Friday 6 April 2018

ಕಣ್ಣು


ಇದ್ದ ಕಣ್ಣು ನೋಡಲು, ನೋಡಿ ನೋಡಿ ಕೆಟ್ಟಿತು.
ನೋಡಿ ಕೆಟ್ಟ ಕಣ್ಣು ಸುಮ್ಮನಿರಲಾರದೆ
ಮಸ್ತಿಷ್ಕಕ್ಕೆ ದೂಡಿತು.
ಮಸ್ತಿಷ್ಕ ಕೆಟ್ಟು ಸುಮ್ಮನಿರಲಾರದೆ, 
ನಾಲಗೆಗೆ ಹೇಳಿತು
'ಬೈಯಿ, ಬಾಯಿಗೆ ಬಂದಂಗೆ ಬೈಯಿ' ಎಂದು.
ಬೈಯಿತು ಬಾಯಿ ಊರ ಹೊಲಗೇರಿಯೇ ತನ್ನೊಳಗಿರುವಂತೆ !!!
ಕೆಟ್ಟ ಮಸ್ತಿಷ್ಕ ಸುಮ್ಮನಿರದೆ 
ಕೈಗೆ ಹೇಳಿತು
'ಹೊಡಿ, ಹೊಡಿ ಕಲ್ಲು ಎತ್ತಿ ಹಾಕು, ಸಾಯಿಸು'
ನೂರು ಭಾವನೆಗಳೆಲ್ಲ ಸತ್ತವು !!
ಮಸ್ತಿಷ್ಕ ಕೆಟ್ಟು ಕಾಲಿಗೆ ಹೇಳೇ ಬಿಟ್ಟಿತು
'ಒದೆ, ತುಳಿ 'ಎಂದು,
ಎಲ್ಲವೂ ಮುಗಿಯಿತು. ಸುಮ್ಮನೆ ಕುಳಿತ ಮಸ್ತಿಷ್ಕ
ಹುಚ್ಚೆದ್ದು  ನಿಂತಿತು ಕಿವಿ ನಿಮಿರಿಸಿಕೊಂಡು
'ನನಗೆ ಯಾರು ಏನೇನೆಂದರು' ಎಂದು.
ಕಣ್ಣು ಇರಬಾರದಿತ್ತು ನನಗೆ
ಕಣ್ಣು ಬೇಕಿತ್ತು ಕುರುಡಗೆ.
                              ✍ ಸತೀಶ ಉ ನಡಗಡ್ಡಿ

ನನ್ನೂರ ಸಂಜೆ

ಇದು, ಇಂದು ನಾ ಕಂಡ ನನ್ನೂರಿನ ಸೂರ್ಯಾಸ್ತ. ನೀಲಿಯಾಗಸ, ಈಗಷ್ಟೇ ದಿಗಂತದಲ್ಲಿ ಮುಳುಗಿದ ಸೂರ್ಯ. ಹೊನ್ನ ಆಗಸ ಪ್ರಶಾಂತವಾಗಿದೆ. ಅಲ್ಲೊಂದು ಇಲ್ಲೊಂದು ತೆಂಗು, ಬೇವು, ಹುಣಸೆ, ನೀಲಗಿರಿ ಮರಗಳು. ಊರ ಜನರ ದಾಹ ತಣಿವ ಎತ್ತರದ ನೀರಿನ ಟ್ಯಾಂಕು. ಯುಗ ಡಿಜಿಟಲ್ ಆಗಿ, ಮಕ್ಕಳ ಕೈಗೂ ಮೊಬೈಲ್ ಸಿಕ್ಕಿ, 4G ಸ್ಪೀಡಿನಲ್ಲಿ ಬೆಳೆಯುತ್ತಿರುವ ಪೀಳಿಗೆಗೆ ನಿದರ್ಶನವಾಗಿ ನಿಂತ ನೆಟ್ವರ್ಕು ಕಂಬ. ಓಣಿಗೊಂದು ಸಾರ್ವಜನಿಕ ದೀಪದ ಕಂಬ; ಊರು ಬೆಳಗಿದೆ !! ಆದರೂ ಜನ, ಜನರ ಮನಸ್ಸು, ಬುದ್ಧಿಮತ್ತೆ ಇನ್ನೂ ಕತ್ತಲಲ್ಲೆ ಇದೆ: ಅದಕ್ಕೆ ಉದಾಹರಣೆ ಎಂದರೆ, ಹಬ್ಬ ಹರಿದಿನಗಳು ಬಂದಾಗ ಹಾರಾಡುವ ಅವರವರ ಮತದ ಝೇಂಡಾಗಳು.

ಊರ ಬಗ್ಗೆ ಕಾಳಜಿ ಇದೆ, ಆದರೆ ಜನರ ಬಗ್ಗೆ ಸಿಟ್ಟು ಇದೆ. ಮೇಲಿನ ಬಸ್ ಸ್ಟ್ಯಾಂಡಿನಿಂದ ಕೆಳಗಿನ ಹುಣಿಸೆಮರದ ತನಕ ಇರುವ ಮನೆಗಳಲ್ಲೆಲ್ಲ ಒಬ್ಬೊಬ್ಬರು ಶಿಕ್ಷಣ ಪಡೆದು, ಸರಕಾರಿ ನೌಕರಿಯಲ್ಲಿದ್ದರೂ ಅವರ ಬಡತನ ನೀಗಿಲ್ಲ. ಹೆಂಚಿನ ಮನೆಗಳು ಹಾಳುಬಿದ್ದು ಸಿಮೆಂಟಿನ ಸ್ಲ್ಯಾಪ್ ಬಿದ್ದ ಮನೆಗಳು ಮಿಂಚುತ್ತಿವೆ. ಅಲ್ಪ-ಸ್ವಲ್ಪ ಇತಿಹಾಸವನ್ನು ಹೇಳುತ್ತಿದ್ದ ಗುಡಿಗಳೂ, ಮಸೀದಿಗಳೂ ಶಿಕ್ಷಿತ ಮತಾಂಧರ ಕೈಗೆ ಸಿಕ್ಕು ಅಳಿದಿವೆ, ಬೆಳೆದಿವೆ. ಇದು ಬೆಳವಣಿಗೆಯೇ ? ನನಗೂ ಗೊತ್ತಿಲ್ಲಾ. ಮಹಾನ್ ನಾಯಕರುಗಳ ಬಲ ಗೈ ಬಂಟರೆ ಊರಲ್ಲಿದ್ದರೂ 3 ಮೈಲು ದೂರದಲ್ಲಿರುವ ಹೊಳೆಯಿಂದ ಕುಡಿಯಲು ನೀರು ತರಿಸಿಕೊಂಡಿದ್ದನ್ನು ಬಿಟ್ಟರೆ "ಭೂಮಿಗೆ ನೀರು ಬೇಕು" ಎಂದು ಬಹುಶಃ ಇವರಿಗೆ ಅನಿಸಿರಲಿಕ್ಕಿಲ್ಲ. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಜನರು ಬರುತ್ತಿದ್ದುದು ಕಂಡು ಊರು ಬದಲಾಗುತ್ತಿದೆ, ಬದಲಾಗಿದೆ ಅಂದುಕೊಂಡರೆ ಮೂರ್ಖತನದ ಪರಮಾವಧಿ ಆದೀತು. ಬಂದವರೆಲ್ಲ ನೆಂಟರು; ಇದ್ದವರೆಲ್ಲ ಕುಂಟರು, ಸೊಂಟರು, ಕುರುಡರು. ಇಷ್ಟೇ ನನ್ನೂರು.