Wednesday 17 August 2022

ಸಾವೇ ಸಾಧನೆ

ಸಾವಿರ ಕಷ್ಟ-ಸುಖಗಳ ಅನುಭವಿಸಿ
ಸಾವಿನೆಡೆಗೆ ಸಾಗುವ ದಾರಿ - ಬದುಕು,
ಸಾವನ್ನು ಪಡೆಯುವುದೇ ಕೊನೆಯ ಸಾಧನೆ !

ನೋಡಿದ್ದು, ಕಂಡಿದ್ದು, ಕೇಳಿದ್ದು,
ಎಟುಕಿದ್ದು, ತಿಳಿದಿದ್ದು, ಪಡೆದದ್ದು
ಎಂಬೆಲ್ಲ ಹಮ್ಮು, ಬಿಮ್ಮುಗಳ ಬೋಧನೆ !

ಹನಿ ನೀರು ಹೊಳೆಯಲ್ಲಿ ಯಾವ ಲೆಕ್ಕ ?
ಮಾಣಿ, ನೀ ಮೆರೆಯುವುದೂ ಅಷ್ಟೇ ತಿಳ್ಕ !
ಹೊರಟು ಹೋಗುವೆ ನೀ ಮರೆತು ಜೀವನದ ಬವಣೆ.

Thursday 9 June 2022

ದೇವರು ಎಲ್ಲಿದ್ದಾನೆ

ದೇವರು ಸರ್ವವ್ಯಾಪಿ.


ನನ್ನ ದೇಹ ದೇವರು ಎಂದುಕೊಳ್ಳೋಣ. ಎಂದುಕೊಳ್ಳುವುದೇನು ಅದು ದೇವರದೇ ಒಂದು ಸೂಕ್ಷ್ಮಾತಿ ಸೂಕ್ಷ್ಮ ಕಣ. ಹೇಗೆಂದರೆ,  ನನ್ನ ಈ ಒಂದು ದೇಹದಲ್ಲಿ ಕೋಟ್ಯಾನು ಕೋಟಿ, ನನ್ನ ಕಣ್ಣಿಗೆ ಕಾಣದ  ಸೂಕ್ಷ್ಮತಿ ಸೂಕ್ಷ್ಮ ಜೀವಾನುಗಳಿವೆ. ಹಾಗೆ ಒಂದು ಮೈಟೊಕಾಂಡ್ರಿಯ ಕೂಡ ಹಲವಾರು ಅತಿಸೂಕ್ಷ್ಮ ಜೀವಕಣಗಳಿಂದ ಅದ ಒಂದು ಕಣ. ಮೈಟೊಕಾಂಡ್ರಿಯ ಒಳಗಿರುವ ಕೋಟ್ಯಾನು ಕೋಟಿ ಜೀವಕಣಗಳದ್ದೇ ಒಂದು ಜಗತ್ತು ಅವುಗಳಿಗೆ ಅದೇ ಬ್ರಾಂಹಾಂಡ. ವಾಸ್ತವದಲ್ಲಿ  ಅವುಗಳ ಬ್ರಂಹ್ಮಾಂಡದಿಂದಲೇ ಮೈಟೊಕಾಂಡ್ರಿಯ ಅಸ್ತಿತ್ವದಲ್ಲಿರುತ್ತದೆ. ಇದೇರೀತಿ ಮನುಷ್ಯನ ಪ್ರತಿಯೊಂದು ಅಂಗವೂ ಸಹ ಸಹಸ್ರ ಸಹಸ್ರ ಮೈಟೊಕಾಂಡ್ರಿಯಗಳ ಆಗರ. ಆ ಮೈಟೊಕಾಂಡ್ರಿಯಾಗಳದ್ದೂ ಒಂದು ವಿಭಿನ್ನ ಜಗತ್ತು. ಅಲ್ಲಿಯೂ ಸಹ ಅವುಗಳ ಇರುವಿಕೆಯಿಂದಲೇ ಮನುಷ್ಯನ ಅಂಗದ ಅಸ್ತಿತ್ವ ಸಾಧ್ಯ ಎಂಬುದು ಶತಸಿದ್ಧ. ಇಂತಹ ಕೋಟಿ, ಕೋಟಿ, ಕೋಟಿ, ಕೋಟಿ ಕಣಗಳಿಂದ ಆದದ್ದು ಈ ದೇಹ. 

ದೇವರ ವ್ಯಾಪಕತೆ ನಮ್ಮ ಗ್ರಹಿಕೆಗೆ ದಕ್ಕಬೇಕಾದರೆ ಈ ಮೇಲಿನ ಅರಿವಿನ ಮೂಲಕ ನೋಡಬೇಕಾದದ್ದು ಅವಶ್ಯಕ. ಮನುಷ್ಯ ಈ ದೇವ ಎನ್ನುವ ಮಹತ್ ನ ಕೋಟಿ ಕೋಟಿ ಅಂಗಗಳಲ್ಲೊಂದರ, ಕೋಟ್ಯಾನು ಕೋಟಿ ಮೈಟೊಕಾಂಡ್ರಿಯಾಗಳೊಂದರ, ಅತೀ ಸೂಕ್ಷ್ಮಾತಿ ಸೂಕ್ಷ್ಮ ಕಣಗಳೊಳಗಿನ ಕೋಟ್ಯಾನು ಕೋಟಿ ಅತೀ ಅತೀ ಸೂಕ್ಷ್ಮ ಕಾಣದ ಒಂದು ಸಣ್ಣ ಕಣ !

ಇನ್ನೊಂದು ರೀತಿಯಲ್ಲಿ ನೋಡುವುದಾದರೆ,
ಹೇಗೆ ಒಂದು ಪುಸ್ತಕವಾಗಲು 10 ಅಧ್ಯಯಗಳು, ಹತ್ತು ಅಧ್ಯಯಗಳಾಗಲು ನೂರಾರು ಪ್ಯಾರಾಗಳು, ನೂರಾರು ಪ್ಯಾರಾಗಳಾಗಲು, ಸಾವಿರಾರು ಸಾಲುಗಳು, ಸಾವಿರಾರು ಸಾಲುಗಳಾಗಲು ಲಕ್ಷಾಂತರ ಪದಗಳು, ಲಕ್ಷಾಂತರ ಪದಗಳಾಗಲು ಕೋಟಿಗಟ್ಟಲೇ ಅಕ್ಷರಗಳು ಅಸ್ತಿತ್ವದಲ್ಲಿರುತ್ತವೆಯೋ ಹಾಗೆ ದೇವರು ಎಂಬ ಮಹತ್ ಇದೆ. 

ಅಕ್ಷರಗಳಿಂದ ಪದ, ಪದಗಳಿಂದ ವಾಕ್ಯ, ವಾಕ್ಯಗಳಿಂದ ಪ್ಯಾರಾ, ಪ್ಯಾರಗಳಿಂದ ಅಧ್ಯಾಯ, ಅಧ್ಯಯಗಳಿಂದ ಒಂದು ಪುಸ್ತಕ !

ಅತೀ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣಗಳಿಂದ, ಸೂಕ್ಷ್ಮಾಣು ಕಣ, ಸೂಕ್ಷ್ಮಾಣು ಕಣಗಳಿಂದ ಮೈಟೊಕಾಂಡ್ರಿಯಾ, ಮೈಟೊಕಾಂಡ್ರಿಯಾಗಳಿಂದ ಅಂಗ, ಅಂಗಗಳಿಂದ ಒಂದು ದೇಹ !

ಮನುಷ್ಯನಿರುವ ಭೂಮಿ, ಭೂಮಿಯಂತಹ ಅಕಾಶಕಯಾಗಳ ಒಳಗೊಂಡ ಸೌರಮಂಡಲ, ಸೌರಮಂಡಲಗಳನ್ನೊಳಗೊಂಡ ಗ್ಯಾಲಕ್ಸಿ, ಗ್ಯಾಲಕ್ಸಿಗಳನ್ನೊಳಗೊಂಡ ಬ್ರಂಹ್ಮಾಂಡ ಈ ರೀತಿ ನಮ್ಮೊಳಗಿನ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣಗಳಿಂದ ವಿರಾಟ್ ರೂಪಿ ದೈವ ಎಂಬ *ಮಹತ್* ಅಸ್ತಿತ್ವದಲ್ಲಿದೆ. 

ನಮ್ಮೊಳಗಿನ ಅತೀ ಸೂಕ್ಷ್ಮಾತಿ ಸೂಕ್ಷ್ಮ ಕಣಕ್ಕೆ ನಮ್ಮ ಒಂದು ಕ್ಷಣದ ಜೀವಿತಾವಧಿ ಇದ್ದರೆ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣಕ್ಕೆ 1 ಗಂಟೆ ಜೀವಿತಾವಧಿ; ಅಂತಹ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣಗಳಿಂದ ಆದ ಕಣಕ್ಕೆ 1 ದಿನ, ಆ ಜೀವಕಣಗಳಿಂದ ಅದ ಜೀವಕಣಕ್ಕೆ 1 ತಿಂಗಳು, ಆ ಜೀವಕಣಗಳಿಂದ ಅದ ಜೀವಕಣಕ್ಕೆ 1 ವರ್ಷ, ಆ ಜೀವಕಣಗಳಿಂದ  ದೇಹಕ್ಕೆ ಇಂತಿಷ್ಟು ವರ್ಷ. ಇದು ಹೀಗೆ ಎಲ್ಲಿಯವರೆಗೆ ಸಾಗುತ್ತದೆ ಎಂದರೆ ಬ್ರಂಹ್ಮಾಂಡದ ಆಯಸ್ಸು ಮುಗಿಯುವ ತನಕ. 

ನಮ್ಮ ನೂರು ವರ್ಷ ನಮ್ಮೊಳಗಿನ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣದ ಜೀವಿತಾವಧಿಯ ಕೋಟಿ ಕೋಟಿ ಪಟ್ಟು ಹೆಚ್ಚು. 

ಅದೇ ರೀತಿ ನಮ್ಮ ಜೀವಿತಾವಧಿಯ ಕೋಟಿ  ಪಟ್ಟು ಹೆಚ್ಚು ಈ ಭೂಮಿಯ ಆಯಸ್ಸು.

ಭೂಮಿಯ ಜೀವಿತಾವಧಿಯ ಕೋಟಿ ಪಟ್ಟು ಹೆಚ್ಚು ಗ್ಯಾಲಕ್ಸಿಗಳ  ಆಯಸ್ಸು.

ಗ್ಯಾಲಕ್ಸಿಗಳ ಜೀವಿತಾವಧಿಯ ಕೋಟಿ ಪಟ್ಟು ಹೆಚ್ಚು ಈ ಬ್ರಂಹ್ಮಾಂಡದ ಆಯಸ್ಸು. 

ಬ್ರಂಹ್ಮಾಂಡದ ಆಯಸ್ಸಿನ ಕೋಟಿ ಪಟ್ಟು ಹೆಚ್ಚು ಮಹತ್ ನ ಆಯಸ್ಸು.


       ✍🏻 ಸತೀಶ ಉ ನಡಗಡ್ಡಿ
      

Friday 10 September 2021

ದಶಕದ ಮೆಲುಕು

 


           ಅದು 2011 ರ, ಮೇ 13ನೆಯ ತಾರೀಕು. ನಾನು ಕಣಬರ್ಗಿ ಬಿ. ಸಿ. ಎಂ ಹಾಸ್ಟೆಲ್-II ರ ರೂಮ್ ನಂಬರ್ 10ರಲ್ಲಿ ಇದ್ದೆ. ರಾತ್ರಿಯ ಹತ್ತು ಗಂಟೆಗೆ ಅಪ್ಪನಿಂದ ಫೋನ್ ಬಂತು.

" ಹಲೋ ಅಪ್ಪಾ..."

"ಸತೇಶ್........  " ಎಂದು ಸ್ವಲ್ಪ ಸುಮ್ಮನಾದರು. ನನಗೆ ಹೆದರಿಕೆ ಆಯಿತು ; ಏನು ಅಶುಭ ಸುದ್ಧಿಯೋ ಏನೋ ಎಂದು !

"ಏನಾತ್ ಪಾ... " ಹೆದರಿಕೆಯಲ್ಲಿ ಕೇಳಿದೆ.

"ಮುಲ್ಲಾ ಸಾಯಿಬರ ಬಂದಾರ್, ಬಾಳೋತ್ ಬಂದ್ ಕುತ್ತಾರ."

ಮೊದಲು ನನಗೆ ಬೇಗನೆ ಯಾರೆಂದು ಹೊಳೆಯಲಿಲ್ಲ ಹಾಗಾಗಿ ಬರಿ "ಹೂಂ... ಹೂಂ.." ಅಂತಷ್ಟೇ ಅಂದೆ.

"ನಿನ್ ಹಿಂಬಾಲಿ ಮಾತಾಡ್ತಾರ ಅಂತ ಕೊಡ್ತೇನ್ ನೋಡ್, ಮಾತಾಡ."

"ಹೂಂ....."

"ಹಲೋ..."

"ಹಲೋ ರೀ..."

"ಆರಾಮ ಅದಿ..."

"ಹಾಂ ಅಂಕಲ್ ಆರಾಮ ಅದೇನ್ರಿ... ನೀವರಿ ?" ಬಂದಿರೋದು ಪೋಸ್ಟ್ ಮಾಸ್ತರ್ ಮುಲ್ಲಾ ಅಂಕಲ್ ಎಂಬುದು ಖಾತರಿಯಾಯಿತು. ಬಹುಷಃ ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಹಕ್ಕಿದ್ದರ ಬಗ್ಗೆ ಏನಾದರೂ ಪತ್ರ ಬಂದಿರಬೇಕು ಅಂದುಕೊಂಡೆ.

" ಎಲ್ಲಿದಿ ಈಗ..?"

"ನಾ ಈಗ ಕಣಬರ್ಗಿ ಹಾಸ್ಟೆಲ್ ಒಳಗ್ ಅದೇನ್ರಿ ಅಂಕಲ್. "

" ನಾಳಿ, ನಿನ್ನ ಸಾಲೀವ್ ಒರ್ಜಿನಲ್ ಕಾಗದಗೋಳ್ ತುಗೊಂಡ್ ಮನಿಗಿ ಬಾ ."

" ನಾಳಿ ಎರಡನೇ ಶನಿವಾರ ಕಾಲೇಜ್ ಬಂದ್ ಐತ್ರಿ ನಮದ. ಒರ್ಜಿನಲ್ ಎಲ್ಲಾ ಕಾಲೇಜ್ ಕೊಟ್ಟೇವ್ರಿ D. ed ಅಡ್ಮಿಷನ್ ಮಾಡುವಾಗ."

"ಒಟ್ ಏನರೆ ಮಾಡಿ, ನಾಳಿ ಅವನ್ನೆಲ್ಲ ತುಗೊಂಡ್ ಮನಿಗಿ ಬಾ"

"ಹೌದ್ರಿ...."

"ಹೂಂ.. ನಿಮ್ ಅಪ್ಪಾರ್ ಕಡೆ ಕೊಡ್ತೇನ್ ನೋಡಿಲ್ಲಿ. " ಎಂದು 'ನೀವ್ ಹೇಳ್ರಿ' ಎಂದದ್ದು ಕೇಳಿತು. ಮುಲ್ಲಾ ಸಾಹೇಬರು ನನ್ನ ಅಪ್ಪನ ಬಾಯಿಂದಲೇ ಶುಭ ಸುದ್ಧಿ ಹೇಳಿಸುವ ಯೋಚನೆ ಮಾಡಿ ಹಾಗಂದಿರಬಹುದು ಎನಿಸಿತು.

"ಯಪ್ಪು..."

"ಹೇಳಪಾ..."

"ಇದ್sss... ಪೋಸ್ಟ್ ಅಫಿಸ್ ಅರ್ಜಿ ಹಾಕಿದ್ದಿ ?"

"ಹೂಂ... ಅವತ್ತು ಅಣ್ಣಾ ಅರ್ಜಿ ತಂದು ಕೊಟ್ಟಿದ್ದ. ಹಾಕಿದ್ನಿ. ಎಕ್ಸಾಮ್ ಬರದಿದ್ನಿ. ಪಾಸ್ ಆಗಿಲ್ಲ... ಪಾ "

"ಅದss. ಈಗ ಮುಲ್ಲಾ ಸಾಹಿಬರ ಸುದ್ಧಿ ತುಗೊಂಡ್ ಬಂದಾರ್."

"ಏನ್ ಅಂತ... ?"

"ಸೋಮಾರ್ ಒಟ್ಟ ಯಾವದs ಪರಿಸ್ಥಿತಿ ಒಳಗ್ ಸಾಲಿ ಕಾಗದ ತುಗೊಂದ್ ಅಲ್ಲಿ ಹಜರ್ ಇರಬೇಕ್ ಅಂತ" 

"ಅಂಕಲ್ ಕಡೆ ಕೊಡು ಕೇಳ್ತೆನ್.."

"ಕೊಡ್ತೇನ್ ಮಾತಾಡ . "

"ಹಲೋ ಅಂಕಲ್.."

"ಹೂಂ.. ನನಗ ಇವತ್ ನಮ್ಮ ಅಕೌಂಟ್ ಆಫೀಸ್ ಹತ್ತರಿಕಿ ಇಂದ್ ಫೋನ್ ಬಂದಿತ್ತು. ಅವರಿಗೆ ಗೋಕಾಕ್ ಡಿವಿಜನ್ ಆಫೀಸ್ ಇಂದ ಮತ್ತು ಗೋಕಾಕದವರಿಗೆ ಶಿವಮೊಗ್ಗ ಡಿವಿಜನ್ ಆಫೀಸ್ ಇಂದ ಫೋನ್ ಮಾಡಿ ಹೇಳಿದಾರ್... ಅದ್ಕ ನೀ ನಿನ್ನ ಕಾಗದಗೋಳ್ ತುಗೊಂಡ್ ಬಾ."

"ಅದ್ರ ಅಂಕಲ್ ಎಕ್ಸಾಮ್ ರಿಸಲ್ಟ್ ಬಿಟ್ಟಾಗ ನಾನು ಶಿವಮೊಗ್ಗ ಆಫೀಸ್ ಕೇಳಿದಾಗ 'ನಿಮ್ ಹೆಸರು ಲಿಸ್ಟ್ ಒಳಗೆ ಇಲ್ಲಾ ಕಣ್ರೀ.." ಅಂದಿದ್ರು."

" ಇವತ್ ಫೋನ್ ಬಂದೇತಿ ಅಂದ್ರ್ ಮತ್ತ ಏನರೆ ಬದ್ಲಾವ್ ಆಗಿರ್ಬೇಕ್... ಒಂದ್ಸಲ ಕಾಗದ ತುಗೊಂಡ್ ಹೋಗಿ ಬಾ "

" ಆಯ್ತು ಅಂಕಲ್.."

         ನಾನು ಎಕ್ಸಾಮ್ ರಿಸಲ್ಟ್ ಬಂದಾಗ ಶಿವಮೊಗ್ಗ ಆಫೀಸ್ ಗೆ ಕೇಳಿದಾಗ ನನ್ನ ಹೆಸರು ಇಲ್ಲ ಅಂದಿದ್ದು, ಇನ್ನೊಂದಿಷ್ಟು ನನ್ನ ಸ್ನೇಹಿತರು ಸೆಲೆಕ್ಟ್ ಆದವರು ಅಂದು ಪಟ್ಟ ಖುಷಿ, ಸೆಲೆಕ್ಟ್ ಆಗದೆ ಇರುವ ಹುಡುಗಿಯೊಬ್ಬಳು ಗೋಳೋ ಎಂದು ಅಳುತ್ತಾ ಕುಳಿತದ್ದು ಎಲ್ಲಾ ನನ್ನ ನೆನಪಿಗೆ ಬಂತು. 

"ಏನೇ ಆಗಲಿ ಒಂದು ಸಲ ಸೆಲೆಕ್ಟ್ ಆಗಿರುವವರನ್ನು ಕೇಳಿ ನೋಡೋಣ " ಎಂದಂದುಕೊಂಡು ಬಸಯ್ಯ ಒಡೆಯರ್ ಗೆ ಫೋನ್ ಮಾಡಿದೆ.

"ಹೇಳೋ ದೋಸ್ತ್... ಆರಾಮ ಅದಿ ?"

"ಆರಾಮ ದೋಸ್ತ್..ನೀ ?"

"ನಾನು ಆರಾಮ.. ಮತ್ತೆನ್ ವಿಶೇಷ...?"

ವಿಷಯವನ್ನು ಹೇಳಿದೆ ಅವನಿಗೆ, 

" ದೋಸ್ತ್... congratulations. ನೀ ಲಕ್ಕಿ ಅದಿ. ನಿನ್ನ ಹೆಸರನ್ಯಾಗ್ ಒಂದ್ ಫೈಲ್ ಓಪನ್ ಆಗಿರ್ತದ. ತಲಿ ಕೆಡಸ್ಕೊಬ್ಯಾಡ್ ದೋಸ್ತ್, ಒಟ್ಟ ಡಾಕ್ಯುಮೆಂಟ್ಸ್ ಎಲ್ಲಾ ತುಗೊಂಡ್ ಹೊಂಟ ಬಿಡನಿ. "

"ಅಲ್ಲೋ ದೋಸ್ತ್.. ರಿಸಲ್ಟ್ ಬಂದಾಗ ಹಿಂಗ್ ಅಂದಿದ್ರು ಮತ್ತsss..." 

"ಖರೆ ಖರೆ.. ನಿಂದ ಈಗ ವೇಟಿಂಗ್ ಲಿಸ್ಟ್ ಒಳಗ ಆಗೇತಿ... ನೀ ಚಿಂತಿ ಮಾಡ್ಬ್ಯಾಡಲೇ ಮಗನ ಹೋಗ್ "

"ಹಂಗ ಅಂದ್ಯs "

"ಶಿವಮೊಗ್ಗ ಡಿವಿಜನ್ ಆಫೀಸ್ ಒಳಗ ರಾಧಾ ಮೇಡಂ ಅಂತ ಇರ್ತಾರ್ ಅವರಿಗೆ ಫೋನ್ ಮಾಡು ಕೇಳ್ಕೊಂಡ್ ಹೋಗ್.... ನಂಬರ್ ಕೊಡ್ತೇನಿ."

"ಓಕೆ ದೋಸ್ತ್, ಥಾಂಕ್ಸ್..."

"ಅಲ್ಲಲೇ ಮಗನ, ನಿಂದs ಭೇಷ್ ಆಯ್ತ್ ನೋಡ್ಲೆ... ಕಾಲೇಜ ಟ್ರಿಪ್ ಮುಗ್ಸಿದಿ, ಈಗ ನೌಕರಿನೂ join ಆಗಕತ್ತಿ.. ನಾವ್ ಸೆಲೆಕ್ಟ್ ಆಗಿವಿ ಅಂತ ಕಾಲೇಜ್ ಬಿಟ್ ಆಕಡೆ ಇನ್ನ join ಆಗ್ಲಿಲ್ಲ. ಈ ಕಡೆ ಕಾಲೇಜ್ ಟ್ರಿಪ್ಪು ಆಗ್ಲಿಲ್ಲ. " ಎಂದು ತನ್ನ ನಶೀಬ್ ಬಗ್ಗೆ ಹೇಳಿದನು.


           ಮರು ದಿನ (ಶನಿವಾರ ತಾ. 14.05.2011) ಬೆಳಿಗ್ಗೆ 10 ಗಂಟೆಗೆ ನಾನು ಶಿವಮೊಗ್ಗ ಡಿವಿಜನ್ ಆಫೀಸ್ ನಂಬರಿಗೆ ಫೋನ್ ಮಾಡಿ ;

"ರಾಧಾ ಮೇಡಂ ಬೇಕಿತ್ರಿ.."

"ನಾನೇ ಹೇಳಿ. "

"ನಮಸ್ತೆ ಮೇಡಂ, ನಾನು ಸತೀಶ್ ಅಂತ ಬೆಳಗಾವಿಯಿಂದ ರೀ... .."

"ಅಯ್ಯೋ ದೇವ್ರೇ, ಸತೀಶ್ ಅವ್ರೇ ನೀವು ಪೋಸ್ಟಲ್ ಅಸ್ಸಿಸ್ಟಂಟ್ ಅಂತ ಸೆಲೆಕ್ಟ್ ಆಗಿದಿರಾ ಕಣ್ರೀ.. ಸೋಮವಾರ ನೀವು ಡಾಕ್ಯುಮೆಂಟ್ಸ್ ತಗೊಂಡ್ ಬನ್ನಿ ವೇರಿಫಿಕೇಶನ್ ಗೆ.. "

"ಅಲ್ಲ ಮೇಡಂ.. ರಿಸಲ್ಟ್ ಬಂದಾಗ ನನ್ನ ಹೆಸರ್ ಲಿಸ್ಟ್ ಒಳಗ್ ಇರ್ಲಿಲ್ರಿ..."

"ಹೌದು ಕಣ್ರೀ.. ನೀವು ವೇಟಿಂಗ್ ಲಿಸ್ಟ್ ಒಳಗೆ ಸೆಲೆಕ್ಟ್ ಆಗಿದಿರಾ. "

" ಆಯ್ತ್ರಿ ಮೇಡಂ ಬರ್ತೀನಿ. " 


          ನಿನ್ನೆ ರಾತ್ರಿಯಿಂದ ಇಲ್ಲಿಯವರೆಗೆ ಕನಸಲ್ಲಿ ಇದ್ದೋನ ತರ ಇದ್ದ ನನಗೆ ಇದು ಕನಸಲ್ಲ ನನಸು ಅನಿಸಿತು. ಖುಷಿಯೋ ಖುಷಿ. ಕೇಂದ್ರ ಸರಕಾರದ ನೌಕರಿ, ತಿನ್ನೋಕೆ ಒಂದು ತುತ್ತು ಅನ್ನ ಸಿಕ್ಕರೆ ಸಾಕು ಅಂತಿದ್ದ ನನಗೆ ಕೆಜಿ ಕೆಜಿ ಗಟ್ಟಲೆ ಆಪಲ್ ಕೊಟ್ಟು ತಿನ್ನಲು ಕೂರಿಸಿದಂಗಾಗಿತ್ತು.

            ದೊಡ್ಡಪ್ಪರಿಗೆ ಫೋನ್ ಮಾಡಿದೆ;

"ಸತೀಶ್ ನಿನ್ನೆ ರಾತ್ರಿ ಅಪ್ಪ ಮಾತಾಡಿದಾನು. ನಿನ್ ಕಾಲೇಜ್ ಒಳಗ್ ಡಾಕ್ಯುಮೆಂಟ್ಸ್ ಕೊಟ್ರೇನೋ... ?"

" ದೊಡ್ಡಪ್ಪಾ.. ಈಗ ಫೋನ್ ಮಾಡಬೇಕ ಪ್ರಿನ್ಸಿಪಾಲರಿಗೆ. "

"ಫೋನ್ ಮಾಡು, ಮಾಡಿ ಡಾಕ್ಯುಮೆಂಟ್ಸ್ ರೆಡಿ ಇಟ್ಕೋ. ನಾಳೆ ನೈಟ್ ಬಸ್ ಹಿಡ್ಕೊಂಡ್ ಹೋಗೋಣ."

"ಹೂಂ. ದೊಡ್ಡಪ್ಪ ಇವತ್ತು ತುಗೊಂಡ್ ಇಟ್ಕೋತೆನಿ."

       ಅವತ್ತೆ ಡಯಟ್ ಪ್ರಾಂಶುಪಾಲರೂ, ಉಪನ್ಯಾಸಕರೂ ಆಗಿದ್ದ ದಂಡಿನ ಸರ್ ಗೆ ಫೋನ್ ಮಾಡಿ ವಿಷಯವನ್ನು ತಿಳಿಸಿದೆ. ಮೂಲ ದಾಖಲೆಗಳನ್ನು ಮರಳಿಸುವ ಭರವಸೆ ಕೊಟ್ಟರು. ಕಾಲೇಜಿಗೆ ಹೋಗಿ ವಿನಂತಿ ಪತ್ರ ಬರೆದುಕೊಟ್ಟು ಮೂಲ ದಾಖಲೆಗಳನ್ನು ತೆಗೆದುಕೊಂಡು ಹಾಸ್ಟೆಲ್ ಗೆ ಹಿಂತಿರುಗಿದೆ.


             ಮರುದಿನ (ರವಿವಾರ ತಾ. 15.05.2011) ರಾತ್ರಿ 10.30ಕ್ಕೆ ನಾನು ದೊಡ್ಡಪ್ಪ ಶಿವಮೊಗ್ಗ ಬಸ್ ಹತ್ತಿದೆವು. ಬೆಳಗಿನ 4.00 ಗಂಟೆಗೆ ಶಿವಮೊಗ್ಗ ತಲುಪಿದೆವು. ಹತ್ತಿರದ ಲಾಡ್ಜ್ ನಲ್ಲಿ ಉಳ್ಕೊಂಡು ಸ್ವಲ್ಪ ಹೊತ್ತು ರೆಸ್ಟ್ ಮಾಡಿ ಸೋಮವಾರ (ತಾ. 16.05.2011)ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಕೋಟೆ ರೋಡ್ನಲ್ಲಿರುವ ಅಂಚೆ ಅಧೀಕ್ಷಕರ ಕಚೇರಿ ಶಿವಮೊಗ್ಗಕ್ಕೆ ತಲುಪಿದೆವು. "ರಾಧಾ ಮೇಡಂ" ಅವರನ್ನು ಕೇಳಿದೆವು. ಅವರನ್ನು ತೋರಿಸಿದರು. ಅವರ ಹತ್ತಿರ ಹೋಗುತ್ತಿದ್ದಂತೆ ;

"ಸತೀಶ್ ಅವರೇ welcome to ಪೋಸ್ಟಲ್ ಫ್ಯಾಮಿಲಿ. "

"ಥಾಂಕ್ಸ್ ಮೇಡಂ.." ದೊಡ್ಡಪ್ಪ ಮತ್ತು ನಾನು ಒಟ್ಟಿಗೆ ಹೇಳಿದೆವು.

" ಬನ್ನಿ SP ಸರ್ ಗೆ ಭೇಟಿ ಮಾಡಿಸ್ತೀನಿ."

"....... " ರಾಧಾ ಮೇಡಂ ಅವರನ್ನು ಹಿಂಬಾಲಿಸಿದೆವು.

" ಸರ್ ಇವರು ಸತೀಶ್ ಅಂತಾ. ಬೆಳಗಾವಿಯಿಂದ ಬಂದಿದಾರೆ. ನ್ಯೂ ಅಪ್ಪೋಯಿಂಟ್ ಆಗಿರೋರು." ಎಂದು ಪರಿಚಯಿಸಿದರು. ಟೇಬಲ್ ಮೇಲೆ "J. C. ಶ್ರೀನಿವಾಸ್ Superintendent of Post Offices, Shimogga Division, shimoga 577202" ಬೋರ್ಡ್ ಇತ್ತು.

"ಏನಪ್ಪಾ ರಾಜಾ.. ಹೇಗಿದಿಯಾ ?"

"ಆರಾಮ ಅದೀನ್ರಿ ಸರ್.."

"Welcome to the Department. ಚನ್ನಾಗಿ ಕೆಲ್ಸ ಮಾಡು. ಯಾರಿಗೂ ಒಂದು ರೂಪಾಯಿ ಕೊಡದೆ ಸಿಕ್ಕಿರೊ ನೌಕರಿ. All the best ರಾಜಾ"

" ಆಯ್ತು ಸರ್." ಎಂದು SP ಸರ್ ಕೊಠಡಿಯಿಂದ ಹೊರಗೆ ಬಂದೆವು. 

     ರಾಧಾ ಮೇಡಂ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಮೆಗ್ಗಾನ್ ಹಾಸ್ಪಿಟಲ್ ಗೆ ಮೆಡಿಕಲ್ ಮಾಡಿಸಿಕೊಂಡು ಪ್ರಮಾಣಪತ್ರ ತರಲು ಹೇಳಿದರು. ದೊಡ್ಡಪ್ಪಾ ಮತ್ತು ನಾನು ಮೆಗ್ಗಾನ್ ಹಾಸ್ಪಿಟಲ್ ಗೆ ಹೋಗಿ ಪ್ರಮಾಣಪತ್ರ ತೆಗೆದುಕೊಂಡು ತಂದು ರಾಧ ಮೇಡಂ ಗೆ ನೀಡಿದೆವು.

"ಸರಿ ಆಯ್ತು .. ನೀವು ಚನ್ನಗಿರಿ ಪೋಸ್ಟ್ ಆಫೀಸ್ ಗೆ ಹೋಗಿ join ಆಗಬೇಕು."

"ಮೇಡಂ ಈಗ ನಾವು ಬರಿ documents ವೇರಿಫಿಕೇಶನ್ ಸಲವಾಗಿ ಅಷ್ಟೇ ಬಂದೇವ್ರಿ. ಒಂದ್ ಹತ್ತು ದಿನ ಟೈಮ್ ಕೊಡ್ರಿ join ಅಗಾಕೆ." ದೊಡ್ಡಪ್ಪ ವಿನಂತಿಸಿ ಕೊಂಡರು.

"ಹೌದ್ರಿ ಮೇಡಂ. ನಾನು ಹಾಸ್ಟೆಲ್ ಒಳಗಿಂದ ದೊಡ್ಡಪ್ಪಾರ ಹಿಂಬಾಲಿ ಬಂದೆನ್ರಿ. ಒಂದ್ ಹತ್ತು ದಿನ ಟೈಂ ಕೊಡ್ರಿ ಮೇಡಂ. ಬಂದು join ಅಗ್ತೇನ್ರಿ."

"ಆಯ್ತು ಹೋಗಿ ಬನ್ನಿ. ಸಾಧ್ಯ ಆದಷ್ಟು ಬೇಗ ಬಂದು join ಆಗಿಬಿಡಿ ಆಯ್ತಾ."

"ಅವಶ್ಯವಾಗಿ ಮೇಡಂ. ನಮಸ್ಕಾರ . ಬರ್ತೇವಿ." ಎಂದು ದೊಡ್ಡಪ್ಪ ಹೇಳಿದರು. 


      ಇಬ್ಬರು ಲಾಡ್ಜ್ ಗೆ ಹೋಗಿ ಬ್ಯಾಗ್ ರೆಡಿ ಮಾಡಿಕೊಂಡು ಅವತ್ತಿನ ರಾತ್ರಿಯ ನೈಟ್ ಡ್ಯೂಟಿ ಹಜರ್ ಆಗುವ ತವಕದಲ್ಲಿ ನಾನು ದೊಡ್ಡಪ್ಪಾ ಶಿವಮೊಗ್ಗ ಇಂದ ಹರಿಹರ, ಹರಿಹರ ಇಂದ ರಣೆಬೆನ್ನೂರು, ರಣೆಬೆನ್ನೂರಿಂದ ಹಾವೇರಿ, ಹಾವೇರಿ ಇಂದ ಶಿಗ್ಗಾವಿ, ಶಿಗ್ಗಾವಿಯಿಂದ ಹುಬ್ಬಳ್ಳಿ, ಹುಬ್ಬಳ್ಳಿಯಿಂದ ಬೆಳಗಾವಿ ಹೀಗೆ ಎಲ್ಲಿಯೂ ಹೆಚ್ಚಿನ ಸಮಯ ಪೋಲು ಮಾಡದೆ ಅವತ್ತು ಯಮಕನಮರಡಿ ಪೊಲೀಸ್ ಸ್ಟೇಶನ್ ಗೆ ಬಂದು ರಾತ್ರಿಯ 10.30ಕ್ಕೆ ತಲುಪಿದೆವು. ನನ್ನನ್ನು ಕ್ವಾರ್ಟರ್ಸ್ ಗೆ ಬಿಟ್ಟು 

" ನೀ ಆರಾಮ ಮಾಡೋ ಸತೀಶ... ನಾನು ಡ್ಯೂಟಿ ಮುಗಸ್ಕೊಂಡ್ ಬೆಳಗಿನ 4 ಗಂಟೆಗೆ ಬರ್ತೇನಿ. ನಿಧಾನಲೇ ಎದ್ದು ರೆಡಿ ಆಗಿ ಮನಿಗೆ ಹೋಗೋಣು"

"ಹೂಂ. ದೊಡ್ಡಪ್ಪಾ.." ಎಂದು ಮಲಗಿಕೊಂಡೆ. 

        ಒಂದು ವಾರದ ಸಮಯ ಕಾಲೇಜಿಗೆ ಹೋಗಿ ಕಳೆದೆ. ಒಂದು ದಿನ ಹಾಸ್ಟೆಲ್ ವಾರ್ಡನ್ (I. D. ವಿವೇಕಿ ಸರ್) ಗೆ ವಿಷಯ ತಿಳಿಸಿ ಅವರಿಂದ "ಬೆಸ್ಟ್ ಆಯ್ತು ಬಿಡ... All the best" ಹೇಳಿಸಿಕೊಂಡು ಅಲ್ಲಿಂದ ಬಟ್ಟೆ-ಬರೆ-ಪುಸ್ತಕಗಳೊಂದಿಗೆ ಮನೆಗೆ ಹೋದೆ. ಅಜ್ಜ ಮನೆಯಲ್ಲಿದ್ದ. ಅಪ್ಪಾ-ಅಮ್ಮಾ ಹೊಲಕ್ಕೆ ಹೋಗಿದ್ದರು.

"ಚಲುs ಗಂಡ ಕೆಲಸಾ ಮಾಡಿದಿಲಾ..."

"ಹೂಂ ಅಜ್ಜಾ... ನಿನ್ನ ಮೊಮ್ಮಗ .. ಮತ್ತs"

"ಸತ್ಯುಳ್ಳ ದೇವರು, ನಿಮ್ಮವ್ವಾ-ಅಪ್ಪನ ಹರಿಕಿ, ನಿನ್ನ ತೆಲಿ...ಅದಕ್ಯಾರ್ ಎನ್ !"

          ಸಾಯಂಕಾಲ 6 ಗಂಟೆಗೆ ಅಪ್ಪ-ಅಮ್ಮ ಹೊಲದಿಂದ ಮನೆಗೆ ಬಂದರು. 2 ದಿನ ಹಿಂದಿನ ರಾತ್ರಿಯ ವೃತ್ತಾಂತವನ್ನೆಲ್ಲ ಮತ್ತೊಮ್ಮೆ ಹೇಳಿದರು. ರವಿವಾರ (ತಾ. 22.05.2011) ರಾತ್ರಿಯ ಪ್ರಯಾಣ ಎಂದು ಮಾತನಾಡಿಕೊಂಡೆವು - ಈ ಕಡೆಯಿಂದ ನಾನು ಮತ್ತೆ ಅಪ್ಪಾ. ಆ ಕಡೆಯಿಂದ (ಬೆಂಗಳೂರು) ಅಣ್ಣಾ ಬರಲು ಸಿದ್ಧನಾದನು. ದೊಡ್ಡಪ್ಪಾ ಫೋನ್ ಮಾಡಿ ಹೋಗುವುದು ಮತ್ತು ಲಾಡ್ಜ್ ಮಾಡಿಕೊಂಡು ರೆಸ್ಟ್, ಮಾಡಿ ಫ್ರೆಶ್ ಆಗುವುದು. ಅಣ್ಣಾ ಬಂದ ಮೇಲೆ ತಾ. 23.05.2011 ರಂದು ಮೂವರು ಕೋಟೆ ರೋಡ್ ಶಿವಮೊಗ್ಗ ಡಿವಿಜನ್ SP ಅಫಿಸ್ ಗೆ ಹೋಗಿ, ಅಲ್ಲಿ ಅವರಿಗೆ ಭೇಟಿಯಾಗಿ, ಅಲ್ಲಿಂದ ಚನ್ನಗಿರಿಗೆ ಹೋಗಿ, join ಆಗುವುದು.

         ಮೂವರು ಚನ್ನಗಿರಿ ಬಸ್ ಸ್ಟ್ಯಾಂಡ್ ಒಳಗೆ ಪೋಸ್ಟ್ ಆಫೀಸ್ ಹುಡುಕಿಕೊಂಡು ಹೋದೆವು. ಕಂಪೌಂಡ್ ಒಳಗೆ ಸುತ್ತಲೂ ಮರಗಳು ಮಧ್ಯದಲ್ಲಿ ಪೋಸ್ಟ್ ಆಫೀಸ್ ಇತ್ತು. ಒಳಗೆ ಹೋದೆವು. G. ಶೇಖರಪ್ಪ ಪೋಸ್ಟ್ ಮಾಸ್ತರ್ ಆಗಿದ್ದರು. ನನ್ನ joining ಲೆಟರ್ ಅವರಿಗೆ ತೋರಿಸಿದೆವು. 

" ರಾಧಾ ಮೇಡಂ ಫೋನ್ ಮಾಡಿ ಹೇಳಿದ್ರು... ಹೀಗೆ ಬಂದು join ಆಗ್ತಾರೆ ಅಂತ. ಒಳ್ಳೆದಾಯ್ತು. ಕೂತ್ಕೊಳ್ಳಿ."

         ಉಭಯ ಕುಶಲೋಪರಿ ಆಯ್ತು. ಒಂದಿಬ್ಬರು ಬಂದು "welcome to Postal Family" ಎಂದರು. "ಥಾಂಕ್ಸ್" ಹೇಳಿದೆವು.

" ತೀರ್ಥಪ್ರಕಾಶ್, ರಾಧಾ ಮೇಡಂ ಬೆಳಿಗ್ಗೆ ಹೇಳಿದ್ರಲ್ಲಪ್ಪಾ ಸತೀಶ್ ಅಂತ ಒಬ್ಬರು ಇವತ್ತು ಚನ್ನಗಿರಿ ಆಫೀಸ್ ಗೆ join ಆಗ್ತಾರೆ ಅಂತ.."

" ಹೂಂ ಸಾರ್.. ಹೂಂ ಸಾರ್.."

"ಅವರು ಬಂದಿದಾರೆ. ಇವರೇ ನೋಡಿ.. " ನನ್ನತ್ತ ಕೈ ತೋರಿದರು.

"ಸತೀಶ್ ಅವ್ರೇ ನಮ್ ಇಲಾಖೆಗೆ ಸ್ವಾಗತ. ಎನ್ ಮಾಡ್ಕೊಂಡಿದ್ರಿ ?

"D. ed ಮಾಡ್ತಿದ್ನಿ ಸರ್..."

"ಹೌದೇನ್ರಿ... ಮತ್ತೆ ಆರಾಮ ಎಲ್ಲಾ "

" ಹೂಂ ಸರ್. ನೀವ್ ಆರಾಮ ಏನ್ರಿ ಸರ್"

ನನ್ನ ಮಾತಿನಲ್ಲಿ ರೀ ರೀ ಹೆಚ್ಚು ಕಂಡಿದ್ದು ನೋಡಿ ಎಲ್ಲರೂ ನಕ್ಕರು. 

"ಉಳ್ಕೊಳ್ಳೋಕೆ ಸದ್ಯಕ್ಕೆ ಕ್ವಾರ್ಟರ್ಸ್ ಲ್ಲಿ ನನ್ನ ಜೊತೆಗೆ ಇರು" ಶೇಖರಪ್ಪಾ ಸರ್ ಅಂದರು.

"ನೀವರಿ ಅಂವಗ ಎಲ್ಲಾ ಇನ್ ಮ್ಯಾಲ " ಅಂದು ಮಗನನ್ನು ಬೇರೆಯವರ ಸುಪರ್ದಿಗೆ ಬಿಡುವ ಹಾಗೆ ಹೇಳಿದರು ಅಪ್ಪ.

" ನಾನು ಸದ್ಯ ಒಬ್ಬನೇ ಇರ್ತೀನಿ.. ನನ್ ಜೊತೆ ಒಬ್ಬ ಹುಡುಗ ಆದ. ಊಟ ವಸತಿ ಎಲ್ಲ ಇಲ್ಲೇ" ಅಂದರು.

" ನಿಮ್ಮಿಂದ ಭಾಳ ಹೆಲ್ಪ್ ಆಯ್ತು ಸರ್.." ಅಣ್ಣ ಹೇಳಿದನು.

" ಆಯ್ತು. ಇವನು ಇಲ್ಲೇ ಇರ್ತಾನೆ. ನೀವು ಇನ್ನು ಹೋಗಬಹುದು." ಎಂದರು.

        ನಂತರ ಪ್ರಕಾಶ್ ಸರ್ ಆದಮೇಲೆ, ಕಿರಣ್ ಸರ್, ಮಂಜುಳಾ ಮೇಡಂ, ಮಂಜುಳಾ ದೇಗಿನಾಳ ಮೇಡಂ, ಭಾಗ್ಯಶ್ರೀ ಮೇಡಂ, ಪೋಸ್ಟ್ಮ್ಯಾನ್ ಮಹಾರುದ್ರಪ್ಪ, ಪ್ರಭು, ಕರಿಯಪ್ಪಾ ಮತ್ತು ತಿಮ್ಮಣ್ಣಾ, ದುರಗೋಜಿ, ಸುರೇಶ್, ಮಾರ್ಕೊಡ್ ಜೀ ಎಲ್ಲರೂ ಪರಿಚಯ ಮಾಡಿಕೊಂಡರು. ಕಿರಣ್ ಸರ್ ಮತ್ತೆ ತೀರ್ಥಪ್ರಕಾಶ್ ಸರ್ ಹಾಗೂ ಮಂಜುಳಾ ಮೇಡಂ ನನಗೆ ತುಂಬಾ ಚೆನ್ನಾಗಿ ತಿದ್ದಿ, ಬುದ್ಧಿ ಹೇಳಿ, ಮಾರ್ಗದರ್ಶನ ಮಾಡಿದರು. ಸುಮಾರು 2 ತಿಂಗಳುಗಳ ನಂತರ ಕುಮಾರ್ ಜಿ. ಪಿ. ಮತ್ತು ಅನಿಲ್ ಅವರು ಟ್ರೈನಿಂಗ್ ಮುಗಿಸ್ಕೊಂಡು ಬಂದರು. ತೀರ್ಥಪ್ರಕಾಶ್ ಸರ್ Receipt Dispatch Counter ಬಗ್ಗೆ, ಕಿರಣ್ ಸರ್ MPCM ಕೌಂಟರ್ ಬಗ್ಗೆ ಆಫೀಸ್ ಲ್ಲಿ ಹಾಗೂ ಅಡುಗೆ ಬಗ್ಗೆ ಕ್ವಾರ್ಟರ್ಸ್ ಲ್ಲಿ ಸಂಪೂರ್ಣವಾಗಿ ಹೇಳಿಕೊಟ್ಟರು. ಕುಮಾರ್ ಸರ್ ಒಂದು ದಿನ SB ಕೌಂಟರ್ ಗೆ ನನ್ನ ಕೂರಿಸಿ ಹಿಂದೆ ನಿಂತು ಪ್ರತಿಯೊಂದನ್ನೂ ಹೇಳಿಕೊಟ್ಟು  ಸಾಯಂಕಾಲ "ಸತೀಶಣ್ಣಾ SB  ಕೌಂಟರ್ 100% ಟ್ಯಾಲಿ" ಎಂದಿದ್ದರು. MPKBY ಏಜೆಂಟ್ ಆಗಿದ್ದ ಮಾರ್ಕೊಂಡ್ ಜೀ SBM ಬ್ಯಾಂಕ್ ಒಳಗೆ ನನಗೊಂದು ಅಕೌಂಟ್ ತೆಗೆದು ಕೊಟ್ಟರು ಅದು ನನ್ನ ಮೊದಲ ಬ್ಯಾಂಕ್ ಅಕೌಂಟ್. ಅದಾದ ಮೇಲೆ ಪೋಸ್ಟ್ ಆಫೀಸ್ ಒಳಗಿನ SB ಅಕೌಂಟ್ ನ್ನು ಭಾಗ್ಯಶ್ರೀ ಮೇಡಂ 'ಸಂಚಯಾ' ದಲ್ಲಿ ಒಪೆನ್ ಮಾಡಿ " ಸತೀಶ್ ಅವ್ರೇ ನಿಮ್ಮ ಅಕೌಂಟ್ ನಂಬರ್ 2030**" ಎಂದು ಹೇಳಿದರು.

            6 ತಿಂಗಳ ನಂತರ ಮೈಸೂರ PTC ಗೆ ಟ್ರೈನಿಂಗ್ ಹೋದಲ್ಲಿ ಸತ್ಯನಾರಾಯಣ ವಿ. ಮತ್ತು ಬಿಂದು ಕೆ. ಅವರು ಪರಿಚಯವಾದರು. ಅಲ್ಲಿಂದ ಸತ್ಯನಾರಾಯಣ ಮತ್ತು ನನ್ನ ಸ್ನೇಹ-ಸೋದರತೆ ಬೆಳೆಯಿತು. ಈ ಸ್ನೇಹ ಇಂದಿನ ನನ್ನ ಸಾಹಿತ್ಯದ ಹುಚ್ಚಿಗೆ ಕಾರಣ ಎಂದರೂ ತಪ್ಪಾಗದು. 2013ರ ನವೆಂಬರ್ನಲ್ಲಿ ನನಗೆ ಶಿವಮೊಗ್ಗ ಇಂದ ಧಾರವಾಡಕ್ಕೆ ವಿದ್ಯಾಶ್ರೀ ಎಸ್. ಎಲ್. ಅವರೊಂದಿಗೆ ಮುಚ್ಯುಅಲ್ ಟ್ರಾನ್ಸ್ಫರ್ ಸಿಕ್ಕಿತು.  11ನೆಯ ತಾರೀಕು 9 ಗಂಟೆಗೆ ಧಾರವಾಡ HO ದಲ್ಲಿ K. S. ಸಾಂಬ್ರಾಣಿ, ರವಿ ಕಟ್ಟಿಮನಿ ಸರ್, ಮೋಹನ ಸೊಪ್ಪಡ್ಲಾ ಸರ್ ಪರಿಚಯವಾದರು. ಅವತ್ತು 4ನೇ ನಂಬರಿನ MPCM ಕೌಂಟರ್ ಕೆಲಸ ಮಾಡಿದೆ. ಪೋಸ್ಟ್ ಮಾಸ್ಟರ್ ಆಗಿ ಹದಡಿ ಸರ್ ಇದ್ದರು. 

        ಬರೆಯುತ್ತ ಸಾಗಿದರೆ ನಿನ್ನೆಯವರೆಗೂ ಬರೆಯಬೇಕು ಎಂದೆನಿಸುತ್ತದೆ. ಸಧ್ಯಕ್ಕೆ ಇಷ್ಟು ಸಾಕು. 

Sunday 14 March 2021

ಮೋಸ ಹೋದ ಕಣ್ಣು


         "ಮಾನವನ ಮನಸ್ಸು ಸ್ಪರ್ಶಿಸಲಾಗದ ಅನುಭವ ಮಾತ್ರಕ್ಕೆ ದಕ್ಕಬಲ್ಲ ಗಾಳಿ ಇದ್ದಂತೆ."


        ಸರಕಾರಿ ಹಿರಿಯ ಕನ್ನಡ ಪ್ರಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವಾಗ ವರ್ಗ ಗುರುಗಳಾದ ಶ್ರೀ NS ಪಂಗಣ್ಣವರ ಗುರುಗಳು ಒಂದು ದಿನ ತಮ್ಮ ಇಡೀ ವರ್ಗ ವಿದ್ಯಾರ್ಥಿಗಳ ಮೇಲೆ ಸಿಟ್ಟಾಗಿದ್ದರು. ಕಾರಣ, ಪಕ್ಕದ ಕೊನೆಯಲ್ಲಿನ ವರ್ಗದ ನಿರ್ವಹಣೆ ತಮಗಿದ್ದರಿಂದಾಗಿ ಆ ವಿದ್ಯಾರ್ಥಿಗಳಿಗೆ ಬರವಣಿಗೆಯ ಕೆಲಸ ಕೊಟ್ಟು ಬರುವಷ್ಟರಲ್ಲಿ 6ನೇ ವರ್ಗದ ವಿದ್ಯಾರ್ಥಿಗಳು ಶಾಲೆಯ ಹೆಂಚು ಕಿತ್ತು, ಹಾರಿ ಹೋಗುವಂತೆ ಗದ್ದಲ ಮಾಡುತ್ತಿದ್ದರು !!


         ಗುರುಗಳು ಬಂದು ಮನಸೋ ಇಚ್ಛೆ ಬೈದರು. ಅಷ್ಟೆಲ್ಲ ಬೈಗುಳಗಳಲ್ಲಿ "ಶಾಲೆ ಒಳಗ ಮಾಸ್ತರ್ ಹೇಳಿದ್ ಮಾತಿಗೆ ಬೆಲೆ ಕೊಡಬೇಕು ಅಂತ ಮನಸ್ಸು ಹೇಳಲಿಲ್ಲಾ ನಿಮಗ್ ?... ಮನಸ್ಸು ಎಲ್ಲೈತಿ ಅಂತರ ಗೊತ್ತೈತಿಲ್ಲೋ ನಿಮಗ್ ?... ಏ ಸತ್ಯಾ ಎಲ್ಲಿ ಐತ್ಯೋ ಮನಸ್ಸು" ಎಂದದ್ದು ಇಂದಿಗೂ ಆಗಾಗ ತಲೆಯಲ್ಲಿ ಅನ್ನುವುದಕ್ಕಿಂತ ಮನಸ್ಸಿನಲ್ಲಿ ತನ್ನ ರೌದ್ರತೆಯನ್ನು ಪ್ರಕಟಿಸುತ್ತದೆ.


           ಉಸಿರಾಡಲು ಗಾಳಿ ಹೇಗೆ ಎಲ್ಲರಿಗೂ ಅತ್ಯವಶ್ಯವೋ ಹಾಗೆಯೇ ಮನಸ್ಸು ಎಂಬುದು ಅವಶ್ಯ. 'ಮನಸ್ಸಿಲ್ಲದೇ' ಯಾವುದು ಪರಿಪೂರ್ಣ ಅಲ್ಲ. ಸೃಷ್ಠಿಯಲ್ಲಿರುವ ಪ್ರತಿಯೊಂದು ಜೀವಿಗೂ ಮನಸ್ಸಿದೆ. "ಬುದ್ಧಿ"ವಂತನೆನಿಸಿಕೊಂಡ  ಮಾನವನಿಗೆ ಈ ಮನಸ್ಸಿನ ಅನುಭೂತಿ ಬೇರೆಲ್ಲ ಜೀವ-ಜಂತುಗಳಿಗೆ ಹೋಲಿಸಿದರೆ  ಸ್ಪಷ್ಟವಾಗಿರುತ್ತದೆ. ಹಾಗಾಗಿಯೇ ಮನುಷ್ಯ ಇಂದಿನ ಆಧುನಿಕ ಜಗದಲ್ಲಿ "ಅಸಾಧ್ಯ" ಎನಿಸಿಕೊಳ್ಳುವ ಯಾವುದನ್ನೂ "ಸಾಧ್ಯ"ವಾಗುಸುತ್ತಲೇ ಇದ್ದಾನೆ. ಇದರೊಳಗೆ ಬುದ್ಧಿಯ ವಿಚಾರ ಮನಸ್ಸಿನ ಇಂಗಿತದ ಪ್ರಭಾವ ಬಹುವಾಗುರುತ್ತದೆ. ನಮ್ಮಲ್ಲಿರುವ ಮನಸ್ಸು ಇಷ್ಟವಾದುದನ್ನು ಪಡೆಯಲು ಬೆಷರತ್ತಾಗಿ ಕಾರ್ಯಪ್ರವೃತ್ತವಾದರೆ; ಬುದ್ಧಿ ಅದನ್ನು ಪಡೆಯಲು ನಾನು ಅರ್ಹನೆ ? ಅನರ್ಹನೆ ? ಅದು ಏನು ? ಅದರ ಅವಶ್ಯಕತೆ ನನಗೆಷ್ಟು ? ಇತ್ಯಾದಿ ಇತ್ಯಾದಿಯಾಗಿ ವಿವೇಚನೆಗೆ ಒಳಪಡಿಸಿ ಮಹತ್ವದ ಆಧಾರದ ಮೇಲೆ ಬೇಕು-ಬೇಡವನ್ನು ನಿರ್ಧರಿಸುತ್ತದೆ. ಮನುಷ್ಯನ ಮನಸ್ಸು ತನಗೆ ಇಷ್ಟವಾದುವೆಲ್ಲವನ್ನೂ ಪಡೆದುಕೊಳ್ಳಲು ಸದಾ ಹಾತೊರೆಯುತ್ತಿರುತ್ತದೆ. ಹಾಗಾಗಿ, ಮನಸ್ಸಿನಿಂದ ಮಾಡುವುದಕ್ಕೂ, ಬುದ್ಧಿವಂತಿಕೆಯಿಂದ ಮಾಡುವುದಕ್ಕೂ ವ್ಯತ್ಯಾಸವಿದೆ. ಮನಸ್ಸು ಇಷ್ಟವಾದುದನ್ನು ಪಡೆಯಲು ಪರಾಪರ ಯೋಚಿಸದೆ, ಬುದ್ಧಿಯ ಸಲಹೆ ಪಡೆಯದೇ ತನ್ನ ಅಧೀನಕ್ಕೊಳಪಟ್ಟ ಪಂಚೇಂದ್ರಿಯಗಳಿಗೆ  ಆಜ್ಞೆಯನ್ನು ನೀಡಿಯೇ ಬಿಡುತ್ತದೆ. ಮನಸ್ಸಿನ ಈ ಪ್ರವೃತ್ತಿಯೇ ಕೆಲವೊಮ್ಮೆ ಅಪಾಯದ ಅಂಚಿಗೆ ತಂದು ನಿಲ್ಲಿಸಿ ಬಿಡುತ್ತವೆ.


    ಮನಸ್ಸು ಎಷ್ಟು ಹಪಹಪಿ ಎಂದರೆ, ಅದಕ್ಕೆ ಕಿಂಚಿತ್ ಸಮಾಧಾನ ಇರದು. ಆಗಿಂದಾಗಲೇ ಹೇಗಾದರೂ ಸರಿಯೇ ಪಡೆದೇ ತೀರಬೇಕು ಎಂದು ಮಾಡಿಸಿಯೇ ಬಿಡುತ್ತದೆ. ಈ ರೀತಿಯ ಮನಸ್ಸಿನ ತರಾತುರಿಯ ಆಜ್ಞೆಯಿಂದ ನಮ್ಮ ಪಂಚೇಂದ್ರಿಯಗಳೂ ಮೋಸ ಹೋಗುತ್ತವೆ ! ಹೌದು, ಪಂಚೇಂದ್ರಿಯಗಳು ಸುಮಾರು ಸಲ ಮೋಸ ಹೋಗುತ್ತವೆ. ಯೋಚಿಸಿ ನೋಡಿ : ನಿಮ್ಮ ಮನಸ್ಸು ಯಾವುದೋ ಒಂದನ್ನು ಗಹಣವಾಗಿ ಯೋಚಿಸುತ್ತಿರುತ್ತದೆ, ಆಗ ನಿಮ್ಮ ಎದುರಿಗೆ ಏನೋ ಒಂದು ಘಟನೆ ಅಥವಾ ಚಿತ್ರ ಇಲ್ಲವೇ ಎಲ್ಲೋ ಯಾರೋ ಬರೆದ ಯಾವುದೋ ಸಾಲು ನಿಮ್ಮ ಕಣ್ಣಿಗೆ ಬೀಳುತ್ತದೆ. ತಕ್ಷಣ ನಿಮ್ಮ ಮನಸ್ಸು ತಾನು ಗಹಣವಾಗಿ ಯೋಚಿಸುತ್ತಿರುವ ವಿಷಯ ವಸ್ತುವಿನ ಸಹ-ಸಂಬಂಧಿತವಾಗಿ ಅಥವಾ ಅನುಗುಣವಾಗಿ ತಿಳಿದುಕೊಂಡು ಅದನ್ನು ತನ್ನಿಷ್ಟದಂತೆ ಗ್ರಹಿಸಿಕೊಂಡು ಸ್ಮೃತಿಯಲ್ಲಿ ಎಚ್ಚೊತ್ತಿ, ಸೂಕ್ತ ಪಂಚೇಂದ್ರಿಯಕ್ಕೆ ಆಜ್ಞೆಯನ್ನು ನೀಡುತ್ತದೆ. ವಾಸ್ತವದಲ್ಲಿ, ಆ ವಸ್ತು, ವಿಷಯ, ಘಟನೆ ಬೇರೆಯೇ ಇದ್ದರೂ ಮನಸ್ಸು ತನ್ನಿಷ್ಟದಂತೆ ಗ್ರಹಿಸಿಕೊಂಡು ಮುಂದುವರೆದಿರುತ್ತದೆ ! ಹೀಗೆ ಯಾವುದೇ ಆದರೂ ಅದರಲ್ಲಿ 1. ತೋರಿಕೆ, 2. ಗ್ರಹಿಕೆ ಮತ್ತು 3. ವಾಸ್ತವಿಕತೆ. ಎಂಬು ಮೂರು ಮುಖ್ಯ ಆಯಾಮಗಳಿರುತ್ತವೆ.


     ಇದಕ್ಕೆ ಪೂರಕವಾದ ಒಂದೆರಡು ಉದಾಹರಣೆಗಳನ್ನು ನೋಡೋಣ:


ನಾವು ಬಳಸುವ ವಾಟ್ಸಾಪ್ ಸ್ಟೇಟಸ್.

      ಪ್ರತಿಯೊಬ್ಬರು ವಾಟ್ಸಾಪ್ ಸ್ಟೇಟಸ್ ಇಡುತ್ತಾರೆ; ಅದು ಆಗಿನ ಅವರ ಮನಸ್ಥಿತಿ ತಕ್ಕಂತೆ. ಆದರೆ ಅದನ್ನು ನೋಡುವ ಜನರು ತಮ್ಮ ಮನೋ ಸಾಮರ್ಥ್ಯದ ಮೇಲೆ ಗ್ರಹಿಸಿಕೊಂಡು ಅದಕ್ಕೊಂದು ಕಾಮೆಂಟ್ ಹಾಕುತ್ತಾರೆ. ಸ್ಟೇಟಸ್ ಹಾಕಿದಾತ ತನ್ನ ಕಾಂಟ್ಯಾಕ್ಟ್ ಲಿಸ್ಟ್ ಒಳಗಿನ ಪರಮಾಪ್ತರು ತನ್ನ ಆ ಸ್ಟೇಟಸ್ ಅನ್ನು ಹೇಗೆ ಸ್ವೀಕರಿಸಿದರು, ಗ್ರಹಿಸಿದರು, ಊಹಿಸಿಕೊಂಡರು ಎಂಬುದನ್ನು ತಿಳಿದು ನಗಬಹುದು ಇಲ್ಲ ಆಶ್ಚರ್ಯಚಕಿತನಾಗಬಹುದು ! 

        ಇದು ನನ್ನ ಸ್ವಂತದ ಅನುಭವ. ನನ್ನ ವಾಟ್ಸಾಪ್ ಸ್ಟೇಟಸ್ ಗೆ ನಾನು ಆವಾಗಾವಾಗ ಕವನಗಳನ್ನು ಬರೆದು ಹಾಕುತ್ತಿರುತ್ತೇನೆ. ಅದನ್ನು ನೋಡಿದವರಲ್ಲಿ ಒಂದಷ್ಟು ಜನ ಕೆಲ ಸಾಲುಗಳು ತಮಗೆಂದೇ ಬರೆದಿರುವನು ಎಂದು ಗ್ರಹಿಸಿಕೊಂಡು ಅದಕ್ಕೊಂದು ಪ್ರತಿಕ್ರಿಯೆ ನೀಡುತ್ತಾರೆ. ಮತ್ತೆ ಕೆಲವರು ನನ್ನ ಕವಿತೆಯ ವಸ್ತು ವಿಷಯದಲ್ಲಿ ತಮ್ಮ ಆರಾಧ್ಯವೊಂದು ಇದ್ದುದನ್ನು ಗ್ರಹಿಸಿ ಮೆಚ್ಚುಗೆ ವ್ಯಕಗಪಡಿಸುತ್ತಾರೆ. ಆದರೆ ಆ ಸಾಲುಗಳನ್ನು ಬರೆಯುವ ಆ ಘಳಿಗೆಯಲ್ಲಿ ಈ ಜನರು ಬೆಳಕು ಚೆಲ್ಲುವ ಯಾವ ಅಂಶಗಳೂ ಕವಿಯ ತಲೆಯಲ್ಲಿರುವುದೇ ಇಲ್ಲ. ಅವನು ಅದೊಂದು ಬೇರೆಯದೇ ಆದ ದೃಷ್ಟಿಯಲ್ಲಿ ನೋಡಿ ಸೆರೆ ಹಿಡಿದಿರುತ್ತಾನೆ ಅಷ್ಟೇ. ಹೀಗೆ ಬರೆದ ವಾಸ್ತವ ಬೇರೆ, ಜನರಿಗೆ ತೋರಿದ್ದು ಬೇರೆ ಮತ್ತು ಜನರು ಅದನ್ನು ಗ್ರಹಿಸಿದ್ದು ಬೇರೆಯಾಗಿರುತ್ತದೆ.


            ಮೊನ್ನೆ ಒಂದು ದಿನ ನಾವು ನಾಲ್ಕು ಜನ ಸ್ನೇಹಿತರು ಒಂದು ಕಡೆ ಟೀ ಕುಡಿಯಲು ಕಲೆತಿದ್ದೆವು. ಅಲ್ಲಿ ಒಂದು ಹಾಳೆಯ ಮೇಲೆ 'INACTIVE' ಎಂದು ಬರೆದದ್ದು ಗೊತ್ತಾಗುವುದಕ್ಕೂ ಮೊದಲು ನಾನು ಅದನ್ನು "INCENTIVE"  ಎಂದು ಓದಿಬಿಟ್ಟಿದ್ದೆ. ಇದಕ್ಕೆ ಕಾರಣ, ನಾನು ಅಲ್ಲಿ ಸೇರುವುದಕ್ಕೂ ಮೊದಲು ಹಳ್ಳಿಯ post officeಲ್ಲಿ ಪೋಸ್ಟ್ ಮಾಸ್ತರರು ಕೆಲ ವರ್ಗದ ಅಕೌಂಟ್ ಒಪೆನ್ ಮಾಡಿದರೆ ಪಡೆಯುವ incentive ಬಗೆಗೆ ಲೆಕ್ಕಾಚಾರ ಹಾಕುತ್ತಿದ್ದೆ. ಜೊತೆಗಿದ್ದ ಸ್ನೇಹಿತ ಪ್ರವೀಣ್ 'ಸರ್ ನೀವು ತಪ್ಪು ತಿಳ್ಕೊಂಡ್ರಿ.. ಅದು 'INCENTIVE" ಅಲ್ಲಾ "INACTIVE"..' ಎಂದರು. ಕಣ್ಣು ಉಜ್ಜಿಕೊಂಡು ಮತ್ತೊಮ್ಮೆ ನೋಡಿದಾಗ ಗೊತ್ತಾಯ್ತು ಅದು  'INCENTIVE" ಅಲ್ಲಾ "INACTIVE".. ಎಂದು. ಅದಕ್ಕೆ ಪ್ರವೀಣ್  "ಮೋಸ ಹೋದ ಕಣ್ಣು" ಎಂದು ಸರಿಯಾದ ಒಕ್ಕಣೆ ನೀಡಿದ. ಇಲ್ಲಿ ಕಣ್ಣು ನಿಜವಾಗಿಯೂ ಮನಸ್ಸಿನ ಬೆನ್ನುಬಿದ್ದು ಮೋಸ ಹೋಗಿತ್ತು. ಸ್ನೇಹಿತ ಅದರ ವಿಮರ್ಶೆ ಮಾಡಿದಾಗಲೇ ಮನಸ್ಸು ಅದನ್ನು ಬುದ್ಧಿಗೆ ಕಳುಹಿಸಿ ಪರಾಮರ್ಶಿಸಿಕೊಂಡು ತನ್ನ ದುಡುಕು ಸ್ವಭಾವವನ್ನು ಹೀಗಳೆಯಿತು. 


            ಮನುಷ್ಯ ಸದಾ ತನ್ನ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸಬೇಕು ಎಂಬುದು ಇದೆ ಕಾರಣಕ್ಕೆ. ಯಾಕೆಂದರೆ ಮನಸ್ಸು  ಸಂಚಾರಿ, ಚಂಚಲ. ಈ ತರದ ಚಂಚಲತೆಯಿಂದ ಕೂಡಿದ ಮನಸ್ಸಿಗೆ ಸ್ಥಿರತೆ ಮತ್ತು ಏಕಾಗ್ರತೆ ಬಹಳ ಕಡಿಮೆಯಿರುತ್ತದೆ ಮತ್ತು ದುಡುಕುವುದು. ಏಕಾಗ್ರತೆ ಕೊರತೆ ಇದ್ದಲ್ಲಿ ಯಾವುದೇ ಕೆಲಸ-ಕಾರ್ಯ, ಕಲಿಕೆ, ಬೋಧನೆ, ಸಾಧನೆ ಸಾಧ್ಯವಾಗದು. ಸವಾರನು ಹೇಗೆ ಲಗಾಮು ಎಳೆದು ನಿಲ್ಲಿಸುವ ಮೂಲಕ ಕುದುರೆಯನ್ನು ನಿಯಂತ್ರಿಸುವನೋ ಹಾಗೆ ಏಕಾಗ್ರತೆಯಿಂದಿರುವ ಮನಸ್ಸು ಸದಾ ಬುದ್ಧಿಯ ಅಧೀನದಲ್ಲಿ ಕಾರ್ಯ ನಿರ್ವಹಿಸುವಂತೆ ನಾವು ನಿಯಂತ್ರಿಸಬೇಕು. ಬುದ್ಧಿಯ ಅಧೀನದಲ್ಲಿರುವ ಮನಸ್ಸು ಶಾಂತವಾಗಿರುತ್ತದೆ. ಶಾಂತವಾದ ಮನಸ್ಸಿನಲ್ಲಿ ಶುದ್ಧವಾದ ವಿಚಾರಗಳು ಜನ್ಮ ತಳೆಯುತ್ತವೆ. ಶುದ್ಧ ಮತ್ತು ಶ್ರೇಷ್ಠ ವಿಚಾರವುಳ್ಳ ಮನುಷ್ಯನ ವ್ಯಕ್ತಿತ್ವ ಉನ್ನತ ಮಟ್ಟದಲ್ಲಿರುತ್ತದೆ.


          

 

Thursday 9 April 2020

ಯುದ್ಧ ಎಂದರೆ...





ಖಡ್ಗ, ಭರ್ಚಿ, ತೋಪುಗಳ
ವರ್ಷಧಾರೆಯ ಸದ್ದಲ್ಲ;
ಕೆಮ್ಮು, ಸೀನುವುದು,
ಗಂಟಲು ಹಿಡಿದುಕೊಂಡು
ಅರಚಾಡಿ ಸಾಯುವುದನ್ನೂ
ಈ ಯುದ್ಧ ಆವರಿಸಿಕೊಂಡಿದೆ !!

ಮಿಗ್, ರಫೆಲ್,ಎಫ್-ಸಿಕ್ಸ್ಟೀನುಗಳ
ಹಾರಾಟವೇನು ಬಾಣಲಿಲ್ಲ;
ಬಾಂಬು, ಬುಲ್ಲೆಟ್ಟುಗಳು
ಹೃದಯ ಕಂಪಿಸುವ ಧ್ವನಿಯಿಲ್ಲ;
AK47-56,ಸ್ನಿಪರ್ , ಟ್ಯಾಂಕರುಗಳು
ಇಲ್ಲೆಲ್ಲಿಯೂ ಕಾಣ ಸಿಗುವುದಿಲ್ಲ.
ಆದರೆ..,
ಯುದ್ಧ ಶುರುವಾಗಿ ಜಗದಾದ್ಯಂತ
ಮರಣ ಮೃದಂಗ ಬಾರಿಸಿದೆ !!

ಗಡಿ-ಗಡಿಗಳಲ್ಲಿ ಗನ್ನು ಹೆಗಲೇರಿಸಿಕೊಂಡು
ನಿಂತವರೆಲ್ಲ ರಕ್ಷಣಾ ಸೈನಿಕರೆಂದು
ಹೇಗೆ ಹೇಳಲಿ...?

ಗುಂಡಿನೇಟಿನ ಗಾಯದಂತೆ
ಮಾಸ್ಕ್ ಧರಿಸಿ ಮುಖ ಗಾಯವಾಗಿದೆ,
ಗ್ಲೌಸ್ ಹಾಕಿ, ಹಾಕಿ ಕೈ ಸುಲಿದಿದೆ !
"ವೈದ್ಯೋ ನಾರಾಯಣ ಹರಿ.."

ಸದಾ ಸಿದ್ಧ ಖಾಕಿ ಪಡೆ
ಲಾಠಿ-ಬೂಟು-ಬಂದೂಕಿನ ನಡೆ;
ಅಗೋಚರ ವೈರಿಯಿಂದ ಅಮಾಯಕರ
ರಕ್ಷಣೆಗೆ ಕಟಿಬದ್ಧ ಲಾಠಿ- ಖಾಕಿ ಕರ.

'ಅದೆಲ್ಲಿಯೂ ಕಾಣ ಸಿಗನು ವೈರಿ,
ಹುಡುಕಿ ಹುಡುಕಿ ವಿಷ ಹಾಕುತ್ತಿರುವಿರಿ..'
ಶಸ್ತ್ರಾಸ್ತ್ರಗಳ ಹಿಡಿದು ನಡೆದಿರುವ
ನೈರ್ಮಲ್ಯ ಕಾರ್ಮಿಕ ಸೇನೆಗೆ ಮುಗಿವೆ ಕರವ.

ಗುಂಡಿನ ಸದ್ದಿಲ್ಲದ ಯುದ್ಧ ನಡೆಯುತ್ತಿದೆ !!!
ಯೋಧರಿಲ್ಲಿ - ವೈದ್ಯರು, ಪೊಲೀಸರು, ಸ್ವಚ್ಛತಾ ಕರ್ಮಿಗಳು.

ಎಲ್ಲಾ ಯುದ್ಧದ ಪರಿಣಾಮ ಮಾತ್ರ ಒಂದೇ
"ಮರಣ ಜಾತ್ರೆ..!  ಹೆಣಗಳ ಮೆರವಣಿಗೆ...!!"

  ✍ ಸತೀಶ್ ಉ ನಡಗಡ್ಡಿ

Sunday 29 March 2020

ಪ್ರವಾಸ


ಬಾನಲ್ಲಿ ಸೂರ್ಯ ಮುಳುಗುತ್ತಿದ್ದಂತೆ ನಮ್ಮೊಳಗೊಂದು ಸೂರ್ಯೋದಯ ಆರಂಭವಾಗಿತ್ತು. ಆ ಸೂರ್ಯೋದಯದ ಖುಷಿಗಿಂತ ನಮಗೆ ನಮ್ಮಲ್ಲಿ ಅರಿವು-ಮರುವು ಜಾಸ್ತಿಯಾಗಿತ್ತು.
ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಬ್ಯಾಗಿನೊಳಗೆ ಹಾಕಿ ಜಿಪ್ ಎಳೆದು, ಆ ಕಡೆಯಿಂದ ಈ ಕಡೆಯಿಂದ ಬಂದು ಮತ್ತೆ ಜಿಪ್ ತೆಗೆದು "ಮತ್ತ ಏನಾರ ಬಿಟ್ಟೆನಾ ?" ಎಂದು ಮನದಲ್ಲೇ ಪ್ರಶ್ನಿಸಿಕೊಳ್ಳುತ್ತ ಮೀಸೆಯೊಳಗೆ ನಕ್ಕು, ಶಿಸೆಯೊಳಗಿನ ನೀರು ಗುಟುಕಿಸುವಷ್ಟರಲ್ಲಿ ಸಮಯ 5-10 ಆಗಿತ್ತು. ನಮ್ಮ BCM ಹಾಸ್ಟೆಲ್ ಬಸ್ ಹಿಂತಿರುಗಿ ಹೊರಟಿತು ಎನ್ನುವಷ್ಟರಲ್ಲಿ ಓಡಿ ಓಡಿ ಹೋಗಿ ಯಾವುದೇ ಆಯಾಸವಿಲ್ಲದೇ ಬಸ್ ಹಿಡಿದುಕೊಂಡೆವು. ಯಾಕೆ ನಮಗೆ ಆಯಾಸವಾಗಿರಲಿಲ್ಲ ಎಂದರೆ ನಾವು ಹೊರಟಿದ್ದು ತೀರ್ಥಯಾತ್ರೆಗಲ್ಲ "ಶೈಕ್ಷಣಿಕ ಪ್ರವಾಸ" ಕ್ಕೆ. ಪ್ರವಾಸದ ಗುಂಗಿನಲ್ಲಿ ಇಂಥಹ ಆಯಾಸವೂ ನಿರಾಯಸವೇ.

7 ಗಂಟೆಗೆ DIET ಎಂಬ ದೇಗುಲ ತಲುಪಿದೆವು. ಅಲ್ಲಿದ್ದ ಗೆಳೆಯರ ಬಳಗವೂ ನಮ್ಮಷ್ಟೇ ಕಾತುರದಿಂದ ಕಾಯುತ್ತಿದ್ದರು. ಎಲ್ಲರೂ 8.30ಕ್ಕೆ ಊಟ ಮುಗಿಯುತ್ತಿದ್ದಂತೆ KSRTC ಬಸ್ 'ಪಾಂವ್ ಪಾಂವ್...' ಎಂದು ಸದ್ದು ಮಾಡಿತು. "ಎಲ್ಲರೊಳಗೊಂದಾಗು ಮಂಕುತಿಮ್ಮ " ಎಂಬ ಕವಿ ಡಿವಿಜಿಯವರ ಮಾತಿನಂತೆ ನಾನು "ಶಂಭೋ ಶಂಕರ " ಎಂದು ಪ್ರವಾಸದ ತೇರನ್ನು ಹತ್ತಿದೆ.

ನಾವು 44 ಜನ ಮತ್ತು ನಮ್ಮೊಂದಿಗೆ ನಮ್ಮ ಹಿರಿಯರು 6 ಜನ ಹಾಗೂ 3 ಜನ ಉಪನ್ಯಾಸಕರು, ಇಬ್ಬರು ಉಪನ್ಯಾಸಕಿಯರು ಮತ್ತು ಒಬ್ಬ ಬಸ್ ಚಾಲಕ, ಒಟ್ಟು 56 ಜನ. ಸರಿಯಾಗಿ ರಾತ್ರಿ 9 ಗಂಟೆಗೆ ವರ್ಗ ಶಿಕ್ಷಕರಾದ ಶ್ರೀ A N ಪ್ಯಾಟಿಯವರು ಮತ್ತು PSDE ವಿಭಾಗದ ಮುಖ್ಯಸ್ಥರಾದ ಶ್ರೀ M N ದಂಡಿನ ಗುರುಗಳು ಶುಭ ಹಾರೈಸಿದರು.

ಮೊದ ಮೊದಲು ಎಲ್ಲರೂ ಸುಮ್ಮನೆ ಕುಳಿತಿದ್ದೆವು ಆದರೂ ನಮ್ಮ-ನಮ್ಮಲ್ಲೇ ಮಿತಿ ಇರಲಿಲ್ಲ. ಬೆಳಗವಿಯಿಂದ ಕಿತ್ತೂರು ದಾಟಿಕೊಂಡು 55 ಕಿಮೀ. ದೂರ 'ಭಾರತ್ ಪ್ಯಾಲೇಸ್' ಧಾಬಾ ಗೆ ಬಸ್ ನಿಂತಿತು. ಇಚ್ಛಿಸಿದವರು ಚಾ ಕುಡಿದರೆ, ಮಿಕ್ಕವರು ಟ್ಯಾಂಕ್ ಖಾಲಿ ಮಾಡಿದರು. 10 ನಿಮಿಷದ ವಿರಾಮ ಮುಗಿದು ಮತ್ತೆ ಪಯಣ ಆರಂಭವಾಯ್ತು. ಎಲ್ಲರೂ ಮಲಗಿದ್ದರು, ಕೆಲವೊಬ್ಬರು ಎಚ್ಚರವಿದ್ದರು.

ಬೆಳಗಿನ 4 ಗಂಟೆಗೆ ಬಸ್ ಕಡೂರು ಬಸ್ ನಿಲ್ದಾಣದಲ್ಲಿ ನಿಂತಿತ್ತು. ಎಲ್ಲರೂ ಇಳಿದು ಅಲೋಇಯೇ ನಿತ್ಯ ಕರ್ಮಾಚರಣೆಗಳನ್ನು ಮುಗಿಸುವಷ್ಟರಲ್ಲಿ 7 ಗಂಟೆ ಆಗಿತ್ತು. ತಡಮಾಡದೇ ಮೈಸೂರಿನತ್ತ ಹೊರಟೆವು. ಈ ಕಡೂರಿಗೆ ಬರುವಷ್ಟರಲ್ಲಿ ಹಲವು ಘಾಟ್ ಗಳನ್ನು ದಾಟಿದ್ದೆವು, ಆ ಕಗ್ಗತ್ತಲಲ್ಲಿ ನೋಡದಿದ್ದರೂ ದೇಹ ಅನುಭವಿಸಿತ್ತು. ಮುಂದೆಲ್ಲ ಹಸಿರು ಹಬ್ಬ ತಳಿರು ತೋರಣದಂತೆ, ಸಲಾಗಿ ನಿಂತ ಮರಗಳು, ಚಕ್ಕೆ-ಚಕ್ಕೆ ಗದ್ದೆಗಳು, ಬೆಟ್ಟ-ಗುಡ್ಡಗಳು, ಹೊಸ ಪ್ರದೇಶ, ಜನರ ವಿಭಿನ್ನ ಮಾತಿನ ಶೈಲಿ. ನೋಡಿ ಮೋಜು ಮಾಡಲು ಹಣ ಕೋಡಬೇಕೇ? ಇಲ್ಲ.

ಹೊತ್ತು ಏರುವುದರಲ್ಲಿ ಮೈಸೂರಿನ DIET ಕಾಲೇಜಿನಲ್ಲಿದ್ದೆವು. ಎಲ್ಲರೂ ತಮ್ಮ ತಮ್ಮ ಬ್ಯಾಗುಗಳನ್ನು ತೆಗೆದುಕೊಂಡು ರೂಮಿಗೆ ಹೋಗಿ ''ಫ್ರೆಶ್ ಆಗಾಕ್ ಅರ್ಧ ತಾಸು...." ಗುರುಗಳಿಂದ ಸಮಯ ದೊರಕಿತು. ಅದರಂತೆ ಎಲ್ಲರೂ ಫ್ರೆಶ್ ಆಗಿ, ತಾಯಿ ಚಾಮುಂದಿಯ ದರ್ಶನಕ್ಕೆ ಹೋದೆವು. ಬಸ್ ಬೆಟ್ಟವನ್ನು ಹತ್ತುತ್ತಿದ್ದಂತೆ ಎಲ್ಲರೂ ಮೈಸೂರಿನ ಉದ್ದಗಲ ನೋಡಿ ಸಂತಸ ಪಟ್ಟೆವು. 12 ಗಂಟೆಗೆ ಬಸ್ ದೇವಸ್ಥಾನ ತಲುಪಿತು.

" ಮೇಲೆ ಸೂರ್ಯನ ಬಿರು-ಬಿರು ಬಿಸಿಲು,
ಕೆಳಗೆ ಚುರು-ಚುರು ಟಾರ್ ರೋಡ್
ಮೈಗೆಲ್ಲ ಬಿಸಿಲ ಧಗೆಯಂತೆ
ಎದೆಯಲ್ಲಿ ಗೆಳತಿಯ ನೆನಪಿನ ಹಾಗೆ..."

ಹೀಗೆ ಮಂಜುಗಡ್ಡೆಯ ಮೇಲೆ ನಡೆದವರಂತೆ ನಾನೂ ಹೊರಟಿದ್ದೆ. ಉಳಿದವರು ನೆರಳು, ತಂಪು ಮರಳಿನ ಆಸರೆ ಪಡೆದರು ನಂತರ ಸರದಿ ಸಾಲಿನಲ್ಲಿ ನಿಂತು , ದೇವಿಯ ದರ್ಶನ ಪಡೆದು, ಫೋಟೋ ಗೆ ಪೋಸ್ ನೀಡಿ, ಸ್ವಲ್ಪ ಸಮಯ ಅಲ್ಲಿಯೇ ಕಳೆದು ಬಸ್ಸಿನತ್ತ ಹೆಜ್ಜೆ ಹಾಕಿ, ನಂದಿಶನನ್ನು ಭೇಟಿ ಮಾಡಿದೆವು. ಅಲ್ಲಿಂದ ನೇರವಾಗಿ ಪ್ರಾಣಿ ಸಂಗ್ರಹಾಲಯಕ್ಕೆ ಪ್ರಾಣಿಗಳ ಹಿಂಡು ಹೊರಟು, ಪ್ರವೇಶ ಪಡೆದು ಅವನ್ನು ನೋಡಿ ನಾವು, ನಮ್ಮನ್ನು ನೋಡಿ ಅವು ಹರ್ಷವಾಯಿತು.

ಬಿಸಿಲ ಬೇಗೆಗೆ ಬಾಯಿ, ಗಂಟಲು ಒಣಗಿ, ಸಿಕ್ಕ ನೀರಿಗೆ ಹೋರಾಡಿ "ಏನಗಲಿ ಮುಂದೆ ಸಾಗು ನೀ...." ಎಂದು ನಡೆದೆವು. ಬಿಳಿ ರಂಗಿನ ಮಯೂರಿ, ಬಣ್ಣ ಬಣ್ಣದ ಗಿಳಿ, ಗುಬ್ಬಿ, ಕಾಡು ಕೋಳಿ, ಜಿಂಕೆ, ಜಿರಾಫೆ, ಹುಲಿ, ಸಿಂಹ, ತೋಳ, ಕರಡಿ, ಕಾಡ್ಹಂದಿ , ಕಾಡು ಪಾಪ, ಮಂಗ, ಗೋರಿಲ್ಲ ಚಿಂಪಾಂಜೀ, ಹಾವು-ಹೆಬ್ಬಾವು, ಮೊಸಳೆ, ಅಮೆ, ಕಪ್ಪೆ ಒಂದೋ ಎರಡೋ ನಮ್ಮನ್ನೂ ಸೇರಿ ತರ ತರದ ಪ್ರಾಣಿಗಳಿದ್ದವು, ಸಮಯ 3 ಗಂಟೆ ಆಗಿತ್ತು.

ಮಧ್ಯಾಹ್ನದ ಅಲ್ಪಾಹಾರ ಮುಗಿಸಿ, ಅರಸರ ಮನೆ ಅರಮನೆಯಲ್ಲಿ ಆಳರಸರಂತೆ ಪ್ರವೇಶಿಸಿದೆವು; ರಾಜನಿಗೆ ರಾಣಿ ಇರಲಿಲ್ಲ, ರಾಣಿಗೆ ರಾಜ ಇರಲಿಲ್ಲ.

ಬಾಗಿಲುಗಳೆಲ್ಲ ಗಂಧದ ಮರದ ಬಳಕೆ, ಗೋಡೆಗಳಿಗೆಲ್ಲ ಚಿತ್ರ ವಿನ್ಯಾಸ: ಅದು ಬರಿಯ ಅರಮನೆಯಲ್ಲ ಅಗಣಿತ ಅಳಿಸಲಾಗದ ಕಲೆಗಳ ಅಗರದ ಮನೆ. ಅರಸರ ದಿನ ಬಳಕೆಯ ವಸ್ತುಗಳು, ಯುದ್ಧೋಪಕರಣಗಳು, ಆಟಿಕೆಗಳು, ಅತ್ಯಪರೂಪದ ವಸ್ತುಗಳಿದ್ದವು. ಸಮಯ 5 ಗಂಟೆಯಾಗಿದ್ದು ಗೊತ್ತಾಗಿ ತಟ್ಟನೆ ಬಸ್ಸನ್ನೇರಿ ಹೊರಟೆವು. ಎಲ್ಲಿಗೆ ? ಸರ್ M ವಿಶ್ವೇಶ್ವರಯ್ಯನವರ ಅತ್ಯದ್ಭುತ ತಂತ್ರಗರಿಕೆಯ ಕಟ್ಟಡ ನೋಡಲು.

KRS. ಅಂದ್ರೆ, ಕೃಷ್ಣ ರಾಜ ಸಾಗರ. ಇದನ್ನು ಕನ್ನಡದ ಜೀವನದಿ ಎಂದೂ, ದಕ್ಷಿಣ ಭಾರತದ ಗಂಗಾ ನದಿ ಎಂದೂ ಕರೆಯಲ್ಪಡುವ ಕಾವೇರಿ ನದಿಗೆ ಕಟ್ಟಲಾಗಿದೆ. 6 ಗಂಟೆಗೆ KRS ತಲುಪಿದೆವು, ದಿನವಿಡೀ ನಡೆದು ಆಯಾಸವಾದರೂ ಓಡೋಡಿ ನುಗ್ಗಿ, ತಂಪು ಪಾನೀಯ ಜಗ್ಗಿ ಹೋಗುವಷ್ಟರಲ್ಲಿ ಸಮಯ 7 ಗಂಟೆ ಆಗಿತ್ತು.

ಕಾರಂಜಿಯ ನೃತ್ಯ ವೀಕ್ಷಣೆಗಾಗಿ ಕಾತುರದಿಂದ ಕಾಯ್ದಿದ್ದ ನಮಗೆ ದಿಕ್ಕು ತೋಚದಂತಾಗಿ ನೀರ ನೃತ್ಯ ಸ್ಥಳದತ್ತ ಕಲ್ಕಿತ್ತೆವು. ಮೊದಲೇ ಸ್ಥಳ ಪರಿಚಯವಿದ್ದ ನಾವು (ನಾನು, ದಳವಾಯಿ, ಬೊಮ್ಮಣ್ಣವರ್, ಕೋಟಿ) ನಮ್ಮೊಂದಿಗೆ ಕೆಲವರನ್ನು ಎಳೆದುಕೊಂಡು ಕಾಲಿಗೆ ಕೀ ಕೊಟ್ಟು ಓಡಲಾರಂಭಿಸಿದೆವು. ಆ ಜನ ಜಂಗುಳಿಯಲ್ಲಿ ನುಸುಳಿಕೊಂಡು ಹರ ಸಾಹಸ ಮಾಡಿ ಹೋದೆವಾದರೂ ಸಮಯ ಮೀರಿತ್ತು, ಕೊನೆಯ ಹಾಡಿನ ನೃತ್ಯ ನೋಡಿ ಮೃತ್ಯುವಿನ ಕದ ತಟ್ಟುವಂತೆ ಓಡಿದ ನಮಗೆ ಸಾಕಾಗಿತ್ತು. ಸಾಯುವವರ ಬಾಯಿಗೆ ಹನಿ ನೀರು ಸಿಕ್ಕಂತೆ ಒಂದೇ ಒಂದು ಹಾಡಿನ ನೃತ್ಯ ನೋಡಿದೆವು "ವಂದೇ ಮಾತರಂ" ಹಾಡು. ನಮ್ಮ ನಿಮ್ಮೆಲ್ಲರ ಏಕತೆಯ ಜಾಡು ಇದೇ ಅಲ್ಲವೇ ? ಎಲ್ಲರೂ ಒಟ್ಟುಗೂಡಿ ಬಸ್ಸಿನತ್ತ ನಡೆದೆವು, ಇಚ್ಛಿಸದವರು ಇಷ್ಟದ ಖಾದ್ಯವನ್ನು ತಿಂದರು. ಪಯಣ ಮೈಸ್ಯುರು DIET ಕಡೆ ಹೊರಟಿತು. ಸಮಯ ಸರಿಯಾಗಿ 10 ಗಂಟೆ ಆಗಿತ್ತು. KRS ಇಂದ DIET ಗೆ ಬಂದ ಸಮಯ ಹೇಗೆ ಜಾರಿತು ಎಂದು ತಿಳಿಯಲಿಲ್ಲ ಯಾಕೆಂದರೆ, ಜೋಕ್ ಹೇಳುವುದು, ಹಾಡು ಹಾಡುವುದು, ಡಾನ್ಸ್ ಮತ್ತು ನಟಿಸುವುದು ಹುಗೆ ವಿವಿಧ ಚಟುವಟಿಕೆಗಳೊಂದಿಗೆ ಎಲ್ಲರೂ ಎಲ್ಲರನ್ನೂ ನಗಿಸುತ್ತ ನಗುತ್ತ ಮನರಂಜಿಸಿದೆವು. ಗುಡಿಗೆ ಬಂದು ಕೈ ಕಾಲು ಮುಖ ತೊಳೆದು, ಬಿಸಿ ಊಟ ಸ್ವಾಹಾ ಮಾಡಿ ಸಣ್ಣಗೆ ಸುದ್ಧಿಯಿಲ್ಲದೆ ನಿದ್ದೆಯ ಕಡಲಲ್ಲಿ ಜಾರಿದೆವು.

ಮರುದಿನ ಮುಂಜಾಯ 5.30ಕ್ಕೆ ಎದ್ದು, ಎಲ್ಲ ಮಾಡಬೇಕಾದ ಕೆಲಸಗಳನ್ನು ಮಾಡಿ, 7.30ಕ್ಕೆ ಶ್ರೀ ರಂಗಪಟ್ಟಣಕ್ಕೆ ಹೊರಟೆವು. ದರಿಯಾ ದೌಲತ್ ಅರಮನೆಯನ್ನು ದರ್ಬಾರಿನಲ್ಲಿ ನೋಡದಿದ್ದರೂ, ದಾರಿಯಲ್ಲೇ ನೋಡಿ, ರಂಗನಾಥ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ, ದರ್ಶನ ಪಡೆದು, ರಂಗನ ಜೊತೆ ಫೋಟೋ ತೆಗೆಸಿಕೊಳ್ಳಲು ಹೋಗಿ ಅರ್ಚಕನಿಂದ ಬೈಸಿಕೊಂಡು ಹೊರ ಬಂದು, ಶ್ರವಣ ಬೆಳಗೊಳದತ್ತ ನಡೆದೆವು.

ಬಸ್ಸಿನಲ್ಲಿ ಸಮಯ ಕಳೆಯಲು ಏನು ಮಾಡುವುದೆಂದು ತಿಳಿಯದೆ ಕಂಗಾಲಾಗಿ ಹಿಂದಿನ ದಿನದ ನಟನೆ, ಅಂತ್ಯಕ್ಷರಿ ನೆನಪಾಗಿ ಚುಟುಕು ಹಾಡುಗಳೊಂದಿಗೆ ಯಡಿಯೂರಪ್ಪನವರ ಸರಕಾರಕ್ಕೆ ವಿರೋಧ ಪಕ್ಷಗಳು ಹೆಣಗುವಂತೆ ಗೆಲ್ಲಲ್ಲು ನಾವು ಹುಡುಗ-ಹುಡುಗಿಯರು ಒಬ್ಬರ ಮೇಲೊಬ್ಬರಂತೆ, ಯಾರಿಗೆ ಯಾರು ಕಡಿಮೆ ಇಲ್ಲದಂತೆ ಸ್ಪರ್ಧಿಸಿದರೂ ಆಡಳಿತದ ಚುಕ್ಕಾಣಿಯನ್ನು ಸಮರ್ಥವಾಗಿ ನಿಭಾಯಿಸಲು ನಮಗಾಗದೆಂದು ಸ್ತ್ರೀಯರು ಗೆಲುವಿನ ಸೋಪಾನ ನಮಗೆ ಬಿಟ್ಟು ಪಯಣ ಸಾಗಿತು.

ಕಡಿದಾದ ಬೆಟ್ಟ-ಗುಡ್ಡಗಳ ಮಧ್ಯೆ
ಚಿಕ್ಕ-ಪುಟ್ಟ ಹಾಡುಗಳೊಂದಿಗೆ
ಅಲ್ಲಲ್ಲಿ ತಿಳಿಹಾಸ್ಯದಿಂದ ಎಲ್ಲರನ್ನೂ 
ಸುಳಿಸುತ್ತುವ ನಗೆ.

ರೋಡಿನ ದುರವಸ್ಥೆಯಿಂದ ಹಿಂಬದಿಯಲ್ಲಿ ಕುಳಿತ ಪಾಪಿಗಳ ಗೊಳಿನ ಬಗೆ, ನಮ್ಮ ಅತಿಯಾದ ಸಂತೋಷಕ್ಕೆ ಮಿತವಾಗಿ ಹೊಗೆ ಹಾಕಿತ್ತು. "ದೋಣಿ ಸಾಗಲಿ ಮುಂದೆ ಹೋಗಲಿ" ಎಂಬ ಕವಿ ವಾಣಿಯಂತೆ ಶ್ರವಣಬೆಳಗೊಳ ತಲುಪಿದೆವು.

ಆ ಬೃಹತ್ ಕಲ್ಬೆಟ್ಟ ಏರುವಷ್ಟರಲ್ಲಿ ಅರ್ಧ ಜನರು ಅರ್ಧಕ್ಕೆ "ಉಸ್...." ಎಂದು ನಿಟ್ಟುಸಿರು ಬಿಟ್ಟು, ಟೊಂಕಕ್ಕೆ ಕೈ ಇಟ್ಟು ಸೂರ್ಯನತ್ತ ದಿಟ್ಟಿಸಿ ನೋಡತೊಡಗಿದರು. ನಾವಂತೂ ನಮ್ಮದೇ ಕಿತಾಪತಿಯೊಂದಿಗೆ ಮೇಲೆ ಹೋಗಿ ಫೋಟೋ ಪೋಸ್ ಕಪಿಚೇಷ್ಟೆಯಲ್ಲಿ ತೊಡಗಿದ್ದೆವು.

ಮುಂದಾದವನೆ ನಾಯಕ
ಹಿಂದುಳಿದ ಹಿಂಬಾಲಕ
ಬರುತ್ತಿತ್ತು ಹೈಬ್ರಿಡ್ ಪೀಳಿಗೆ.

ಗೊಮ್ಮಟೇಶನ ಭವ್ಯ ಮೂರ್ತಿಗೊಂದು ಚಿಕ್ಕದಾಗಿ ನಮಿಸಿ, ಹೊರ ಬರುವಷ್ಟರಲ್ಲಿ ನಮ್ಮ ಸ್ತ್ರೀ ಸಮೂಹ ಶಾಸನ ಕಲ್ಲುಗೆಳೆದುರು ಕುಳಿತು ಬರೆಯುತ್ತಿದ್ದರು, ಏನೆಂದು ನಮಗೂ ತಿಳಿಯಲಿಲ್ಲ, " Go ahead" ಎಂದು ಹಾರೈಸಿದೆವು. ಮುಂದೊಮ್ಮೆ ನಮಗೂ ಸಹಾಯಕ್ಕೆ ಬರಬಹುದಲ್ಲವೇ ಅವರ ಈ ಪ್ರಯತ್ನ ! ಕೆಳಗಿಳಿದು ಬರುವಾಗ ಇಬ್ಬರು ವಿದೇಶಿ ಪ್ರವಾಸಿಗರು ಸಿಕ್ಕರು, ಅವರೊಂದುಗೆ ಫೋಟೋ ತೆಗೆಸಿಕೊಂಡು ಕೆಲ ಪ್ರಶ್ನೆಗಳನ್ನು ಕೇಳಿ 'ಗೊಳ್..' ಎಂದು ನಕ್ಕು ಕಲ್ಲು ಮೆಟ್ಟಿಲುಗಳನ್ನಿಳಿದೆವು. ಬಾಯಾರಿಕೆ ಆಗಿ ನೀರಿನ ದಾಹಕ್ಕೆ ಎಲ್ಲೇ ಇಲ್ಲದಂತಾಯಿತು ಒಲ್ಲೆ ಈ ಜೀವನ ಎನ್ನುತ್ತ ನೀರಿಗಾಗಿ ಸಾಲಲ್ಲಿ ನಿಂತು, ನೀರು ಕುಡಿದು,  ಹೋಟೆಲ್ ಒಳ ನುಗ್ಗಿ ತಿಂಡಿ ತಿಂದು ಎಲ್ಲರೂ ಬಸ್ ಹತ್ತಿರ ಬಂದರು. ನಾನು ಮತ್ತು ನನ್ನ ನಾಲ್ಕು ಜನ ಸ್ನೇಹಿತರು ಎಳೆನಿರು ಕುಡಿದು "ಬೇಡ" ಎಂದರು ಕೇಳದೆ ಎಳೆ ಕೊಬ್ಬರಿ ತಿನ್ನಿಸಿದರು. ತಿಂದೆ. ಮುಂದೆ ಇಂದೇ ನನಗೆ ಸ್ವಲ್ಪ ತೊಂದರೆ ಮಾಡಿತು.

ಹಾಸನ ಜಿಲ್ಲೆಯ ಹಳೇಬೀಡಿನ ಕಡೆಗೆ ಅದೇ ಮನರಂಜನೆಯೊಂದಿಗೆ ಪಯಣ ಸಾಗಿತು. ಅಲ್ಲಿ ಹೋಗಿ ಅಲ್ಲಿನ ಶಿಲ್ಪ ಕಲೆಗೆ ತಬ್ಬಿಬ್ಬಾಗಿ, ಬಾಯಿ ಬಿಟ್ಟುಕೊಂಡು ನೋಡುತ್ತಾ ತಿರುಗಡಿದೆವು. ಅಲ್ಲೆಯೇ ಅನ್ನ ದಾಸೋಹ ಇದ್ದಿದ್ದರಿಂದ ಊಟ ಮುಗಿಸಿಕೊಂಡು ಬೇಲೂರಿನ ಕಡೆಗೆ ನಡೆದೆವು. ಈಗ ಈಲ್ಲರಲ್ಲೂ ಕುತೂಹಲ. ಏನೋ ಒಂದು ಮನದಲ್ಲಿ ಗೋಣಗುವಿಕೆ. ಶೀಲಾ ಬಾಲಿಕೆಯರ ವೈಯಾರದ ಶಿಲ್ಲಗಳನ್ನು ನೀಡಬೇಕೆಂದು. ಸಲಹೆಗಾರನೊಬ್ಬನ ಸಹಾಯದೊಂದಿಗೆ ಪ್ರತಿ ಪ್ರತಿಮೆಯ ಮಾಹಿತಿ ಮಹಾತ್ಮೆ ಮಾಡಿದೆವು. ಫೋಟೋ ಪೋಸ್ ಕಾಪಿ ಚೇಷ್ಟೆ ಎಲ್ಲೆಲ್ಲಿಯೂ ನಿಲ್ಲುವ ಮಾತೇ ಇಲ್ಲ ಎಂಬುದು ತಿಳಿದಿರಿ.

ಎಲ್ಲ ಮುಗಿದು ಬಸ್ಸಿನಲ್ಲಿ ಬಂದು ಕುಳಿತು ಧರ್ಮಸ್ಥಳದ ಕಡೆಗೆ ನಡೆದೆವು. ಬಸ್ ಹೊರಟಿತು ಆದರೆ ಇಬ್ಬರು ಸ್ನೇಹಿತರು ( ಚೇತನ್ ಮತ್ತು ಯಲ್ಲಪ್ಪ) ಬಸ್ಸಿನಲ್ಲಿ ಇರಲಿಲ್ಲ. ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಸ್ವಲ್ಪ ದೂರ ಹೋದ ನಂತರ ಅವರು ಮೊಬೈಲ್ ಮೂಲಕ ನಮ್ಮನ್ನು ಸಂಪರ್ಕಿಸಿದಾಗ ಡ್ರೈವರ್ ಬ್ರೇಕ್ ಹಾಕಿದ ಅವರು ಬರುವವರೆಗೂ ಗುರುಗಳ ಮಂತ್ರ ಪಟನೆ ಶುರುವಾಯಿತು. ಬಂದ ಮೇಲೆ ಸದ್ದಿಲ್ಲದೆ ಪಯಣ ಸಾಗಿತು.

ಬಸ್ ವೇಗವಾಗಿ ರಸ್ತೆಯನ್ನು ನುಂಗುತ್ತಿದ್ದಂತೆಲ್ಲ ದಟ್ಟಡವಿಯಲ್ಲಿ ತಿರುವು-ಮುರುವುಗನ್ನು ದಾಟುತ್ತಿದ್ದೆವು. ಕಿಕ್ಕಿರಿದು ನಿಂತ ಬೆಟ್ಟಗಳು ಮುಗಿಳಿಗೆ ಮುತ್ತಿಕ್ಕುವಂತಿದ್ದವು. ಪ್ರಕೃತಿಯ ಈ ವೈಭವ ನೋಡುವ ನಮಗೆ ಸಂತೋಷದ ಎಲ್ಲೆ ಮೀರಿ ಸ್ವರ್ಗಕ್ಕೆ ಒಂದೇ ಗೇಣು ಎಂಬಂತೆ ನಲಿದೆವು. ಬಸ್ ಬೆಟ್ಟವನ್ನು ತಿರುವು-ಮುರುವು ಬಳಸಿ ಹತ್ತಿತ್ತಿದ್ದರೆ ಹಿಂದಿನ ಸೀಟಿನಲ್ಲಿ ಕುಳಿತವರು ಆಕಡೆ ಈಕಡೆ ಜೋಲಿ ಆಡಿ, ಮಿತಿ ಮೀರಿ ತಡೆಯಲಾಗದೆ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಅಂತವರಲ್ಲಿ ಮೊದಲಿಗ ನಾನು. ನನ್ನ ನಂತರ ಏಳೆಂಟು ಜನ ನನ್ನನ್ನು ಹಿಂಬಾಲಿಸಿದರು.

ನನ್ನನ್ನು ನಾನು ತುಂಬಾ ಬೈದುಕೊಂಡೆ. ಯಾಕೆಂದರೆ ಪ್ರಕೃತಿಯ ಅತ್ಯಮೂಲ್ಯ ಸೌಂದರ್ಯವನ್ನು ನೋಡಲು ನನ್ನ ವಾಂತಿಯು ಕಣ್ಣಿಗೆ ಬಟ್ಟೆ ಕಟ್ಟಿತು. ಹೀಗಾಗಲು ಬೇಲೂರಿನಲ್ಲಿ ತಿಂದ ಆಹಾರ ಮತ್ತು ಎಳೆ ಕೊಬ್ಬರಿ ಕಾರಣ. ನಮ್ಮ ಪರಿಸ್ಥಿತಿ ನೋಡಲಾಗದೆ ಮರುಗಿದ ಚಾಲಕ ಘಾಟ್ ಪ್ರದೇಶದ ಕಾರಣ ಎಲ್ಲೂ ನಿಲ್ಲಿಸದೆ ಚಲಿಸಿ ಸ್ವಲ್ಪ ದೂರ ಹೊದ ಮೇಲೆ ನಿಲ್ಲಿಸಿದ. ಮಾತ್ರೆ ತೆಗೆದುಕೊಂಡೆವು ಸ್ವಲ್ಪ ವಿಶ್ರಾಂತಿಯ ನಂತರ ಪ್ರಯಾಣ ಬೆಳೆಸಿ ಸಂಜೆಯ 7.30ಕ್ಕೆ ಧರ್ಮಸ್ಥಳ ತಲುಪಿದೆವು. ಲಾಡ್ಜ್ ಮಾಡಿ, ಲಗೇಜ್ ಎಲ್ಲಾ ರೂಮಿನಲ್ಲಿಟ್ಟು, ಫ್ರೆಶ್ ಆಗಿ ಊಟಕ್ಕೆ ಎಲ್ಲರೂ ದೇವಸ್ಥಾನಕ್ಕೆ ಹೋದರು. ಆದರೆ ನಾನು ಮತ್ತು ಚೇತನ್ ರೂಮಿನಲ್ಲೇ ಉಳಿದೆವು ಯಾಕೆಂದರೆ ಅತಿಯಾಗಿ ವಾಂತಿ ಮಾಡಿಕೊಂಡಿದ್ದರಿಂದ ನಮ್ಮಲ್ಲಿ ತ್ರಾಣ ನಿಶಕ್ತಗೊಂಡಿತ್ತು. ಅವರೆಲ್ಲ ಊಟ ಮಾಡಿ ಬರುವಾಗ ನಮಗೆ ಫ್ರೂಟಿ ತಂದು ಕೊಟ್ಟರು ಅದನ್ನಷ್ಟೇ ಕುಡಿದು ಮಲಗಿದೆವು.

ಮರುದಿನ ಬೆಳಗಿನ 5 ಗಂಟೆಗೆ ಎದ್ದು, ನಿತ್ಯ ಕರ್ಮಾದಿಗಳನ್ನು ಮುಗಿಸಿ, ಮಂಜುನಾಥನ ದರ್ಶನಕ್ಕಾಗಿ ಸಾಲಲ್ಲಿ ನಿಂತು , ದೇವರಿಗೊಂದು ಕೋರಿಕೆ ಸಲ್ಲಿಸಿ "ಆ ಅರ್ಜಿಯನ್ನು ರಿಜೆಕ್ಟ್ ಮಾಡಿದಿರಪ್ಪಾ.." ಎಂದು ಕೇಳಿಕೊಂಡು ಹೊರ ಬಂದೆ. 10 ಗಂಟೆಗೆ ಮಂಜೂಷ ವಸ್ತು ಸಂಗ್ರಹಲಯಕ್ಕೆ ಪ್ರವೇಶ ಪಡೆದು ಹಿಂದೆಂದೂ ಕಂಡು ಕೇಳರಿಯದ ಭಿನ್ನ-ವಿಭಿನ್ನ ವಸ್ತುಗಳನ್ನು ವೀಕ್ಷಿಸಿದೆವು. ಇಲ್ಲಿ ನನ್ನ ಮನ ಸೆಳೆದ ವಸ್ತುವೆಂದರೆ, ಆನೆ ದಂತದಲ್ಲಿ ಕೆತ್ತಿದ 8 ಇಂಚು ಎತ್ತರದ ಗಣೇಶ ವಿಗ್ರಹ. ಮತ್ತು, ಅದರ ಸುತ್ತಣ ಕಲಾಕೃತಿ ವರ್ಣಾತೀತವಾಗಿತ್ತು. ಕಲೆಗಾರನ ತಾಳ್ಮೆ ಮೆಚ್ಚುವಂತದ್ದು, ಅಷ್ಟು ಸೂಕ್ಷ್ಮ ಕೆತ್ತನೆಯೇ ಅದು. ಅಲ್ಲೇ ಪಕ್ಕದಲ್ಲಿದ್ದ ಕಾರ್ ಮ್ಯೂಸಿಯಂ ಗೆ ಹೋಗಿ ತರ-ತರದ ಕಾರುಗಳನ್ನು ನೋಡಿ ಹೊರಬಂದ ಕೆಲ ಹಸಿದವರು ಧರ್ಮಸ್ಥಳದ ಪ್ರಸಾದಕ್ಕೆ ಮೊರೆ ಹೋದರು. ನಾನು ಅಜೀತ್, ಶಿವರುದ್ರ, ಸಿದ್ದು, ಬಸ್ಸಿನಲ್ಲೇ ಕುಳಿತೆವು.

ಎಲ್ಲರೂ ಬಂದ ನಂತರ ಮಣಿಪಾಲ್ ಗೆ ಹೊರಟೆವು. ಅಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಆಟೋನೋಮಿ ಮ್ಯೂಸಿಯಂ ಗೆ ಹೋಗಿ ಮಾನವ ಶರೀರದ ಒಳ-ಹೊರ ಅಂಗಗಳ ನೀಳ-ಅಡ್ಡ ಸೀಳಿಕೆ ಸಂಗ್ರಹ ವೀಕ್ಷಿಸಿ " ಏನೇನಿದೆ ಈ ದೇಹದಲ್ಲಿ... ಈ ಜೀವನದಲ್ಲಿ..." ಎಂದು ಹೇಳಿಕೊಳ್ಳುತ್ತ ಬಸ್ಸನ್ನೇರಿದೆವು. ಸಮಯ 2ರ ಆಸುಪಾಸಿತ್ತು, 3ರ ಹೊತ್ತಿಗೆ ಮಲ್ಪೆಗೆ ಹೋಗಿ ಸಮುದ್ರದ ಉಪ್ಪು ನೀರಿನಲ್ಲಿ ಬೆಪ್ಪರಂತೆ ಜಿಗಿದಾಡಿ, ಕುಣಿದು-ಕುಪ್ಪಳಿಸಿದೆವು.

ತೀರಕ್ಕೆ ರಭಸದಿಂದ ಬರುವ
ತೆರೆ-ತೊರೆಗಳಂತೆ ನಿನ್ನ
ನೆನಪನ್ನು ಹೆಕ್ಕಿ ತಂದು ಮನಸ್ಸು
ಎದೆಯಾಚೆ ಹಾಕುತ್ತಿದೆ ಹುಡುಗಿ.

ಅಲ್ಲಿಂದ ಸಂಜೆಯ 5 ಗಂಟೆಗೆ ಉಡುಪಿಯ ಶ್ರೀ ಕೃಷ್ಣನ ಸನ್ನಿಧಾನಕೆಜೆ ಬಂದೆವು. ಯಾರೂ ತಡ ಮಾಡದೇ ನೆರವೇರುತ್ತಿದ್ದ ಪೂಜೆಯಲ್ಲಿ ಪಾಲ್ಗೊಂಡೆವು. ಅಲ್ಲಿನ ಬಿಸಿಲ ಝಳಕ್ಕೆ ಮತ್ಯೋಮ್ಮೆ ಸ್ನಾನವಾಗಿತ್ತು. ಪೂಜೆ ಮುಗಿಸಿ ಹೊರ ಬಂದು ತಂಗುವುದರ ಬಗ್ಗೆ ಚರ್ಚಿಸಿ 7.30ಕ್ಕೆ ಕೊಲ್ಲೂರಿನ ಕಡೆಗೆ ಪಯಣ ಆರಂಭಿಸಿದೆವು.

ಬಸ್ಸಿನಲ್ ಹಾಡುತ್ತ, ನಗಿಸುತ್ತ, ನಟಿಸುತ್ತ ಮನರಂಜನೆ ಸಾಗಿತ್ತು.

ಇಲ್ಲಿ ನಾನು ಮತ್ತು ಮಹಾಕೂಟೇಶ ಬಬ್ರುವಾಹನ ಚಿತ್ರದ 'ಏನು ಪಾರ್ಥ....' ನಟನೆ ಮೂಲಕ ರಂಜಿಸಿದೆವು. ರಾತ್ರಿಯ 11ಕ್ಕೆ ಕೊಲ್ಲೂರು ತಲುಪಿ ಲಾಡ್ಜ್ ಆಶ್ರಯ ಪಡೆದುಕೊಂಡೆವು.

ಬೆಳಿಗ್ಗೆ 4.30ಕ್ಕೆ ಎದ್ದು ಮುಗಿಸಬೇಕಾದ ಕೆಲಸಗಳನ್ನೆಲ್ಲ ಮುಗಿಸಿ ತಾಯಿ ಮುಕಾಂಬಿಕೆಯ ದರ್ಶನಕ್ಕೆ ಹೊರಡುವ ಸಮಯಕ್ಕೆ ಈಶ್ವರ್ ಪಾಟೀಲ್ ತೀವ್ರ ಹೊಟ್ಟೆ ನೋವಿನಿಂದ ನರಳಲಾರಂಭಿಸಿದ.  ಒಂದಷ್ಟು ಜನ ದರ್ಶನಕ್ಕೆ ಹೋದರೆ ಮತ್ತೆ ಒಂದಷ್ಟು ಜನ ಆಸ್ಪತ್ರೆಗೆ ಹೋದೆವು. ನಂತರ ಮುರುಡೇಶ್ವರಕ್ಕೆ ಪಯಣ ಬೆಳೆಸಿದೆವು. ಶಿವನ ಭವ್ಯ ಪ್ರತಿಮೆಯನ್ನು ಕಣ್ಣೆದುರಿಗೆ ಮನಸ್ಸು ತಂದುಕೊಂಡಿತಾದರು ಅದರ ಅಪ್ರತಿಮ ಚೆಲುವನ್ನು ಸವಿಯಲು ಅಲ್ಲಿಗೆ ಹೋಗುವವರೆಗೆ ಕಾಯಲೇ ಬೇಕಿತ್ತು.

ಬಸ್ಸಿನಿಂದ ಇಳಿದ ತಕ್ಷಣ ಎಲ್ಲರೂ ದಿಢೀರ್ ಶಿವನತ್ತ ನಡೆದರು. ತಿರುಗಾಡಿ ಸ್ಥಳದ ಅಂದ-ಚಂದವನ್ನು ಸವಿದು ಹೊಟ್ಟೆಗಿಷ್ಟು ಹಿಟ್ಟು ಹಾಕಿಕೊಂಡು ಗಟ್ಟಿಯಾಗಿ ಸಮುದ್ರಕ್ಕಿಳಿಯುವ ಎಂದು ಯೋಜಿಸಿದೆವು. ಈ ನಮ್ಮ ಯೋಜನೆ ಸುನಾಮಿಗೆ ಸಿಕ್ಕ ಬೇನಾಮಿ ಮಿನಿನಂತೆ ಆಯಿತು. ಯಾಕೆಂದರೆ, ನಮ್ಮ 56 ವಾನರ ಸೈನ್ಯಕ್ಕೆ ಯಾವೊಬ್ಬ ಹೋಟೆಲ್ ನವನೂ ಅಡುಗೆ ಮಾಡಿ ಹಾಕಲು ಮುಂದೆ ಬರದಾದ. ಕೊನೆಗೊಬ್ಬ ಕೋಟಿಗೊಬ್ಬ ಎಂಬಂತೆ ಒಪ್ಪಿದ ಆದರೆ " ಹೋಟೆಲ್ ಇಲ್ಲಿಂದ ಸ್ವಲ್ಪ ದೂರ ಉಂಟು ಬಸ್ಸಲ್ಲಿ ಹೋಗಿ " ಎಂದು ಬಿಟ್ಟಿ ಸಲಹೆ ಕೊಟ್ಟ, ನಾವು ಸ್ವಲ್ಪ ದೂರ ಅಲ್ಲವೇ ಹಾಗಾಗಿ ಕಾಲ್ನಡಿಗೆಯಲ್ಲಿ ಹೊರಟೆವು. ನಮ್ಮ ಎಣಿಕೆಯಂತೆ ಅದು ಸ್ವಲ್ಪ ದೂರದಲ್ಲಿರಲಿಲ್ಲ, ಸ್ವಲ್ಪ ದೂರವೇ ಇತ್ತು. ಹೆಜ್ಜೆಗಳನ್ನು ಎಷ್ಟು ಕಿತ್ತಿಟ್ಟರು ಬಡ್ಡಿ ಮಗನ  'ಕಾಮತ್ ಹೋಟೆಲ್' ಮಾತ್ರ ಕಾಣದು. ನಡೆದು ನಡೆದು ಹೋದಂತೆ ಹುಡುಗಿಯರು ಉಪಹಾರ ಮುಗಿಸಿ "ಮತ್ತೆ 3 ಕಿಮೀ. ನಡೆದು ಬೀಚ್ ಗೆ ಬರಬೇಕಾ ..?" ಎಂದು ಉದ್ಘಾರಿಸಿದರು. ಈ ಉದ್ಘಾರದಲ್ಲೇ ಬೀಚಿನಲ್ಲಿ ಮಾಡಬೇಕಾದ ಮೋಜು ಮಾಸ್ತಿ ಕರಗಿ ಹೋಗಿತ್ತು.

ಕಡೆಗೆ ತಮ್ಮಣ್ಣವರ ಸರ್ ಈ 'ಬೀಚ್ ಮೋಜಿಗೆ ಬೆಂಕಿ ಬಿತ್ತು..' ಎಂದು ರಿಕ್ಷಾ ಮಾಡಿ ಡ್ರೈವರನನ್ನು ಕಳಿಸಿ ಬಸ್ ತರ ಹೇಳಿದರು. ಹೀಗೆ ಮಧ್ಯಾಹ್ನದ 12 ರ ಉರಿ ಬಿಸಿಲಿನಲ್ಲಿ ಮುರುಡೇಶ್ವರದಿಂದ  ಇಡಗುಂಜಿ ಗಣೇಶನತ್ತ ಪಯಣ ಮತ್ತದೇ ಮೋಜು ಮಸ್ತಿ ಮಡುಗತ್ತಿತ್ತು. ಒಂದು ಗಂಟೆಯ ಅಂತರದಲ್ಲಿ ಇಡಗುಂಜಿ ತಲುಪಿ ದರ್ಶನ ಮುಗಿಸ್ಕೊಂಡು ಗೋಕರ್ಣದ ಕಡೆ " ಗೋವಿಂದಾ... ಗೋ.... ವಿಂದ" ಎಂದೆವು.

ಸಂಜೆಯ 5 ಗಂಟೆಗೆ ಗೋಕರ್ಣಕ್ಕೆ ಕಾಲಿಟ್ಟು ಆತ್ಮಲಿಂಗ ಸ್ಪರ್ಶಿಸಿ ಹಿರ ಬಂದು ಬೀಚ್ ಕಡೆಗೆ ನಡೆದೆವು.

 ಬೀಚಿನಲ್ಲಿ ಮನಸು ಬಿಚ್ಚಿ,
ಬೆಚ್ಚಗಿನ ಭಾವಗಳ ಬಾಚಿ,
ಹೃದಯದಾಳದ ಮಾತುಗಳ ದೋಚಿ, 
ಚುಟುಕು ಹನಿಗವನಗಳ ಗೀಚಿದೆ.

ತಿರುಗುವಷ್ಟರಲ್ಲಿ ಎಲ್ಲರೂ ಸಲಾಗಿ ಕುಳಿತು ಸೂರ್ಯನ ಸಾವನ್ನು ಎದುರು ನೋಡುತ್ತಿದ್ದರು. ಅಳಿದುಳಿದ ಚಕ್ಕುಲಿ, ಚೂಡಾ ಲಾಡುಗಳಷ್ಟೇ ಸಿಕ್ಕವು. ಅವನ್ನೇ ತಿನ್ನುತ್ತಾ ನಾನು ಸೂರ್ಯ ಸಾವನ್ನು ನೀಡಲು ಸನ್ನದ್ಧನಾಗಿ ಕುಳಿತೆ.

ಅತಿಯಾದ ಮೋಡ ಕವಿದ ವಾತಾವರಣ ಇದ್ದ ಕಾರಣ ಎಲ್ಲರಿಗೂ ನಿರಾಶೆಯಾಯಿತು. ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ ನಮ್ಮ ಆಸೆಯೂ ಆಯಿತು. ಸ್ವಲ್ಪ ಸಮಯದ ನಂತರ ಬಸ್ ಕಡೆಗೆ ಬಂದು 8 ಗಂಟೆಗೆ ಊಟ ಮುಗಿಸ್ಕೊಂಡು 9 ಗಂಟೆಗೆ ತವರೂರಿನ ಕಡೆ ಮುಖ ಮಾಡಿದೆವು. ಈಗಂತೂ ಎಲ್ಲೆ ಇಲ್ಲದ ಮಲ್ಲರಂತೆ ರಂಜಿಸಿದೆವು. ಅಂದು ರಾತ್ರಿಯ ಪಯಣದಲ್ಲಿ ಗಮನ ಸೆಳೆದ ವ್ಯಕ್ತಿ ಸಿದ್ದು ಪುಠಾಣಿ, ನಾನು, ಅಜೀತ್, ಮಹಾಕೂಟೇಶ. ಸಿದ್ದುವಿನ ಕೊಳಲ ನಾದ ಕಿವಿಗೆ ಇಂಪು ಕೊಡುವ ಬದಲು ಪಾಪ್ ಗಾಯನದ ಕದ ತಟ್ಟಿತ್ತು. ಮುಂಗಾರು ಮಳೆ ದೃಶ್ಯಾವಳಿಗಳ ನಟನೆ (ರಾಜು ಕುಂಬಾರ) ಭಾರಿ ಇತ್ತು. ಸುಮಾರು 12 ಗಂಟೆ ಆಗುರಬಹುದು ಬಹಳಷ್ಟು ಜನ ನಿದ್ದೆ ಮಾಡಿದ ಕಾರಣ "ಪ್ರೇಕ್ಷಕರಿಲ್ಲದೆ ಪ್ರದರ್ಶನ ಹೇಗೆ ಮಾಡುವುದು ...?" ಎಂದು ನಾವು ನಿದ್ರಾ ದೇವಿಯ ಮಡಿಲು ಸೇರಿದೆವು. ಬೆಳಿಗ್ಗೆ 4.30ಕ್ಕೆ ನಮ್ಮ ಸಾಮ್ರಾಜ್ಯ "DIET ಮಣ್ಣೂರ" ತಲುಪಿದೆವು. 6 ಗಂಟೆಯವರೆಗೆ ಅಲ್ಲೇ ಇದ್ದು ನಂತರ ತಮ್ಮ ತಮ್ಮ ಮನೆಗ ಕಡೆಗೆ ಸಾಗಿದೆವು.

Saturday 28 March 2020

ಐದು ಕಲ್ಲು

                    


ಸಂಖ್ಯೆ ಐದು ಹಿಂದೂ ಸಂಸ್ಕೃತಿಯಲ್ಲಿ ಒಂದು ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ. ಏನಾದರೂ ಪೂಜಿಸುವಾಗ ಐದು ಬೊಟ್ಟು ಕುಂಕುಮ , ಭಂಡಾರ ಇಡುವುದು  ಸಾಮಾನ್ಯ . ಭಾರತದಲ್ಲಿ , ಅದೂ ಗ್ರಾಮೀಣ ಪ್ರದೇಶದಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಐದು ಸಣ್ಣ ಕಲ್ಲುಗಳನ್ನು ಪೂಜಿಸುವ  ವಾಡಿಕೆಯಿದೆ. ಈ ಐದು ಹಿಂದೂ ಸಂಸ್ಕೃತಿಯಲ್ಲಿ ಯಾಕಿಷ್ಟು ವೈಶಿಷ್ಟ್ಯ ಪಡೆದಿದೆ ಎಂದರೆ;

ಆಕಾಶ, ವಾಯು, ಅಗ್ನಿ, ನೀರು, ಭೂಮಿ ಎಂಬ ಪಂಚಭೂತ;
ಸತ್ಯ, ಧರ್ಮ, ನ್ಯಾಯ, ಪ್ರೀತಿ, ಸಂಯಮ ಎಂಬ ಪಂಚತತ್ವಗಳು; 
ಚಿನ್ನ, ಬೆಳ್ಳಿ, ಟ್ರ, ಕಬ್ಬಿನ, ಹಿತ್ತಾಳೆ ಎಂಬ ಪಂಚಲೋಹ;
ಕಣ್ಣು, ಕಿವಿ, ಮೂಗು, ಬಾಯಿ, ಚರ್ಮ ಎಂಬ ಪಂಚ ಇಂದ್ರಿಯಗಳು  ಇತ್ಯಾದಿ ಇತ್ಯಾದಿ ಪ್ರತಿನಿಧಿಸುತ್ತವೆ.

ಮಹಾಭಾರತದಲ್ಲಿ ಭಗವಾನ್ ಶ್ರೀಕೃಷ್ಣ ಐದು ಹರಳುಗಳನ್ನು ಎರಡು ಬಾರಿ ಉಪಯೋಗಿಸಿದ್ದಾನೆ. 

ಒಂದು;
ಕೌರವ ಸೇನೆ ದ್ರುಪದ ರಾಜನ ಜೊತೆ ಸೋತ ನಂತರ ಪಾಂಡು ಪುತ್ರರು ದ್ರುಪದ ರಾಜನ ಮೇಲೆ ದಾಳಿ ಮಾಡಿ, ಅರ್ಜುನನು ದ್ರುಪದ ರಾಜನು  ರಚಿಸಿದ ಚಕ್ರವ್ಯೂಹ ಭೇಧಿಸಿ, ದ್ರುಪದನ ಎದುರು ಬಿಲ್ಲು ಹೂಡಿದಾಗ ತನ್ನ ವಿಶಿಷ್ಟ ಶಕ್ತಿಯಿಂದ ದ್ರುಪದ ರಾಜನು ತನ್ನನ್ನು ತಾನು ಐದು ಜನ ದ್ರುಪದರನ್ನಾಗಿಸಿ   ವಿಭಜಿಸಿಕೊಂಡು ಅರ್ಜುನನಲ್ಲಿ ದ್ವಂದ್ವ ಉಂಟು ಮಾಡುತ್ತಾನೆ. ಆಗ ಅಚಾನಕ್ ಆಗಿ ಅರ್ಜುನನ ಬಳಿ ಇದ್ದ, ಕೆಲ ದಿನಗಳ ಹಿಂದೆ ಶ್ರೀಕೃಷ ಸುಭದ್ರೆಯ ಮೂಲಕ ಅರ್ಜುನನಿಗೆ ತಲುಪಿಸಿದ ಐದು ಹರಳುಗಳು ಭೂಮಿಯ ಮೇಲೆ ಬೀಳುತ್ತವೆ. ಆ ಹರಲುಗಳ ಮೇಲೆ ಎರೆಡೆರಡು ಬೇರೆ ಬೇರೆ ದಿಕ್ಕಿನತ್ತ ಮುಖ ಮಾಡಿರುವ ಚುಕ್ಕಿಗಳಿರುತ್ತವೆ. ಈ ಸಂಕೇತಗಳ ಆಧಾರದ ಮೇಲೆ ಅರ್ಜುನನು ನಿಜವಾದ ದ್ರುಪದ ರಾಜ ಯಾರೆಂದು ಪತ್ತೆಮಾಡಿ ಬಂಧಿಸುತ್ತಾನೆ.

ಎರಡು, ಪಾಂಡು ಪುತ್ರರು ದ್ರೌಪದಿಯನ್ನೊಳಗೊಂಡು ಇಂದ್ರಪ್ರಸ್ಥದಲ್ಲಿ ಹೊಸ ನಗರ ನಿರ್ಮಿಸಿ ವಾಸವಿರುವಾಗ ಶ್ರೀ ಕೃಷ್ಣನು ದ್ರೌಪದಿಗೆ ಅದೇ ಐದು ಹರಳುಗಳನ್ನು ನೀಡಿ ಧರ್ಮದ ಪಥದಲ್ಲಿ, ಸತ್ಯವನ್ನು ಬಿಡದೇ, ನ್ಯಾಯಯುತವಾಗಿ, ಪ್ರೀತಿಯಿಂದ, ಎಲ್ಲವನ್ನೂ ಸಂಯಮದಿಂದ ಕಾಪಾಡಿಕೊಂಡು ಪಾಂಡು ಪುತ್ರರ ಜೊತೆಗೆ ಸಂಸಾರ ನಡೆಸುವ ಕುರಿತು ಮಾರ್ಗದರ್ಶನ ಮಾಡುತ್ತಾನೆ.

ಕುರುಕ್ಷೇತ್ರ ಯುದ್ಧದಲ್ಲಿ ಅದೇ ಐದು ಹರಳುಗಳನ್ನು ಅರ್ಜುನ ಮತ್ತು ಸುಭದ್ರೆಯ ಮಗ ಅಭಿಮನ್ಯುವಿನ ತೋಳಿಗೆ ದ್ರೌಪದಿ ಕಟ್ಟಿ, 'ಈ ಐದು ಹರಳುಗಳು ನಿನ್ನ ಕೈಯಲ್ಲಿರುವವರೆಗೆ ನಿನಗೆ ಪಾಂಡುಪುತ್ರರ ರಕ್ಷಣೆ ಇರುತ್ತದೆ.' ಎಂದು ಹೇಳಿರುತ್ತಾಳೆ. ಕುರುಕ್ಷೇತ್ರ ಯುದ್ಧದ ಒಂದು ದಿನ ಅಭಿಮನ್ಯು ಯುದ್ಧಕ್ಕೆ ಹೊರಡುತ್ತಿರುವಾಗ ಆ ಹರಳಿನ ಕಟ್ಟು ಕಳಚಿ ಬೀಳುತ್ತದೆ. ಅದು ಕೃಷ್ಣನಿಗೆ ತಿಳಿಯುತ್ತದೆಯಾದರೂ ಏನೂ ಮಾಡದೇ ಪಾರ್ಥ ಸಾರಥಿಯಾಗಿ ಯುದ್ಧಕ್ಕೆ ಹೋಗುತ್ತಾರೆ. 

ಅಂದಿನ ಯುದ್ಧದಲ್ಲಿ, ಕೌರವ ಸೇನೆ ಹಿಂದಿನ ದಿನ ಅಭಿಮನ್ಯುವಿನ ದಾಳಿಯಿಂದ ತತ್ತರಿಸಿ ಹೋಗಿರುತ್ತದೆ. ಹಾಗಾಗಿ, ಅಭಿಮನ್ಯುನನ್ನು ವಧಿಸುವುದು ಕೌರವರ ಅಂದಿನ ಎಲ್ಲ ವ್ಯೂಹಗಳ ಏಕಮಾತ್ರ ಉದ್ದೇಶವಾಗಿರುತ್ತದೆ. ಶಕುನಿಯ ಕಪಟತನದಿಂದ ಅರ್ಜುನನನ್ನು ಅಭಿಮನ್ಯುವಿನಿಂದ ದೂರಾತಿ ದೂರ ಸರಿಸಿ, ಚಕ್ರವ್ಯೂಹ ರಚಿಸಿ ಕೌರವರು ಅಭಿಮನ್ಯುನನ್ನು ವಧಿಸುತ್ತಾರೆ. 

ಕೃಷ್ಣನಿಗೆ ಅಭಿಮನ್ಯುವಿನ ಸಾವು ನಿಶ್ಚಿತ ಎಂದು ತಿಳಿದಿದ್ದರೂ, ಅಭಿಮನ್ಯು ತನ್ನ ಸ್ವಂತ ತಂಗಿಯ ಮಗನೇ ಆಗಿದ್ದರೂ ಅವನನ್ನು ಉಳಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಕೃಷ್ಣ ಮಾಡುವುದಿಲ್ಲ. ಇಡೀ ಸೃಷ್ಟಿಯೇ ನಾರಾಯಣನ ಕೈಯಲ್ಲಿರುವಾಗ ಅಭಿಮನ್ಯುವನ್ನು ಉಳಿಸಿಕೊಳ್ಳುವುದು ಕೃಷ್ಣನಿಗೆ ದೊಡ್ಡ ಕೆಲಸವೇನಾಗಿರಲಿಲ್ಲ. ಆದರೆ, ಕೃಷ್ಣನ ಯೋಜನೆ ಸೃಷ್ಠಿಯ ಜನನ-ಮರಣಗಳ ಚಕ್ರದಿಂದ ಹೊರತು ಪಡಿಸಿ ವಿಶಿಷ್ಠ ಶಕ್ತಿಗಳ ಮೂಲಕ ಜನ್ಮ ಪಡೆದವರ ಮೂಲಕ ಧರ್ಮ ಸ್ಥಾಪನೆ ಮಾಡುವುದಿತ್ತು. 

ಇದೇ ಕಾರಣಕ್ಕಾಗಿ ಕೃಷ್ಣನು, ದುರ್ವಾಸ ಮುನಿಯು ನೀಡಿದ ಮಂತ್ರ ವರದ ಮೂಲಕ ಕುಂತಿದೇವಿ ಪಾಂಡು ರಾಜನೊಂದಿಗೆ ಸಂಪರ್ಕಕ್ಕೆ ಬರದೇ ಮಂತ್ರ ಪಠಣೆಯ ಮೂಲಕ ಯಮನಿಂದ ಯುಧಿಷ್ಠಿರನನ್ನು, ವಾಯುವಿನಿಂದ ಭೀಮನನ್ನು, ಇಂದ್ರನಿಂದ ಅರ್ಜುನನನ್ನು, ಅಶ್ವಿನಿ ದೇವತೆಗಳಿಂದ ನಕುಲ-ಸಹದೇವ (ಮಾದ್ರಿಗೆ) ರನ್ನು ಪಡೆದಿರುತ್ತಾಳೆ. ಹಾಗಾಗಿ, ಈ ಪಾಂಡು ಪುತ್ರರನ್ನು ಕೃಷ್ಣ ಧರ್ಮ ಸ್ಥಾಪನೆಗೆ ಆಯ್ದುಕೊಳ್ಳುತ್ತಾನೆ.

ದ್ರೌಪದಿ; 
ದ್ರುಪದ ರಾಜ ಮತ್ತು ದ್ರೋಣರು ಗುರು ಭಾರದ್ವಾಜರ ಆಶ್ರಮದಲ್ಲಿ ಜ್ಞಾನಾರ್ಜನೆ ಮಾಡುವಾಗ ದ್ರೋಣ ಬಡವನಿರುತ್ತನೆ. ಮತ್ತು ದ್ರುಪದನು ರಾಜ ಇರುತ್ತಾನೆ. ದ್ರುಪದನು ದ್ರೋಣರಿಗೆ ಅವಮಾನ ಮಾಡಿದ್ದಕ್ಕೆ ದ್ರೋಣ ಕೊಲ್ಲಲು ಸಮರ್ಥ ಗಂಡು ಸಂತಾನ ಬೇಕು ಎಂದು ಸಾವಿರಾರು ಮುನಿಗಳ ಹತ್ತಿರ ಬೇಡಿಕೊಂಡರು ಅದು ನೆರವೇರುವುದಿಲ್ಲ. ಆಗ 3 ಮುನಿಗಳು ಯಜ್ಞ ನಡೆಸಿಕೊಡಲು ಒಪ್ಪಿಕೊಂಡು ಒಂದು ಕರರು ಹಾಕುತ್ತಾರೆ. ಈ ಯಜ್ಞದ ನಂತರ ನಿನಗೆ ಗಂಡು ಸಂತಾನ ಸಿಗುತ್ತದೆ. ಜೊತೆಗೆ ಒಂದು ಹೆಣ್ಣು ಸಂತನವು ಇದೆ ಅದನ್ನು ನೀನು ಪಡೆಯಲೇಬೇಕು. ಯಜ್ಞ ಫಲವಾಗಿ ಯಜ್ಞಕುಂಡದಿಂದ ಗಂಡು ಮಗು ದೃಷ್ಠ್ಯದ್ಯುಮ್ನ ಬರುತ್ತಾನೆ. ದ್ರುಪದ ರಾಜ ಗಂಡು ಸಂತಾನ ಒಂದೇ ಸಾಕೆಂದು ಯಜ್ಞ ತ್ಯಜಿಸಿ ಹೋಗುತ್ತಾನೆ. ಆಗ ಮುನಿಗಳು ಎಷ್ಟು ಬೇಡಿಕೊಂಡರು ದ್ರುಪದ ರಾಜ ಅವರನ್ನು ನಿಂದಿಸಿ ಹೋಗಲು ಸಿದ್ಧನಾಗುತ್ತಾನೆ ಆಗ ಯಜ್ಞದಲ್ಲಿ ಬೆಂಕಿ ಜ್ವಾಲೆ ಹೆಚ್ಚಾಗಿ ಆಕಾಶಕ್ಕೆ ಮುಟ್ಟುತ್ತದೆ. ಈ ಘೋರತೆಯನ್ನು ಕಂಡು ದ್ರುಪದ ರಾಜ ಒಂದು ವಿಚಿತ್ರ ಕೋರಿಕೆಯ ಮೂಲಕ ಯಜ್ಞನಿರತನಗುತ್ತಾನೆ. ಏನೆಂದರೆ ಬರುವ ಸ್ತ್ರೀ ಸಂತಾನ ಹೇಗಿರಬೇಕು ಎಂದರೆ ಅವಳಿಗೆ ಯಾರಿಗೂ ಬರದಂತ ಕಷ್ಟಗಳು ಬರಬೇಕು, ಎಲ್ಲರಿಂದಲೂ ಹಿಯಾಳಿಕೆ, ತಾತ್ಸಾರ, ಆಗಬೇಕು. ಇಷ್ಟಾದರೂ ಅವಳು ಯಾರನ್ನು ದ್ವೇಷಿಸಬಾರದು ಅಂತ ಸ್ತ್ರೀ ಸಂತಾನ ಕೊಡು ಎಂದು ಕೇಳಿ ಯಜ್ಞದಲ್ಲಿ ಪಾಲ್ಗೊಳ್ಳುತ್ತಾನ. ಇದರ ಫಲವೇ ಯಜ್ಞಾಸೇನಿ. ಯಜ್ಞಾಸೇನಿ  ಎಂಬುದು ದ್ರೌಪದಿಯ ಇನ್ನೊಂದು ಹೆಸರು.

ಪಾಂಡುಪುತ್ರರು ಮತ್ತು ದ್ರೌಪದಿಯು ಜನನ-ಮರಣದ ಚಕ್ರದಲ್ಲಿ ಬಂದವರಲ್ಲವಾದ್ದರಿಂದ ಕೃಷ್ಣ ಭಾಗವನಾನು ಇವರ ಮೂಲಕ ಧರ್ಮ ಸ್ಥಾಪಿಸುವನು.


ಇದರಲ್ಲೇನಾದರೂ ತಪ್ಪುಗಳಿದ್ದರೆ, ತಿದ್ದಿಕೊಳ್ಳುವ ಮನಸ್ಸಿದೆ. ತಪ್ಪಿದ್ದರೆ ತಿಳಿಸಿ.