Saturday 26 August 2017

ಮನಸು ಅಂತೈತಿ


ಹಾಡಬೇಕ ಅಂತೈತಿ ಮನಸು - ಪದ
ಹಾಡಬೇಕ ಅಂತೈತಿ ll ಪ ll

ನಿಂತ ಜನಾ ನಿಂತಲ್ಲೇ,
ಕುಂತ ಜನಾ ಕುಂತಲ್ಲೆ
ಮೈ ಮರತ ಕೇಳು ಹಾಂಗ ll ಪ ll

ಕೈ ಬೆರಳಷ್ಟೂ ಹಾತೊರಿತಾವ
ಕೊಳಲಿನ ಮ್ಯಾಲ ಕುಣದಾಡಾಕ
ತುಟಿಗಿ ತುಟಿಗೂಡಿ ಹುಡುಕತೈತಿ
ಕೊಳಲನೂದಾಕ ಉಸರ ನಿಲ್ಲೂ ತನಕ
ಊದಬೇಕ ಅಂತೈತಿ ಮನಸು-ಕೊಳಲು

ತಕಿಟ ಧೀಮ್ ಧೀಮ್ ಧೀಮ್
ತರಕಿಟ ಧೋಮ್ ಧೋಮ್ ಧೋಮ್
ಧೋಮ್ ತಕಿಟ ಧೀಮ್ ತಕಿಟ 
ತರಕಿಟ ತರಕಿಟ ತಕ ಧೋಮ್
ಬಾರಸಬೇಕ ಅಂತಾವ ಅಂಗೈ - ತಬಲಾ

ಒಮ್ಮಿ ಹಾಡಬೇಕ ಅಂತೈತಿ
ಇನ್ನೊಮ್ಮಿ ಊದಬೇಕ ಅಂತೈತಿ
ಮತ್ತೊಮ್ಮಿ ಬಾರಸಬೇಕ ಅಂತೈತಿ
ಒಮ್ಮೊಮ್ಮಿ ಉಸರs ನಿಲ್ಲಸಬೇಕ 
ಅಂತೈತಿ
ಇದ ಎಂಥಾ ಮನಸ ಐತಿ !!!

✍ ಸತೀಶ ಉ ನಡಗಡ್ಡಿ

Thursday 24 August 2017

ಮೇಲಧಿಕಾರಿಗಳ ಗಮನಕ್ಕೆ

         
 ಸುಮ್ಮನೆ ಕೂರಲಾಗದೆ ತಲೆ- ಕೆರೆದುಕೊಂಡು ಬರೆಯಬೇಕೆಂದೆನಿಸಿತು ನಿಮಗೊಂದು ಪತ್ರ. 
 'ನಮ್ಮೂರು ಕೇರಿಯ ಗಲ್ಲಿ ಗಲ್ಲಿಯೊಳಗಿನ ರಸ್ತೆಗಳು ಕೆಟ್ಟುಹೋಗಿವೆ.
 ಅಲ್ಲ,... ರಸ್ತೆಗಳನ್ನು ಕೆಡಿಸಿ ಬಿಟ್ಟಿದ್ದಾರೆ; ನೀರಾವರಿ ಸರಬರಾಜು ಇಲಾಖೆಯವರು- ಮನೆ ಮನೆಗೂ ನಲ್ಲಿ ಸೌಕರ್ಯ ಒದಗಿಸುವಾಗ. 
 ಅವರೇ ರಸ್ತೆಯನ್ನು ಕೆಡಿಸಿದರೆಂದು ನಾ ಹೇಗೆ ಅರೋಪಿಸಲಿ..? ಇಲ್ಲ. 
ನಿಜವಾಗಿ ರಸ್ತೆ ಕೆಡಿಸಿದವರು, ಕೇಬಲ್ ಕನೆಕ್ಷನ್ ಕೊಡುವ ಕಂಪನಿಯವರು ಮನೆ ಮನೆಗೂ ಗ್ಯಾಸ್ ಕನೆಕ್ಷನ್ ಕಾಂಟ್ರಾಕ್ಟ್ ತೆಗೆದುಕೊಂಡವರು ಎಂದೆನಿಸಿದರೂ, 
ಕೊನೆಗೆ ತಪ್ಪಿತಸ್ತರೆಂದು ಕಂಡಿದ್ದು ರಸ್ತೆ ದುರಸ್ತಿ ಕಾಮಗಾರಿಗೆ ಸಹಿ ಹಾಕುವ ಅಧಿಕಾರಿಗಳೇ. 

 ಆಶ್ಚರ್ಯಪಡಬೇಡಿ 
ನಾನು ಮಾಡುವ ಆರೋಪಕ್ಕೆ ನನ್ನದೇ ಸಮಜಾಯಿಷಿ ಕೇಳಿ ನೋಡಿ. 
 ನೀರು ಸರಬರಾಜು ಮಾಡುವವರಿಗೆ- 
"ಕೆದರಿದ ರಸ್ತೆಗೆ ಡಾಂಬರು ಹಾಕಿ" ಎಂದೇ, 
ಅದಕ್ಕೆ "ಪೈಪ್ ಲೈನ್ ಎಳೆಯಲು ಮಾತ್ರ ಹಣ ಬಂದಿದೆ" ಎಂಬುತ್ತರ ಬಂತು. 
"ಹೌದು ಬಿಡಪ್ಪಾ, ಎಳೆಯಲು ಮಾತ್ರ ಬಂದ ಹಣದಲ್ಲಿ, ನೀನೊಂದಿಷ್ಟು ಎಳೆದುಕೊಂಡು ಉಳಿದಿದ್ದರಲ್ಲಿ ಕೆಲಸ ಚನ್ನಾಗಿ ಮುಗಿಸಿದ್ದೀಯ" ಎಂದುಕೊಂಡೆ. 

 ಹುಚ್ಚ ನಾನು ಸುಮ್ಮನೆ ಕೂರಲಿಲ್ಲ, ಕೇಬಲ್ ಗ್ಯಾಸ್ ಕನೆಕ್ಷನ್ ಕಂಪನಿಗೆ- 
"ಕೆದರಿದ ರಸ್ತೆಗೆ ಡಾಂಬರು ಹಾಕಿ" ಎಂದೇ, 
ಅದಕ್ಕವರು, "ರಸ್ತೆ ದುರಸ್ತಿ ಮಾಡುವವರು ಬಂದಾಗ ಸರಿಯಾಗತ್ತೆ ಬಿಡಿ" ಎಂದರು. 

 ಹೀಗೆ ಒಬ್ಬರ ಮೇಲೊಬ್ಬರು ಹಾಕಿ, ಕೈ ತೊಳೆದುಕೊಳ್ಳುವುದು ಬೇಡ ಮೇಲಧಿಕಾರಿಗಳೇ, 
ಒಂದಾದ ಮೇಲೆ ಒಂದು ಯೋಜನೆಗೆ ಅನುಮೋದನೆ ಕೊಡುವ ಬದಲು ಪೂರ್ವ-ಯೋಜನೆ ರೂಪಿಸಿ, ಏಕಕಾಲಕ್ಕೆ ಯೋಜನೆ- 
ಗಳನ್ನು ಜಾರಿಗೊಳಿಸಿದರೆ ರಸ್ತೆಯಾದ ಮೇಲೆ 
ನೀರು ಸರಬರಾಜಿಗೆ, ನೀರು ಸರಬರಾಜಿನ ಕೆಲಸ ಮುಗಿದ ಮೇಲೆ 
ಕಂಟ್ರಾಕ್ಟರ್ ಗುತ್ತಿಗೆ ನೀಡಿ, 
ಈ "ಅಡೋಣು ಬಾ ಕೆಡಿಸೋಣು ಬಾ" ಮಾಡುತ್ತ ಕೂರುವುದು ಮಕ್ಕಳಾಟ. 
         
                                            ✍ ಸತೀಶ ಉ ನಡಗಡ್ಡಿ