಿ ನಿನ್ನ ಹೊರಟು ಬಿಟ್ಟೆನು.

           - ಸತೀಶ ಉ ನಡಗಡ್ಡಿ

Sunday, 14 August 2016

ನನ್ನ ರಾಜ್ಯ

ನನ್ನ ರಾಜ್ಯ



ಕನಸು ಕಾಣುತಿದೆ ಈ ಮನಸು
ಹೊಸ ಕನಸು ಕಾಣುತಿದೆ ಮನಸು,
ಪಾತಾಳದಿಂದ ನಭಕ್ಕೆ ನೆಗೆವ
ನನಸಾಗಲಾರದ ಕನಸು ಕಾಣುತಿದೆ ಮನಸು.

ವಿಶ್ರಾಂತಿಗೆಂದು ಮುಚ್ಚಿದರೆ ಕಣ್ಣು
ಅಶಾಂತಿಯ ಪ್ರವಾಹವನೆಬ್ಬಿಸಿದೆ-ಕನಸು
ತನ್ನ ಆರ್ಭಟದ ಗುಡುಗು-ಸಿಡಿಲಿಗೆ
ಹೌ ಹಾರಿ ಹಾಕಿರುವೆನು ನಿದ್ದೆಗೆ ಹಿಡಿ ಮಣ್ಣು.

ಮೂಡುತಿದೆ ಸ್ಮೃತಿ ಪಟಲದ ಮೇಲೆ
ಕನಸಿನ ನಾನಾ ದೃಶ್ಯಾವಳಿಗಳ ಲೀಲೆ,
`ಬ್ರಮೆ' ಎಂದು ಬಿಟ್ಟು ಕುಳಿತರೆ ಹಾಗೆ
ನನಸಾಗುವುದು ಮನಸಿನ ಕನಸು ಹೇಗೆ ?

ಕನಸದೋ ನೋಡು...
ಒಂದು ರಾಜ್ಯ*
ಅಲ್ಲಿ ಪ್ರಭುಗಳಿಲ್ಲ,
ಪ್ರಜೆಗಳೇ ಎಲ್ಲ
ಪ್ರಜೆಗಳದೇ ಎಲ್ಲ.

ಅವರಲ್ಲಿ,
`ಪ್ರಭು' ಎನಿಸಿಕೊಳ್ಳುವವನ
ಅವಶ್ಯಕತೆಯೆ ಇಲ್ಲ
ಅಂಥದ್ದು ಆ ನನ್ನ ರಾಜ್ಯ.

ಆ ಜನರಲ್ಲಿ,
"ಬೇರೆ" ಎಂಬುದರ ಅರ್ಥ ತಿಳಿಯದು
"ಒಂದೇ" ಎಂಬುದಕ್ಕೆ ಒಮ್ಮತ ಬಾರದಿರದು;
`ನನ್ನದು',`ನಿನ್ನದು'ಗಳ ಬದಲಾಗಿ
"ನಮ್ಮದು" ಎಂಬುದಿದೆ ಬಲವಾಗಿ:
ಸಂಕುಚಿತವನರಿಯದ ಹೃದಯ ವೈಶಾಲ್ಯರು.
ಹಾಗಾಗಿ ಅಲ್ಲಿ,
ಗಡಿ-ಭಾಷೆಗಳ ತಂಟೆ-ತಕರಾರುಗಳಿಲ್ಲ,
ಆಚಾರ-ವಿಚಾರ, ಪದ್ಧತಿ-ಸಂಪ್ರದಾಯಗಳ
ಆಡಂಬರದ ಅನಾಗರೀಕತೆಗಳಿಲ್ಲ.

ಅವರಿಗೆ "ಪ್ರತ್ಯೇಕತೆ"ಯ ಅರ್ಥ ತಿಳಿದಿಲ್ಲ
ಯಾರೊಬ್ಬರೂ "ಏಕತೆ"ಯನು ಮರೆತಿಲ್ಲ;
ಅದಕ್ಕೆ ಅವರು ಪಾಲು ಕೇಳಿಲ್ಲ- ಕೇಳೊಲ್ಲ.
ಅವರಲ್ಲಿ ಅತಿಯಾದ `ಆಸೆ-ಅಪೇಕ್ಷೆ'ಗಳಿಲ್ಲ
ಯಾಕೆಂಬುದನೂ ಬಲ್ಲರವರು
"ಅತಿ ಆಸೆ ಗತಿಗೆಡು, ಅತಿ ಅಪೇಕ್ಷೆ ಮತಿಗೇಡೆ"ಂದು.

`ವೈರ'ಕ್ಕೆ ವೈರಿಗಳವರು
`ಸ್ನೇಹ'ಕ್ಕೆ ಸಾಯುವರು
ಹಾಗಾಗಿ,
ದ್ವೇಷ-ವೈಶಮ್ಯದಿಂದ ಹೊತ್ತುರಿವ
ದೊಂಬಿ-ಗಲಬೆ, ಹೊಡಿದಾಟ-ಬಡಿದಾಟ,
ಮುಷ್ಕರ-ಪ್ರತಿಭಟನೆ, ಜೈಕಾರ-ದಿಕ್ಕಾರ
ಅವರ ಕಿವಿಯಾಲಿಯನು ತಟ್ಟಿಲ್ಲ.

ಆ ರಾಜ್ಯದಲ್ಲಿರುವ ನನ್ನ ಜನರಿಗೆ
ಕಳ್ಳತನ, ದರೋಡೆ, ಸುಪಾರಿ, ಕೊಲೆ-ಸುಲಿಗೆ,
ಹಿಂಸೆ ಪದಗಳೇನೆಂದೆ ತಿಳಿದಿಲ್ಲ.
ಹಾಗಾಗಿ,
ಅಳುವಿಲ್ಲ, ಅನಾತರಿಲ್ಲ,
ಅಶಕ್ತರಿಲ್ಲ, ನಿರಾಶ್ರಿತರಿಲ್ಲ,
ದಬ್ಬಾಳಿಕೆ ಇಲ್ಲ, ದೌರ್ಜನ್ಯಗಳಿಲ್ಲ,
ಅಹಿಂಸೆ, ನಿಂದೆ, ಮತ್ಸರಗಳು ಹೇಳ ಹೆಸರಿಗೂ ಇಲ್ಲ.

ಏನು ರಾಜ್ಯ ಅದು !!!!!!!!
ಹೇಗೆ ಬರಬೇಕು ಅಲ್ಲಿ ಭಯೋತ್ಪಾದಕರು
ಭಯದ ಒಂದು ತೃಣವೂ ನುಸುಳಲಾರದಷ್ಟು
ಬಿಗಿಯಾಗಿ ಮನಗಳು ಹೆಣೆದಿರಲು ...?
ಇಂತಹ ನಾಡಲ್ಲಿ
ಅಶಾಂತಿ, ನರಮೇಧ, ಗುಂಡಿನ ಸದ್ದು,
ಪೈಶಾಚಿಕ ಘಟನೆ, ಸ್ತ್ರೀ ದೌರ್ಜನ್ಯ,
ಅತ್ಯಾಚಾರ, ಬಲತ್ಕಾರ ಹೇಗೆ ನಡೆದಾವು ??

ಅಲ್ಲಿ ನನ್ನ ರಾಜ್ಯದಲ್ಲಿ,
ಗಂಡಿನಷ್ಟೆ ಹೆಣ್ಣಿಗೂ ಮಾನ್ಯತೆ ಇದೆ
ಪರಸ್ಪರ ತಲೆಬಾಗುವ ಸುಸಂಸ್ಕೃತಿ ಇದೆ:
ಅದಕ್ಕಾಗಿ....,
ಅತ್ಯಾಚಾರದ ಉದಾಹರಣೆಗಳಿಲ್ಲ,
ವ್ಯಭಿಚಾರದ ವ್ಯಸನಗಳೂ ಇಲ್ಲ
ಕಾಮುಖರ ಅಟ್ಟಹಾಸವೂ ಇಲ್ಲ.

ಹಾಗೂ,
ಅಲ್ಲಿ ಹೆಣ್ಣುಮಗಳಿಗೆ
ಶೋಕಿಯ ಸೋಗ
ತೋರಿಕೆಯ ಬಟ್ಟೆ ತ್ಯಾಗ
ಇಲ್ಲವೇ ಇಲ್ಲ:
ಕಾಲಕ್ಕೆ ತಕ್ಕಂತೆ ಬದಲಾಗಬೇಕೆಂಬ
ಅವಾಸ್ತವಿಕ ಕಲ್ಪನೆ ಅಲ್ಲಿಲ್ಲ;
ಭಾವಗಳು ಕೆರಳುವಂತೆ ಕಾಣಳು
ಭಾವಗಳು ಅರಳುವಂತೆ  ಕಾಣುವಳು.

`ಪ್ರಭು' ಎಂಬುವವನ ಅವಶ್ಯಕತೆ ಅಲ್ಲಿಲ್ಲ
ಕಟ್ಟುಪಾಡುಗಳ ಸೃಷ್ಠಿಕರ್ತನಿಗೆ ಸ್ಥಳವಿಲ್ಲ;
ಇದು ರಾಜ್ಯ
ಇದೇ ರಾಜ್ಯ
ಇದುವೇ ನನ್ನ ರಾಜ್ಯ.

        -ಸತೀಶ ಉ ನಡಗಡ್ಡಿ

* `ರಾಜ್ಯ' ಎಂಬ ಪದವನ್ನು ರಾಜ್ಯಶಾಸ್ತ್ರದ ಪರಿಮಿತಿಯಲ್ಲಿ ಬಳಸಿದ್ದೇನೆ.