ನಾನು.. ಹೌದು ನಾನೇ.
ಈ ನಾನು, ಅಂದರೆ -
ಪಂಚ ಮಹಾಭೂತಗಳಿಂದ,
ಪಂಚ ಪದಾರ್ಥಗಳಿಂದ,
ಪಂಚ ಜ್ಞಾನೇಂದ್ರಿಯಗಳಿಂದ,
ಪಂಚ ಕರ್ಮೇಂದ್ರಿಯಗಳಿಂದ
ಮತ್ತು ಮೂರು ಗುಣಗಳಿಂದ
ಆಗಿರುವ ಈ ದೇಹ ಪ್ರಕೃತಿಯ
ಒಳಗೆ ವಾಸವಿರುವ " ಈಶ್ವರ" ನ ಅಂಶ !
ನಾನೇ ದೇವರು, " ಅಹಂ ಬ್ರಹ್ಮಾಸ್ಮಿ " !!!
ಕಣ್ಣು ಮುಚ್ಚಿ ಒಳದೃಷ್ಠಿ ನೆಟ್ಟರೆ -
ಈ ನನ್ನ ದೇಹದೊಳಗೆ ವಾಸವಿರುವ
ಅಸಂಖ್ಯ ಜೀವಕೋಶಗಳು
ನಾನು ಭಕ್ಷಿಸಿದ ಯಾವ ಆಹಾರವ
ತಿಂದು - ತೇಗಿ - ಜೀರ್ಣಿಸಿಕೊಂಡು
ಶಕ್ತಿಯನುತ್ಪಾದಿಸಿ, ತ್ಯಾಜ್ಯ ವಿಸರ್ಜಿಸಿ
ಈ ದೇಹ ದೇವಾಲಯದೊಳಗಿಹ
'ದಿವ್ಯ ಚೇತನ' ದ ಅನಂತದಿರುವಿಕೆಯ ಕಾಣುವೆ;
ಆ ಅಸಂಖ್ಯ ಜೀವಕೋಶಗಳ ಒಟ್ಟು ಮೊತ್ತ - ನಾನು !!
ಅವುಗಳಿಂದ ನಾನು, ನನ್ನಿಂದ ಅವುಗಳು : " ತತ್ವಮಸಿ".
ಮತ್ತೆ ಕಣ್ದೆರೆದು ಹೊರದೃಷ್ಟಿ ಬೀರಿದರೆ -
ನಭಕ್ಕೆ ಚಿಮ್ಮಿ, ನೆಗೆದು ವ್ಯೋಮಕ್ಕೆ
ಅಂತ್ಯವಿರದಂಬರವ ಛೇದಿಸುವೆನು;
ಅದೋ ಕತ್ತಲು, ಕತ್ತಲು, ಸುತ್ತಲೂ ಕತ್ತಲು !
ಮೂಲವೆಲ್ಲಿ ? ಕೊನೆ ಎಲ್ಲಿ ? ಅದಿ - ಅಂತ್ಯಗಳಿರದ ಅನಂತತೆ;
ದೈವನ ದಕ್ಕಿಸಿಕೊಳ್ಳಲು ಧಾವಿಸುತಿಹೆನು;
ದಿವ್ಯ ಚಕ್ಷುವನು ದಯಪಾಲಿಸಿ ದಾರಿ ತೋರು,
ಮಹಾಸಾಗರದ ಗರ್ಬದೊಳಗಿನ ಸೂಕ್ಷ್ಮಾತಿ ಸೂಕ್ಷ್ಮ ಕ್ರಿಮಿ ನಾನು.
ನಿನ್ನೊಳಗೆ ನಾನು, ನನ್ನೊಳಗೆ ನೀನು - "ಕೃಷ್ಣ ಕೃಷ್ಣ".